ಸಂಚಾರ ಮುಗಿಸಿ ಮಣ್ಣಿನಲ್ಲಿ ಲೀನವಾದ ನಟ ಸಂಚಾರಿ ವಿಜಯ್
ಚಿಕ್ಕಮಗಳೂರು, ಜೂನ್ 15; ರಾಷ್ಟ್ರ ಪ್ರಶಸ್ತಿ ವಿಜೇತ ನಟ, ರಂಗಭೂಮಿ ಕಲಾವಿದ ಸಂಚಾರಿ ವಿಜಯ್ ಅಂತ್ಯಕ್ರಿಯೆ ಮಂಗಳವಾರ ಕಾಫಿನಾಡು ಬಯಲು ಸೀಮೆಯ ತೆಂಗು, ಬಾಳೆಯ ಹಸಿರಿನ ನಡುವೆ ವೀರಶೈವ ಲಿಂಗಾಯತ ಸಂಪ್ರದಾದಂತೆ ಸಕಲ ಸರ್ಕಾರಿ ಗೌರವದೊಂದಿಗೆ ನೇರವೇರಿತು.
Recommended Video
ಮಂಗಳವಾರ ಬೆಳಗ್ಗೆ 8 ಗಂಟೆಯಿಂದ 10ಗಂಟೆವರೆಗೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ನಂತರ ಅಂಬ್ಯುಲೆನ್ಸ್ ಮೂಲಕ ತುಮಕೂರು ಜಿಲ್ಲೆ ಶಿರಾ ಮಾರ್ಗವಾಗಿ ಹುಟ್ಟೂರು ಪಂಚನಹಳ್ಳಿಗೆ ತರಲಾಯಿತು.
ಸರ್ಕಾರಿ ಗೌರವಗಳೊಂದಿಗೆ ಸಂಚಾರಿ ವಿಜಯ್ ಅಂತ್ಯಸಂಸ್ಕಾರ
ಬೆಂಗಳೂರಿನಿಂದ ಚಿಕ್ಕಮಗಳೂರಿನ ಕಡೂರಿಗೆ ತರುವಾಗ ಮಾರ್ಗ ಮಧ್ಯೆ ಹುಳಿಯಾರ ಬಳಿ ಕೆಲನಿಮಿಷ ಕಾಲ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅಲ್ಲಿಂದ ನೇರವಾಗಿ ಪಾರ್ಥಿವ ಶರೀರವನ್ನು ಪಂಚನಹಳ್ಳಿ ಗ್ರಾಮಕ್ಕೆ ತರಲಾಯಿತು.
ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸಾವಿಗೆ ರಾಜಕೀಯ ಗಣ್ಯರ ಸಂತಾಪ
ಮಧ್ಯಾಹ್ನ 3 ಗಂಟೆಗೆ ಸಂಚಾರಿ ವಿಜಯ್ ಪಾರ್ಥಿವ ಶರೀರ ಅಂತ್ಯಕ್ರಿಯೆ ನಡೆಯುವ ಸ್ಥಳ ತಲುಪಿತು. ಹುಟ್ಟೂರು ಪಂಚನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುವುದಾಗಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀರ್ಮಾನಿಸಿದ್ದರು. ಸಂಚಾರಿ ವಿಜಯ್ ಸ್ನೇಹಿತ ರಘು ತೋಟದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳನ್ನು ನಡೆಸಲಾಗಿತ್ತು.
ವ್ಯಕ್ತಿಚಿತ್ರ: ಬದುಕಿನ ಸಂಚಾರ ಮುಗಿಸಿದ ವಿಜಯ್ ಬೆಳೆದು ಬಂದ ದಾರಿ
ಆಕ್ರಂದನ ಮುಗಿಲು ಮುಟ್ಟಿತ್ತು
ಪಾರ್ಥಿವ ಶರೀರವನ್ನು ಸ್ನೇಹಿತ ರಘು ತೋಟಕ್ಕೆ ತರುತ್ತಿದ್ದಂತೆ ಕುಟುಂಬಸ್ಥರು, ಸ್ನೇಹಿತರು ಮತ್ತು ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿತ್ತು. ತೋಟದ ಆವರಣದಲ್ಲಿ ನಟ ವಿಜಯ್ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಅಂತಿಮ ದರ್ಶನ ಪಡೆಯಲು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ವ್ಯವಸ್ಥೆ ಕಲ್ಪಿಸಿತ್ತು. ಆಪ್ತರು ಕೆಲಕಾಲ ಅಂತಿಮ ದರ್ಶನವನ್ನು ಪಡೆದುಕೊಂಡರು.
