ಚಿಕ್ಕಮಗಳೂರಲ್ಲಿ ಅಪರೂಪದ ಪುನುಗು ಬೆಕ್ಕನ್ನು ರಕ್ಷಿಸಿದ ಛಾಯಾಗ್ರಾಹಕ
ಚಿಕ್ಕಮಗಳೂರು, ಫೆಬ್ರವರಿ 11: ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದ ಅಪರೂಪದ ಪ್ರಾಣಿಯಾದ ಪುನುಗು ಬೆಕ್ಕನ್ನು ವೈಲ್ಡ್ ಲೈಫ್ ಫೋಟೋಗ್ರಾಫರ್ ಹಾಗೂ ಪತ್ರಕರ್ತ ಶಿವಕುಮಾರ್ ಹಿರೇಗೌಜ ಅವರು ರಕ್ಷಣೆ ಮಾಡಿ ಅರಣ್ಯ ಇಲಾಖಾ ಅಧಿಕಾರಿಗಳಿಗೆ ನೀಡಿದ್ದಾರೆ.
ನಿನ್ನೆ ರಾತ್ರಿ ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಭಾಗದಲ್ಲಿ ಕಣಿಸಿಕೊಂಡು ಪುನುಗು ಬೆಕ್ಕನ್ನು ನಾಯಿಗಳು ಭೇಟೆಯಾಡಲು ಪ್ರಯತ್ನಿಸಿವೆ. ಇದರಿಂದ ನಿತ್ರಾಣಗೊಂಡ ಬೆಕ್ಕು, ಅಲ್ಲಿನ ಸ್ಥಳೀಯರ ಮನೆಯ ಹಿತ್ತಲಲ್ಲಿ ಸೇರಿಕೊಂಡಿದೆ.
ಚಿಕ್ಕಮಗಳೂರಿನಲ್ಲಿ ಮೀನಿಗೆಂದು ಬಲೆ ಬೀಸಿದರೆ ಸಿಕ್ಕಿದ್ದೇ ಬೇರೆ!
ಇದನ್ನು ಕಂಡ ಮನೆ ಮಾಲೀಕರು ವೈಲ್ಡ್ ಲೈಫ್ ಫೋಟೋಗ್ರಾಫರ್ ಶಿವಕುಮಾರ್ ಅವರಿಗೆ ಕರೆ ಮಾಡಿದಾಗ ಕೂಡಲೇ ಸ್ಥಳಕ್ಕೆ ಹೋದ ಶಿವಕುಮಾರ್ ಅದನ್ನು ಸೂಕ್ಷ್ಮವಾಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದರು.
ಪುನುಗು ಬೆಕ್ಕಿಗೆ ಭಾರೀ ಬೇಡಿಕೆ
ಪುನುಗು ಬೆಕ್ಕು ಹೆಚ್ಚು ಹಣ್ಣುಗಳನ್ನು ತಿಂದು ಜೀವಿಸುವ ಪ್ರಾಣಿ. ಇದು ಹೆಚ್ಚಾಗಿ ಮಲೆನಾಡಿನ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಈ ಬೆಕ್ಕನ್ನು ಅಕ್ರಮವಾಗಿ ಸಾಕಿಕೊಂಡು ಕಾಫಿ ಬೀಜವನ್ನು ತಿನ್ನಲು ಹಾಕುತ್ತಾರೆ.
ಜಮೀನಿನಲ್ಲಿದ್ದ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ
ಅದು ಹಿಕ್ಕೆ ಹಾಕಿದ ಕಾಫಿ ಬೀಜಕ್ಕೆ ವಿದೇಶದಲ್ಲಿ ಭಾರೀ ಬೇಡಿಕೆ ಇದ್ದು, ಈ ಜಾಲವೂ ಸಹ ಮಡಿಕೇರಿ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಗೌಪ್ಯವಾಗಿ ಕಾರ್ಯನಿರ್ವಹಿಸುತ್ತಾ ಇದೆ.
ಇಂತಹ ಸಮಯದಲ್ಲಿ ಶಿವಕುಮಾರ್ ಅವರು ಈ ಅಪಾಯದ ಅಂಚಿನಲ್ಲಿರುವ ಬೆಕ್ಕನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದು, ಅಧಿಕಾರಿಗಳು ಹಾಗೂ ಪ್ರಾಣಿ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೆಕ್ಕಿಗೆ ಸೂಕ್ತ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟಿದ್ದಾರೆ.