ಚಿಕ್ಕಮಗಳೂರು: ಹೆದ್ದಾರಿಯಲ್ಲಿ ವಾಹನ ದರೋಡೆಗೆ ಯತ್ನ; ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
ಚಿಕ್ಕಮಗಳೂರು, ಜುಲೈ 20: "ತುಮಕೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ-73ರ ಮುದ್ರೆಮನೆ ಎಂಬಲ್ಲಿ ರಸ್ತೆಯಲ್ಲಿ ಸಾಗುವ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಹೊಂಚುಹಾಕಿ ಕುಳಿತಿದ್ದ 5 ಜನರಿದ್ದ ತಂಡವನ್ನು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ,'' ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ತಿಳಿಸಿದ್ದಾರೆ.
ನಗರದ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, "ಭಾನುವಾರ ಬೆಳಗಿನ ಜಾವ 2 ಗಂಟೆಗೆ ಕೈಯಲ್ಲಿ ಟಾರ್ಚ್, ಕಬ್ಬಿಣದ ರಾಡ್, ಖಾರದ ಪುಡಿ, ಚಾಕು ಮತ್ತು ಪಿಸ್ತೂಲು ಹಿಡಿದು ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗಾಗಿ ಮುದ್ರೆಮನೆ ಬಳಿ ಹೊಂಚುಹಾಕಿ ನಿಂತಿದ್ದರು.''
"ಕೆಲ ವಾಹನಗಳನ್ನು ಅಡ್ಡಗಟ್ಟಿದಾಗ ಅವರು ನಿಲ್ಲಿಸದೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ದರೋಡೆಕೋರರ ಜಾಡುಹಿಡಿದು ಹೆದ್ದಾರಿಯಲ್ಲಿ ಮುದ್ರೆಮನೆಯವರೆಗೂ ತೆರಳಿದಾಗ ಸಾರ್ವಜನಿಕರ ವಾಹನವೆಂದು ತಿಳಿದ ದರೋಡೆಕೋರರು ಕತ್ತಲೆಯಲ್ಲಿ ಪೊಲೀಸರ ಜೀಪನ್ನು ತಡೆದಿದ್ದಾರೆ. ಈ ವೇಳೆ ಸಿನಿಮೀಯ ಮಾದರಿಯಲ್ಲಿ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಓರ್ವ ಆರೋಪಿ ಕತ್ತಲೆಯಲ್ಲಿ ಕಾಡಿನೊಳಕ್ಕೆ ಓಡಿ ತಪ್ಪಿಸಿಕೊಂಡಿದ್ದಾನೆ,'' ಎಂದು ತಿಳಿಸಿದರು.
ಆರೋಪಿಗಳಾದ ಮಂಡ್ಯ ಜಿಲ್ಲೆಯ ಬಿ.ಹೊಸೂರು ಕಾಲನಿಯ ಶಿವಕುಮಾರ್ (29) ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲೂಕು ಹುಲಿವಲ ಗ್ರಾಮದ ಕುಮಾರಸ್ವಾಮಿ (23), ಬೆಂಗಳೂರಿನ ಪೀಣ್ಯ ನಿವಾಸಿ ಅಜಯ್ ಕುಮಾರ್ ಸಿಂಗ್ (25), ಮೂಡಿಗೆರೆ ತಾಲೂಕು ಕೊಟ್ಟಿಗೆಹಾರದ ರಾಮಪೂಜಾರಿ ಎಂಬುವವರ ಪುತ್ರ ಶಿವಕುಮಾರ (40) ಬಂಧಿತ ಆರೋಪಿಗಳಾಗಿದ್ದಾರೆ.
ಪರಾರಿಯಾಗಿರುವ ಆರೋಪಿಯ ಮಾಹಿತಿ ತನಿಖೆಯಿಂದ ತಿಳಿಯಬೇಕಾಗಿದೆ. ಹೆದ್ದಾರಿ ಪಕ್ಕದ ಪ್ರಯಾಣಿಕರ ತಂಗುದಾಣದ ಹಿಂಭಾಗ ಆರೋಪಿಗಳು ನಿಲ್ಲಿಸಿದ್ದ 2 ಬೈಕ್ 2 ಟಾರ್ಚ್, 1 ಕಬ್ಬಿಣದ ರಾಡ್, 1 ಚಾಕು, 2 ಪಿಸ್ತೂಲು, 2 ಜೀವಂತ ಗುಂಡುಗಳು, ಖಾರದ ಪುಡಿ, ಹಾಗೂ 10 ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಪಿಐ ಜೆ.ಸಿ. ಸೋಮಶೇಖರ್, ಪಿಎಸ್ಐ ಜಿ.ಎ. ರವಿ, ಪ್ರೊಬೆಷನರಿ ಪಿಎಸ್ಐಗಳಾದ ಭರ್ಮಪ್ಪ ಬೆಳಗಲಿ, ಮಂಜುನಾಥ, ಎಎಸ್ಐಗಳಾದ ವೆಂಕಟೇಶ್ ಮೂರ್ತಿ, ಡಿ.ಎಸ್ ತಿಮ್ಮಪ್ಪ ಮತ್ತು ಸಿಬ್ಬಂದಿಗಳಾದ ಗಿರೀಶ್, ವಿಜಯಕುಮಾರ್, ದಯಾನಂದ, ಲೋಹಿತ್, ಮಲ್ಲಿಕಾರ್ಜುನ, ಚೇತನ್, ತೋಜೋಮೂರ್ತಿ, ರುದ್ರೇಶ್ ಭಾಗವಹಿಸಿದ್ದರು.
ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರ ತಂಡಕ್ಕೆ ಎಸ್ಪಿ ಎಂ.ಎಚ್. ಅಕ್ಷಯ್ ಬಹುಮಾನ ಘೋಷಿಸಿದ್ದು, ಪೊಲೀಸ್ ಮಹಾನಿರ್ದೇಶಕರು ತಂಡಕ್ಕೆ ಒಂದು ಲಕ್ಷ ಬಹುಮಾನ ಘೋಷಿಸಿದ್ದಾರೆ ಎಂದು ತಿಳಿಸಿದರು.