ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿಟ್ಟ ಪ್ರಕರಣಕ್ಕೆ ಹೊಸ ತಿರುವು
ಚಿಕ್ಕಮಗಳೂರು, ಡಿಸೆಂಬರ್ 21: ಶ್ರೀಗಂಧ ಬೆಳೆದ ಬೆಳೆಗಾರನ ಜಮೀನಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು, ಶ್ರೀಗಂಧ ಬೆಳೆದ ರೈತನಿಗೆ ಸಕಾಲದಲ್ಲಿ ಸಮರ್ಪಕ ಪರಿಹಾರ ನೀಡಿಲ್ಲವೆಂಬ ಕಾರಣಕ್ಕೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮನಸ್ಸಿಗೆ ಬೇಸತ್ತು ಹೀಗೆ ಮಾಡಿದೆ ಎಂದು ಉಲ್ಟಾ ಹೊಡೆದಿರುವ ಘಟನೆ ಸೋಮವಾರ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸಮೀಪದ ಹಳಿಯೂರು ಗ್ರಾಮದ 22 ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆದಿದ್ದಾರೆ. ಅದರಲ್ಲಿ ವಿಶುಕುಮಾರ್ ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆದಿದ್ದರು. ತರೀಕೆರೆ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಮುಂದಾಗಿರುವುದರಿಂದ ಕಳೆದ 8 ರಿಂದ 10 ವರ್ಷಗಳಿಂದ ಬೆಳೆದಿದ್ದ ಶ್ರೀಗಂಧ ಮರಗಳು ನಾಶವಾಗಲಿವೆ ಎಂದು ವಿಡಿಯೋದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು.
ಮ್ಯಾನೇಜರ್ ಸೇರಿ ಐವರಿಗೆ ಕೋವಿಡ್ ಸೋಂಕು; ಬ್ಯಾಂಕ್ ಸೀಲ್ ಡೌನ್
ಶ್ರೀಗಂಧ ಬೆಳೆದ ರೈತರಿಗೆ ಸಮರ್ಪಕ ಪರಿಹಾರ ನೀಡುವಂತೆ ಹೈಕೋರ್ಟ್ ಎನ್ಎಚ್ಎಐಗೆ ಆದೇಶ ನೀಡಿದ್ದು, ಸಮರ್ಪಕ ಪರಿಹಾರ ನೀಡಿಲ್ಲ. ಈ ಸಂಬಂಧ ಪ್ರತಿಭಟನೆಯನ್ನು ನಡೆಸಿದ್ದರು. ಒಂದು ಮರಕ್ಕೆ 30 ವರ್ಷ ಜೀವಿತಾವಧಿಯ ಲೆಕ್ಕಚಾರದಲ್ಲಿ 2 ಲಕ್ಷ 44 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಎನ್ಎಚ್ಎಐ ಸಮರ್ಪಕ ಪರಿಹಾರದ ಹಣವನ್ನು ಸಕಾಲಕ್ಕೆ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.
ಎನ್ಎಚ್ಎಐ ತುಮಕೂರು ಕಚೇರಿ ಎದುರು ಆತ್ಮಹತ್ಯೆಗೆ ಶರಣಾಗುವುದಾಗಿ ವಿಡಿಯೋ ಮತ್ತು ಡೆತ್ನೋಟ್ನಲ್ಲಿ ತಿಳಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ಅಧಿಕಾರಿಗಳು ವಿಶುಕುಮಾರ್ ಮನವೊಲಿಸಿದ್ದು, ತೋಟಕ್ಕೆ ಹೋದಾಗ ಬೇಜಾರು ಆಗಿ ಈ ರೀತಿ ಮಾಡಿದೆ. ಮುಂದೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆಂದು ಮತ್ತೊಂದು ವಿಡಿಯೋ ಮಾಡಿ ತಿಳಿಸಿದ್ದಾರೆ.