ಬಕೆಟ್ ನೀರಿನಲ್ಲಿ ಮುಳುಗಿಸಿ ಏಳು ತಿಂಗಳ ಮಗುವನ್ನು ಕೊಂದ ವಕೀಲ ತಂದೆ
ಚಿಕ್ಕಮಗಳೂರು, ಸೆಪ್ಟೆಂಬರ್ 11: ಹೆಣ್ಣು ಮಗು ಹುಟ್ಟಿದೆ ಎಂದು ತನ್ನ ಏಳು ತಿಂಗಳ ಮಗುವನ್ನು ಅಪ್ಪನೇ ನೀರಿನ ಬಕೆಟ್ ನಲ್ಲಿ ಮುಳುಗಿಸಿ ಸಾಯಿಸಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೊಡ್ಡಪೇಟೆ ಬಡಾವಣೆಯಲ್ಲಿ ನಡೆದಿದೆ.
ಉಮಾಶಂಕರ್ ಎಂಬುವವನೇ ಏಳು ತಿಂಗಳ ಮಗುವನ್ನು ಕೊಂದ ಅಪ್ಪನಾಗಿದ್ದು, ಈತ ವೃತ್ತಿಯಲ್ಲಿ ವಕೀಲನಾಗಿದ್ದಾನೆ. ಮೂರು ವರ್ಷಗಳ ಹಿಂದೆ ಕಡೂರು ನ್ಯಾಯಾಲಯದಲ್ಲಿ "ಡಿ' ದರ್ಜೆ ನೌಕರಳಾಗಿರೋ ಮಂಜುಳಾ ಎಂಬಾಕೆಯನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದನು.
ಮಂಜುಳಾಗೆ ಏಳು ತಿಂಗಳ ಹಿಂದೆ ಹೆಣ್ಣು ಮಗು ಹುಟ್ಟಿತ್ತು. ಆರಂಭದಿಂದಲೂ ಹೆಣ್ಣು ಮಗು ಹುಟ್ಟಿದೆ ಎಂದು ಪತ್ನಿ ಮಂಜುಳಾಗೆ ದಿನನಿತ್ಯ ಮಾನಸಿಕ ಕಿರುಕುಳ ನೀಡುತ್ತಿದ್ದನು.
ಗುರುವಾರ ಮಂಜುಳಾ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮಗುವನ್ನು ನೀರಿನ ಬಕೆಟ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಅಲ್ಲದೇ ತನಗೇನು ಗೊತ್ತಿಲ್ಲದಂತೆ ಇದ್ದ ಎಂದು ಆರೋಪಿಸಿರುವ ಮಗುವಿನ ತಾಯಿ ಮಂಜುಳಾ, ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಡೂರು ಪೊಲೀಸರು ಆರೋಪಿ ಉಮಾಶಂಕರ್ ನನ್ನ ಬಂಧಿಸಿದ್ದಾರೆ.
Recommended Video
ಬಂಧಿತ ಉಮಾಶಂಕರ್ ನ ಮೊದಲ ಹೆಂಡತಿಗೆ ಗಂಡು ಮಗುವಿದ್ದು, ವಿಚ್ಛೇದನವನ್ನೂ ಪಡೆದಿರಲಿಲ್ಲ. ಎರಡನೇ ಹೆಂಡತಿಗೆ ಹೆಣ್ಣು ಮಗು ಆಯ್ತು, ಆಸ್ತಿ ಕೈ ತಪ್ಪಿ ಹೋಗುತ್ತದೆ ಎಂದು ತನ್ನ ಏಳು ತಿಂಗಳ ಹೆಣ್ಣು ಮಗು ಲಾವಣ್ಯಳನ್ನು ಉಮಾಶಂಕರನೇ ಕೊಲೆ ಮಾಡಿದ್ದಾನೆಂಬ ಮಾಹಿತಿ ಪ್ರಾಥಮಿಕ ವರದಿಯಲ್ಲಿ ಲಭ್ಯವಾಗಿದೆ.