ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಅವಕಾಶ ನೀಡುತ್ತಿಲ್ಲ: ಮಗನ ಕಣ್ಣೀರು
ಚಿಕ್ಕಮಗಳೂರು, ಏಪ್ರಿಲ್ 14: ತನ್ನ ಕ್ಯಾನ್ಸರ್ ಪೀಡಿತ ತಾಯಿಗೆ ಚಿಕಿತ್ಸೆ ಕೊಡಿಸಲಾಗದೆ ಮಗ ಕಣ್ಣೀರು ಹಾಕುತ್ತಿದ್ದಾರೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸದಲ್ಲಿ ನಡೆದಿದೆ.
75 ವರ್ಷ ಸುಶೀಲಮ್ಮ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಇವರ ಚಿಕಿತ್ಸೆಗಾಗಿ ಮಗ ಮಂಗಳೂರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ, ಈ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಾಯಿ, ಮಗಳು ಮತ್ತು ಪಾಸ್: ಲಾಕ್ಡೌನ್ನಲ್ಲಿ ಬೆಂಗಳೂರಿನ ಭಾವನಾತ್ಮಕ ಘಟನೆ
ಕಿಮೋಥೆರಪಿಗಾಗಿ ಸುಶೀಲಮ್ಮರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿದೆ. ಆದರೆ, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ತಾಯಿಯನ್ನು ಕರೆದುಕೊಂಡು ಮಂಗಳೂರಿಗೆ ಹೊರಟಿದ್ದ ಜಗದೀಶ್ ಭಟ್ರನ್ನು ಬಸ್ರಿಕಲ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಡೆದಿದ್ದಾರಂತೆ.
ಲಾಕ್ಡೌನ್ ಇರುವ ಕಾರಣ ಪೊಲೀಸರು ಅನಗತ್ಯ ಓಡಾಟಕ್ಕೆ ನಿಯಂತ್ರಣ ತಂದಿದ್ದಾರೆ. ಆದರೆ, ಇಲ್ಲಿ ಕ್ಯಾನ್ಸರ್ ರೋಗದ ಚಿಕಿತ್ಸೆ ಇದ್ದರೂ, ಅವಕಾಶ ನೀಡಿಲ್ಲ. ಹೀಗಾಗಿ, ದಯಮಾಡಿ ತಾಯಿಗೆ ಚಿಕಿತ್ಸೆ ಕೊಡಿಸಲು ಅವಕಾಶ ಮಾಡಿಕೊಡಿ ಎಂದು ಜಗದೀಶ್ ಮನವಿ ಮಾಡಿದ್ದಾರೆ.
ತಾಯಿಯ ಜೊತೆಗೆ ಕುಳಿತು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಅಮ್ಮನಿಗೆ ಚಿಕಿತ್ಸೆ ಕೊಡಿಸಲು ಅವಕಾಶ ಮಾಡಿಕೊಡಿ ಎಂದು ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ.