ಶೃಂಗೇರಿಯಲ್ಲಿ ನಟಿ ರಚಿತಾ ರಾಮ್; ದೇವೇಗೌಡರ ಕುಟುಂಬದ ಯಾಗಕ್ಕೆ ಬಂದ್ರಾ?
ಚಿಕ್ಕಮಗಳೂರು, ಜನವರಿ 21: ನಟಿ ರಚಿತಾ ರಾಮ್ ಇಂದು ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ. ಅಚಾನಕ್ಕಾಗಿ ಭೇಟಿ ಕೊಟ್ಟ ರಚಿತಾ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಅವರು ದೇವಸ್ಥಾನಕ್ಕೆ ಬರುತ್ತಿದ್ದಾಗಲೇ, ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದರು.
ಇಂದು ಶೃಂಗೇರಿಯಲ್ಲಿ ದೇವೇಗೌಡರ ಇಡೀ ಕುಟುಂಬ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಭಾಗಿಯಾಗಿದೆ. ರಾಜಕೀಯ ಪಕ್ಷದ ಬಲವರ್ಧನೆ, ರಾಜಕೀಯ ಭವಿಷ್ಯ, ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಶಕ್ತಿ ದೇವತೆ ಶೃಂಗೇರಿ ಶಾರದೆಯ ಮೊರೆ ಹೋಗಿರುವ ಎಚ್ ಡಿ ದೇವೇಗೌಡರ ಕುಟುಂಬದವರು ಇಂದು ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದುಕೊಂಡರು.
ಶೃಂಗೇರಿಯಲ್ಲಿ ದೇವೇಗೌಡರಿಂದ ಸಹಸ್ರ ಚಂಡಿಕಾ ಯಾಗ: ಪಕ್ಷದ ಬಲವರ್ಧನೆಗೆ ಮುಂದಾದರಾ ಎಚ್ ಡಿಡಿ
ವಿಶೇಷ ಹೋಮ ಮಾಡಿಸುವ ಸಲುವಾಗಿ ಎಚ್.ಡಿ.ದೇವೇಗೌಡರು ಕಳೆದ ಗುರುವಾರದಿಂದಲೇ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿಯಿದ್ದು, ದೇವಾಲಯದ ಯಾಗ ಮಂಟಪದಲ್ಲಿ ನಡೆಯುತ್ತಿರುವ ಯಾಗದಲ್ಲಿ ದೇವೇಗೌಡರು ಹಾಗೂ ಅವರ ಪತ್ನಿ ಚನ್ನಮ್ಮ ಇದ್ದರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್ ಡಿ ರೇವಣ್ಣ ಕುಟುಂಬ ಆಗಮಿಸಿದೆ. ಯಾಗಮಂಟಪದಲ್ಲಿ ಪೂರ್ಣಾಹುತಿ ನಡೆಯುತ್ತಿದ್ದು, 110ಕ್ಕೂ ಅಧಿಕ ಋತ್ವಿಜರು 8 ಯಜ್ಞ ಕುಂಡದಲ್ಲಿ ಹೋಮ ನಡೆಸುತ್ತಿದ್ದಾರೆ.
ನಟಿ ರಚಿತಾ ಅವರೂ ಅಚಾನಕ್ಕೆಂಬಂತೆ ಶೃಂಗೇರಿಗೆ ಬಂದಿದ್ದು, ದೇವೇಗೌಡರ ಪೂಜೆಗೆ ಬಂದಿರುವರೇ ಎಂಬ ಪ್ರಶ್ನೆ ಮೂಡಿತ್ತು. ಅವರು ನೇರ ದೇವಸ್ಥಾನದಲ್ಲಿ ದರ್ಶನ ಪಡೆದು, ಹೊರನಾಡು ಅನ್ನಪೂರ್ಣೆಯ ದರ್ಶನಕ್ಕೆ ತೆರಳಿದರು.