ಹಣ ದುರುಪಯೋಗ ಆರೋಪ; ಬಿಲ್ಡಿಂಗ್ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನ
ಚಿಕ್ಕಮಗಳೂರು, ಡಿಸೆಂಬರ್ 21: ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಮಿತಿಯಲ್ಲಿ ಮೂವತ್ತು ಲಕ್ಷ ರೂ. ಹಣ ದುರುಪಯೋಗ ಆರೋಪ ಕೇಳಿ ಬಂದ ಹಿನ್ನೆಲೆ ಸಹಕಾರ ಮಾರಾಟ ಸಮಿತಿಯ ಮಾಜಿ ಅಧ್ಯಕ್ಷ ಬಿಲ್ಡಿಂಗ್ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಮೂಡಿಗೆರೆ ತಾಲೂಕಿನ ಮಗ್ಗಲಮಕ್ಕಿ ಲಕ್ಷ್ಮಣ ಗೌಡ ಎಂದು ಗುರುತಿಸಲಾಗಿದೆ. ಮೂಡಿಗೆರೆ ತಾಲೂಕಿನ ಮಗ್ಗಲಮಕ್ಕಿ ಗ್ರಾಮದ ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಮಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಮೇಲೆ ಮೂವತ್ತು ಲಕ್ಷ ಹಣ ದುರುಪಯೋಗದ ಆರೋಪ ಕೇಳಿ ಬಂದಿತ್ತು.
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿಟ್ಟ ಪ್ರಕರಣಕ್ಕೆ ಹೊಸ ತಿರುವು
ಹಣ ದುರುಪಯೋಗ ಆರೋಪ ಕೇಳಿ ಬಂದ ಹಿನ್ನೆಲೆ ಸೋಮವಾರ ಎಪಿಎಂಸಿಯ ರೈತ ಭವನದಲ್ಲಿ ನಡೆಯುತ್ತಿದ್ದ ಸಹಕಾರ ಸಮಿತಿಯ ಸಭೆಯಲ್ಲಿ ಲಕ್ಷ್ಮಣ ಗೌಡರಿಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ಇದರಿಂದ ಮನನೊಂದು ಆಕ್ರೋಶಗೊಂಡ ಲಕ್ಷ್ಮಣ ಗೌಡ, ನಾನು ಹಣ ದುರುಪಯೋಗ ಮಾಡಿಕೊಂಡಿಲ್ಲ, ನೀವೆಲ್ಲಾ ನನ್ನ ಮೇಲೆ ಆರೋಪ ಮಾಡುತ್ತಿದ್ದೀರಾ, ನಾನು ಸಾಯುತ್ತೇನೆ ಎಂದು ಏಕಾಏಕಿ ರೈತ ಭವನದ ಕಟ್ಟಡ ಏರಿದ್ದಾರೆ.
ಈ ವೇಳೆ ಕಟ್ಟಡ ಏರಿದ್ದ ಲಕ್ಷ್ಮಣ ಗೌಡರನ್ನು ಕೆಳಗಿಳಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೂಡಿಗೆರೆ ಪೊಲೀಸರು ಕೂಡ ಬಿಲ್ಡಿಂಗ್ ಏರಿದ್ದ ಲಕ್ಷ್ಮಣ ಅವರನ್ನ ಕೆಳಗಿಳಿಸಲು ಹರಸಾಹಸಪಟ್ಟರು. ಬಳಿಕ ಸುಮಾರು ಒಂದು ಗಂಟೆಯ ಬಳಿಕ ಕಟ್ಟಡ ಏರಿದ್ದ ವ್ಯಕ್ತಿಯ ಗಮನವನ್ನು ಬೇರೆಡೆ ಸೆಳೆದು, ಹಿಂದೆಯಿಂದ ಇಬ್ಬರು ಯುವಕರು ಹೋಗಿ ವ್ಯಕ್ತಿಯನ್ನು ಹಿಡಿದು ಲಾಕ್ ಮಾಡಿ ರಕ್ಷಿಸಿದ್ದಾರೆ.
ನಂತರ ಸಭೆಯಲ್ಲಿ ಭಾಗಿಯಾದ ಲಕ್ಷ್ಮಣಗೌಡ ನನ್ನನ್ನು ಎಲ್ಲರೂ ಸೇರಿ ಸಾಯಿಸುವುದಕ್ಕೆ ಹೊರಟಿದ್ದೀರಾ ಎಂದು ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿ, ನೂಕಾಟ-ತಳ್ಳಾಟ ಕೂಡ ನಡೆಯಿತು. ಸ್ಥಳೀಯರು ಹಾಗೂ ಸಭೆಯಲ್ಲಿ ನೆರೆದಿದ್ದ ಸದಸ್ಯರು ನೀವು ಹಿರಿಯರು, ಬುದ್ಧಿ ಹೇಳಬೇಕಾದವರು. ನೀವೇ ಹೀಗೆ ಮಾಡಿದ್ದು ಸರಿಯಲ್ಲ ಎಂದು ಲಕ್ಷ್ಮಣ ಗೌಡರನ್ನು ತರಾಟೆಗೆ ತೆಗೆದುಕೊಂಡರು.