ಡಿಸಿಎಂ ಬಂದ್ರು ದಾರಿ ಬಿಡಿ; ನಾರಾಯಣ ನಾರಾಯಣ!
ಚಿಕ್ಕಮಗಳೂರು, ನವೆಂಬರ್.11: ಸಾಹೇಬ್ರು ಬರ್ತಿದ್ದಾರೆ ದಾರಿ ಬಿಡಿ ದಾರಿ ಬಿಡಿ. ಯಾರೂ ಗಾಡಿಗಳನ್ನು ಹಿಂದೆ ಮುಂದೆ ಮೂ ಮಾಡುವ ಹಾಗಿಲ್ಲ. ಎಲ್ಲಾ ನಿಂತಲ್ಲೇ ನಿಂತಿರಬೇಕು. ರಸ್ತೆ ಪೂರಾ ಖಾಲಿ ಖಾಲಿ ಆಗಿರಬೇಕು. ಅರೆರೆ, ಇದು ಯಾವುದೋ ದೇಶದ ವಿಐಪಿಗೆ ನೀಡಿದ ಸೌಲಭ್ಯ ಅಲ್ಲವೇ ಅಲ್ಲ.
ಇನ್ನು, ನಮ್ಮ ರಾಷ್ಟ್ರಪತಿಗಳೋ, ಪ್ರಧಾನಮಂತ್ರಿಗಳೋ, ಉಪರಾಷ್ಟ್ರಪತಿಗಳೋ ಬರುತ್ತಿದ್ದಾರೆ ಅಂದುಕೊಂಡರೆ ಅದೂ ಅಲ್ಲ. ಈ ವ್ಯವಸ್ಥೆಯನ್ನು ಕಲ್ಪಿಸಿದ್ದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೂ ಅಲ್ಲ. ಬದಲಿಗೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರಿಗಾಗಿ.
3 ಉಪ ಮುಖ್ಯಮಂತ್ರಿಗಳಿಗೆ ಹೈಕಮಾಂಡ್ ಖಡಕ್ ಸಂದೇಶ!
ಹೌದು, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದು ರಸ್ತೆಗಳೆಲ್ಲ ಖಾಲಿ ಖಾಲಿ ಆಗಿದ್ದವು. ಬಸ್, ಕಾರು, ಬೈಕ್ ಸವಾರರೆಲ್ಲ ರಸ್ತೆಗೆ ಇಳಿಯುವ ಹಾಗೇ ಇರಲಿಲ್ಲ. ಯಾಕಂದ್ರೆ, ನಗರದಲ್ಲಿ ಇವತ್ತು ಝೀರೋ ಟ್ರಾಫಿಕ್ ಎಂಬುದು ಒಂದೆರೆಡು ಬಾರಿ ಜಾರಿಗೆ ಬಂದಿರಲಿಲ್ಲ.
ಕಾಫಿನಾಡಿನಲ್ಲಿ ಇದೆಂಥಾ ಕಿರಿಕ್?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ವಿಐಪಿಗಳು ಬಂದರೆ ಅಬ್ಬಬ್ಬಾ ಅಂದರೂ ಒಂದು ಬಾರಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದರೆ, ಕಾಫಿನಾಡಿನಲ್ಲಿ ಇವತ್ತು ಪೊಲೀಸರು ಹೊಸ ಇತಿಹಾಸವನ್ನೇ ಬರೆದರು. ಜಿಲ್ಲೆಗೆ ಡಿಸಿಎಂ ಅಶ್ವಥ್ ನಾರಾಯಣ್ ಬರುತ್ತಿದ್ದಾರೆ ಅಂತಾ ಮೇಲಿಂದ ಮೇಲೆ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು.
ಯಾಕೆ ಹೀಗೆ ಮಾಡಿದ್ರಿ ಉಪ ಮುಖ್ಯಮಂತ್ರಿಗಳೇ?
ನಿಜ ಹೇಳಬೇಕು ಅಂದರೆ ಇವತ್ತು ಕಾಫಿನಾಡಿನಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸಾಹೇಬ್ರು ಪ್ರವಾಸ ಕೈಗೊಂಡಿದ್ದರು. ಜಿಲ್ಲೆಯ ಪರಿಸ್ಥಿತಿ ಅವಲೋಕನ ನಡೆಸಲು ತೆರಳಿದ ಡಿಸಿಎಂ, ವಾಹನ ಸವಾರರ ಕೆಂಗಣ್ಣಿಗೆ ಗುರಿಯಾದರು. ಏಕೆಂದರೆ ಒಂದೇ ದಿನ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಾಲ್ಕು ಬಾರಿ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಉಪ ಮುಖ್ಯಮಂತ್ರಿ ಹುದ್ದೆಗೆ ಇರುವ ಅಧಿಕಾರ, ಸೌಲಭ್ಯವೇನು ಗೊತ್ತೇ?
ಇಲ್ಲಿ ಓಡಾಡುವ ಮುನ್ನ ಹುಷಾರ್!
ಚಿಕ್ಕಮಗಳೂರು ನಗರದ ತೊಗರಿಹಂಕಲ್, ಹನುಮಂತಪ್ಪ ವೃತ್ತ, ಮಲಂದೂರು ಸರ್ಕಲ್ ನಲ್ಲಿ ಓಡಾಡಿದ ಸಾರ್ವಜನಿಕರು ಡಿಸಿಎಂ ಸಾಹೇಬರಷ್ಟೇ ಅಲ್ಲ, ಪೊಲೀಸರಿಗೂ ಕೂಡಾ ಹಿಡಿಶಾಪ ಹಾಕಿದರು. ಝೀರೋ ಟ್ರಾಫಿಕ್ ನಿಂದ ಸಾರ್ವಜನಿಕರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ.
ಡಿಸಿಎಂಗೆ ಹಿಡಿಶಾಪ ಹಾಡಿದ ಜನ
ನಗರದಲ್ಲಿ 4 ಬಾರಿ ಜೀರೋ ಟ್ರಾಫಿಕ್ ಅಳವಡಿಸಿದ್ದರಿಂದ ಚಿಕ್ಕಮಗಳೂರಿನ ಜನತೆ ದಿನವಿಡೀ ಹೈರಾಣಾದರು. ಸುಡು ಬಿಸಿಲಿನಲ್ಲೇ ನಿಂತು ಪೊಲೀಸರ ವಿರುದ್ಧ ರೇಗಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಪೊಲೀಸರು ಕೂಡಾ ಮೂಕಪ್ರೇಕ್ಷಕರಂತೆ ನಿಂತು ಬಿಟ್ಟಿದ್ದರು.