ಚಿಕ್ಕಮಗಳೂರು: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ
ಚಿಕ್ಕಮಗಳೂರು, ನವೆಂಬರ್ 23: ಪ್ರಿಯಕರನೊಂದಿಗಿದ್ದ ವೇಳೆ ಪತಿ ಕೈಗೆ ಸಿಕ್ಕಿಬಿದ್ದ ಪತ್ನಿಯು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ದೊಡ್ಡಹಟ್ಟಿ ಗ್ರಾಮದಲ್ಲಿ ವರದಿಯಾಗಿದೆ.
ಸಖರಾಯಪಟ್ಟಣ ಹೋಬಳಿಯ ದೊಡ್ಡಹಟ್ಟಿ ಗ್ರಾಮದಲ್ಲಿ ಪ್ರದೀಪ್ ಹಾಗೂ ರಾಗಿಣಿ ಎಂಬ ದಂಪತಿ ಕಳೆದ ಯೋಗೇಂದ್ರ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಿದ್ದು, ರಾಗಿಣಿ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು.
ಚಿಕ್ಕಮಗಳೂರು; ಕ್ವಾಟರ್ಸ್ಗೆ ಮಹಿಳೆ ಕರೆಸಿಕೊಂಡ ಅರಣ್ಯಾಧಿಕಾರಿ ಮೇಲೆ FIR
ರವಿವಾರ ರಾತ್ರಿ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರ ಶ್ರೀನಿವಾಸ್ ಎಂಬಾತನೊಂದಿಗೆ ಇದ್ದ ದೃಶ್ಯವನ್ನು ಕಂಡ ರಾಗಿಣಿ ಪತಿ ಪ್ರದೀಪ್ ಕುಪಿತಗೊಂಡಿದ್ದಾನೆ. ಈ ವೇಳೆ ಪತ್ನಿ ಹಾಗೂ ಆಕೆಯ ಪ್ರಿಯಕರ ಇಬ್ಬರೂ ಸೇರಿಕೊಂಡು ಪ್ರದೀಪ್ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಸೋಮವಾರ ಬೆಳಗ್ಗೆ ನೆರೆ ಮನೆಯಲ್ಲೇ ವಾಸವಿದ್ದ ಯೋಗೇಂದ್ರ ಎಂಬುವವರು ಪ್ರದೀಪ್ ಮನೆ ಬಳಿ ನೋಡಿದಾಗ ಪ್ರದೀಪ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರದೀಪನ ಎರಡು ಕಣ್ಣುಗಳ ರೆಪ್ಪೆಯನ್ನೇ ಕಿತ್ತುಹಾಕಿದ್ದಲ್ಲದೇ, ತೀವ್ರ ಹಲ್ಲೆ ಮಾಡಿರುವುದು ಕಂಡು ಬಂದಿದ್ದರಿಂದ ಕೂಡಲೇ ಅವರು ಸಖರಾಯಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಕಡೂರು ಸಿಪಿಐ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚೀಂದ್ರ ಭೇಟಿ ನೀಡಿ ಪರಿಶೀಲಿಸಿದರು. ನಂತರ ದೂರು ದಾಖಲಿಸಿಕೊಂಡು ಆರೋಪಿಗಳಾದ ರಾಗಿಣಿ ಹಾಗೂ ಶ್ರೀನಿವಾಸ್ ನನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.