ಸಂಪ್ರದಾಯಿಕ ವಿಧಿವಿಧಾನ
ಕುಪ್ಪೂರು ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಂಚಾರಿ ವಿಜಯ್ ಸಹೋದರರಾದ ಸಿದ್ಧೇಶ್ ಹಾಗೂ ವೀರೂಪಾಕ್ಷ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಬಿಲ್ವಪತ್ರೆ, ವಿಭೂತಿ, ಪಂಚಕಳಸ ಇಟ್ಟು ಪೂಜೆ ಸಲ್ಲಿಸಿ ವಿಧಿವಿಧಾನಗಳನ್ನು ನೆರವೇರಿಸಿದರು. ನಂತರ ಪಾರ್ಥಿವ ಶರೀರವನ್ನು ಶಾಸ್ತ್ರೋಕ್ತವಾಗಿ ಮಣ್ಣಿನಿಂದ ಮುಚ್ಚಲಾಯಿತು. ಸದಾ ಕಷ್ಟದಲ್ಲಿದ್ದವರ ನೆರವಿಗಾಗಿ ಮಿಡಿಯುತ್ತಿದ್ದ ವಿಜಯ್ ಶರೀರ ಮಣ್ಣಿನಲ್ಲಿ ಲೀನವಾಯಿತು.
ಹಲವಾರು ಗಣ್ಯರು ಭಾಗಿ
ಅಂತ್ಯ ಸಂಸ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಚಲನಚಿತ್ರ ನಟ ನಿನಾಸಂ ಸತೀಶ್, ರಂಗಭೂಮಿ ಕಲಾವಿದೆ ಎಸ್.ಮಂಗಳಾ, ನಟ ಶಿವರಾಜ್ ಕೆ. ಆರ್. ಪೇಟೆ, ಮಾಜಿ ಶಾಸಕ ವೈಎಸ್ವಿ ದತ್ತ, ಜಿಲ್ಲಾಧಿಕಾರಿ ಕೆ. ಎನ್.ರಮೇಶ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಎಚ್. ಅಕ್ಷಯ್, ಕುಟುಂಬಸ್ಥರು, ಗ್ರಾಮಸ್ಥರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಸಕಲ ಸರ್ಕಾರಿ ಗೌರವ
ನಟ ಸಂಚಾರಿ ವಿಜಯ್ ಶವಸಂಸ್ಕಾರಕ್ಕೂ ಮುನ್ನ ಮೃತದೇಹಕ್ಕೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕೆ. ಎನ್. ರಮೇಶ್, ಎಸ್ಪಿ ಎಂ. ಎಚ್. ಅಕ್ಷಯ್, ಸಚಿವ ಮಾಧುಸ್ವಾಮಿ ಸಮ್ಮುಖದಲ್ಲಿ ಪೊಲೀಸರು ಸ್ಥಳದಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಿದರು.
ವಿಜಯ್ ಮೃತದೇಹ ಗ್ರಾಮಕ್ಕೆ ಬರುತ್ತಿದೆ ಎಂದು ಗೊತ್ತದ ಕೂಡಲೇ ಸುತ್ತಮುತ್ತಲ ಗ್ರಾಮಸ್ಥರು, ಸ್ನೇಹಿತರು, ಅಭಿಮಾನಿಗಳು ಪಂಚನಹಳ್ಳಿಯ ಕಡೆಗೆ ಮುಖಮಾಡಿದ್ದರು. ಕೋವಿಡ್ ಹಿನ್ನೆಲೆ ಸಿಮೀತ ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು, ಜನರು ಸೇರುವುದನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಪಂಚನಹಳ್ಳಿಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಅಂತಿಮ ದರ್ಶನಕ್ಕೆ ದೂರದ ಊರುಗಳಿಂದ ಆಗಮಿಸಿದ್ದ ಅಭಿಮಾನಿಗಳಿಗೆ ನಟನನ್ನು ನೋಡಲು ಸಾಧ್ಯವಾಗಲಿಲ್ಲ.
ಅಗಲಿದ ನಟನಿಗೆ ಗ್ರಾಮಸ್ಥರ ವಿದಾಯ
ತನ್ನೂರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಊರಿನ ಗೌರವ ಹೆಚ್ಚಿಸಿದ್ದ ಸಂಚಾರಿ ವಿಜಯ್ಗೆ ಊರಿನಲ್ಲಿ ಮೊದಲಿನಿಂದಲೂ ಸ್ನೇಹಿತರ ಬಳಗವೂ ಇತ್ತು. ಈ ಹಿನ್ನೆಲೆಯಲ್ಲಿ ವಿಜಯ್ ಪಾರ್ಥಿವ ಶರೀರದ ದರ್ಶನಕ್ಕೆ ಗ್ರಾಮಸ್ಥರಿಗೆ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಕೋವಿಡ್ ಕಾರಣ ಜಿಲ್ಲಾಡಳಿತ ಸಾರ್ವಜನಿಕ ದರ್ಶನಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆ, ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲು ಅವಕಾಶ ಕಲ್ಪಿಸಲಾಯಿತು. ಈ ವೇಳೆ ಜನರು ಹೂವಿನ ಹಾರ ಸಮರ್ಪಿಸಿ ತನ್ನೂರಿನ ಹುಡುಗನಿಗೆ ಅಂತಿಮ ವಿದಾಯ ಹೇಳಿದರು.