ಚಿಕ್ಕಮಗಳೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು, ಹೆಂಡತಿ ಆತ್ಮಹತ್ಯೆ
ಚಿಕ್ಕಮಗಳೂರು, ನವೆಂಬರ್ 3: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು, ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದರೆ, ಗಂಡನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವಿನಿಂದ ಪಾರಾದ ಘಟನೆ ಚಿಕ್ಕಮಗಳೂರು ನಗರದ ಕೆಂಪನಹಳ್ಳಿಯಲ್ಲಿ ನಡೆದಿದೆ.
ಮೃತಳನ್ನು 23 ವರ್ಷದ ರಂಜಿತಾ ಎಂದು ಗುರುತಿಸಲಾಗಿದ್ದು, ವಿಷ ಸೇವಿಸಿದ್ದ ಪತಿ ಅರುಣ್ ಸಾವಿನಿಂದ ಪಾರಾಗಿದ್ದಾನೆ. ಮೂಲತಃ ಕಡೂರು ತಾಲೂಕಿನ ಬೀರೂರು ಸಮೀಪದ ಹೊಗರೆಹಳ್ಳಿಯ ರಂಜಿತಾಳನ್ನ ಮೂರು ವರ್ಷದ ಹಿಂದೆ ಚಿಕ್ಕಮಗಳೂರು ನಗರದ ಅರುಣ್ ಜೊತೆ ಮದುವೆ ಮಾಡಿಕೊಡಲಾಗಿತ್ತು.
ಅರುಣ್ ಮದುವೆ ಮುಂಚೆಯಿಂದಲೂ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧವಿತ್ತು, ಅರುಣ್ ಹಾಗೂ ಆ ಮಹಿಳೆಯ ಕಿರುಕುಳದಿಂದಲೇ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೃತ ರಂಜಿತಾ ಪೋಷಕರು ಆರೋಪಿಸಿದ್ದಾರೆ.
ಮದುವೆಯಾಗಿ ಮೂರು ವರ್ಷವಾಗಿದ್ದರೂ ಒಂದೇ ಒಂದು ದಿನ ರಂಜಿತಾಳನ್ನು ತವರಿಗೆ ಕಳಿಸಿದ್ದನಂತೆ ಅರುಣ್. ಅದು ಕೂಡ 24 ಗಂಟೆ ಮಾತ್ರ. ಅಷ್ಟೆ ಅಲ್ಲದೆ, ಅರುಣ್ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಜೊತೆ ಇದ್ದ ಫೋಟೋ ಹಾಗೂ ವಿಡಿಯೋಗಳಿದ್ದ ಪೆನ್ ಡ್ರೈವ್ ರಂಜಿತಾಳಿಗೆ ಸಿಕ್ಕು, ಆಕೆ ವಿಷಯವನ್ನು ಹೆತ್ತವರು ಹಾಗೂ ಅಣ್ಣಂದಿರ ಗಮನಕ್ಕೂ ತಂದಿದ್ದಳು.
ಆಗ ಅರುಣ್, ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು, ರಂಜಿತಾಳ ತಂದೆ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದನಂತೆ. ಆದರೆ, ಅವರಿಬ್ಬರ ಮಾನಸಿಕ ಕಿರುಕುಳದಿಂದಲೇ ಮಗಳು ಸಾವನ್ನಪ್ಪಿದ್ದಾಳೆಂದು ಆರೋಪಿಸಿರುವ ಪೋಷಕರು, ಅರುಣ್ ನನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದ್ದಾರೆ.
ಸೋಮವಾರ ಸಂಜೆ 4 ಗಂಟೆಗೆ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದ ರಂಜಿತಾ, ಕುಣಿಕೆಯ ಗಂಟು ಬಿಗಿ ಆದ ಮೇಲೆ ನನ್ನನ್ನು ಉಳಿಸು ಅಂತ ಅಣ್ಣನಿಗೆ ಕರೆ ಮಾಡಿದ್ದಾಳೆ. ಅಣ್ಣ ಬರುವಷ್ಟರಲ್ಲಿ ರಂಜಿತಾಳ ಮೃತಪಟ್ಟಿದ್ದಳು. ಹಳ್ಳಿಯಲ್ಲಿ ನಿರ್ಮಿಸುತ್ತಿರುವ ಮನೆಯಲ್ಲಿದ್ದ ಅರುಣ್, ಒಂದು ಕೇಸ್ ಬಿಯರ್ ನಲ್ಲಿ 9 ಬಾಟಲಿ ಕುಡಿದು ಮೂರನ್ನು ಹಾಗೇ ಉಳಿಸಿಕೊಂಡಿದ್ದ.
ರಂಜಿತಾ ಅಣ್ಣಂದಿರು ಹೋಗಿ ವಿಷಯ ತಿಳಿಸಿದಾಗ, ಕೈಯಲ್ಲಿ ಸಿಗರೇಟ್ ಹಿಡಿದು ನಾನೂ ವಿಷ ಕುಡಿದಿದ್ದೇನೆ ಎಂದನಂತೆ. ಅವನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತ ಸಾವಿನಿಂದ ಪಾರಾಗಿದ್ದಾನೆ. ಆದರೆ, ರಂಜಿತಾ ಎರಡು ವರ್ಷದ ಮಗುವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Recommended Video
ಇದೀಗ ರಂಜಿತಾ ಪೋಷಕರು ಅರುಣ್, ಆತನ ಪೋಷಕರು ಹಾಗೂ ಆ ಮಹಿಳೆ ವಿರುದ್ಧ ದೂರು ನೀಡಿದ್ದು, ಚಿಕ್ಕಮಗಳೂರಿನ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.