ದರ್ಗಾದೊಳಗೆ ಫೋಟೊ; ಸಚಿವ ಸಿ.ಟಿ.ರವಿ ಮೇಲೆ ನಿಯಮ ಉಲ್ಲಂಘನೆ ಆರೋಪ
ಚಿಕ್ಕಮಗಳೂರು, ಸೆಪ್ಟೆಂಬರ್ 28: ಸಚಿವ ಸಿ.ಟಿ.ರವಿ ಇಂದು ದತ್ತ ಪಾದುಕೆ ದರ್ಶನ ಮಾಡಲು ಬಾಬಾಬುಡನ್ ಗಿರಿಯ ಸ್ವಾಮಿ ದರ್ಗಾಗೆ ತೆರಳಿದ್ದು, ದರ್ಗಾದಲ್ಲಿ ಫೋಟೊ ತೆಗೆಸಿಕೊಂಡು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಿನ್ನೆಲೆ ಇಂದು ಸಚಿವ ಸಿ.ಟಿ.ರವಿ ಅವರು ದತ್ತಪೀಠಕ್ಕೆ ತೆರಳಿದ್ದರು. ಇದೇ ವೇಳೆ ಅಲ್ಲಿ ನಮಸ್ಕಾರ ಮಾಡುತ್ತಿರುವ ಅವರ ಫೋಟೊವನ್ನು ಕ್ಲಿಕ್ಕಿಸಲಾಗಿದೆ. ಸಚಿವರು ದರ್ಗಾದಲ್ಲಿರುವ ಫೋಟೊಗಳು ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿವೆ.
ಸದ್ಯ ಇನಾಂ ದತ್ತಪೀಠದ ವಿಚಾರ ಕೋರ್ಟ್ ನಲ್ಲಿದ್ದು, ಯಾವುದೇ ಫೋಟೊ, ವಿಡಿಯೋ ಮಾಡದಂತೆ ಕೋರ್ಟ್ ಆದೇಶಿಸಿದೆ. ಆದರೆ ಇಂದು ಸಚಿವ ಸಿ.ಟಿ.ರವಿ ದತ್ತಪೀಠದ ಒಳಗೆ ಇರುವ ಫೋಟೊ, ವಿಡಿಯೋ ತೆಗೆಸಿಕೊಂಡಿದ್ದು, ಆ ಫೋಟೊಗಳನ್ನು ವಾಟ್ಸಪ್ ಗ್ರೂಪನಲ್ಲಿ ಶೇರ್ ಮಾಡಿ, ನಂತರ ಅವರು ಅವೆಲ್ಲವನ್ನೂ ಡಿಲೀಟ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಚಿವರ ನಡೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ; ಸಿ. ಟಿ. ರವಿ ಹೇಳಿದ್ದೇನು?
ಜನತೆ ಬಂದ್ ತಿರಸ್ಕರಿಸಿದ್ದಾರೆ: "ಜನತೆ ಬಂದ್ ಅನ್ನು ತಿರಸ್ಕಾರ ಮಾಡಿದ್ದಾರೆ, ರೈತರು ನಮ್ಮ ಜೊತೆ ಇದ್ದಾರೆ. ಇಂದು ಕಾಂಗ್ರೆಸ್, ದಳ ದಲ್ಲಾಳಿಗಳ ಪರ ಹೋರಾಟ ಮಾಡಿದ್ದಾರೆ. ದಲ್ಲಾಳಿಗಳ ಪರ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ಇಂದಿನ ಬಂದ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ ಸಚಿವ ಸಿ.ಟಿ.ರವಿ.
"ಮೊದಲು ದಲ್ಲಾಳಿಗಳು ಬಲಿತುಕೊಂಡಿದ್ದರು. ಈಗ ರೈತ ಬಲಿತುಕೊಳ್ಳುತ್ತಾನೆ. ಶೇಕಡ 90ರಷ್ಟು ರೈತರು ಬಿಜೆಪಿ ಜೊತೆ ಇದ್ದಾರೆ. ಹಾಗಾಗಿ ಯಾರು ಕೂಡ ಇಂದು ಬೀದಿಗೆ ಇಳಿದಿಲ್ಲ. ಬಿಜೆಪಿಯನ್ನು ವಿರೋಧಿಸುವ ಒಂದು ವರ್ಗದ ಜನ ಇಂದು ಬೀದಿಗಿಳಿದಿದ್ದಾರೆ" ಎಂದು ಹೇಳಿದರು.