ಶಿವಮೊಗ್ಗದಿಂದ ಮಂಗಳೂರಿಗೆ ಝೀರೋ ಟ್ರಾಫಿಕ್: 3 ಗಂಟೆಯಲ್ಲಿ ಆಸ್ಪತ್ರೆ ತಲುಪಿದ ಚಾಲಕ
ಚಿಕ್ಕಮಗಳೂರು, ಅಕ್ಟೋಬರ್ 7: ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿದ್ದ ಆ್ಯಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟಿರುವ ಕಾಫಿನಾಡು ಪೊಲೀಸರಿಗೆ ಚಿಕ್ಕಮಗಳೂರು ಜನ ಶ್ಲಾಘಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಮೂಲದ ಎರಡು ತಿಂಗಳ ಮಗುವಿಗೆ ತುರ್ತಾಗಿ ಹೃದಯ ಸಂಬಂಧಿ ಚಿಕಿತ್ಸೆ ನೀಡಬೇಕಿತ್ತು. ಆದರೆ, ಬಡ ಕುಟುಂಬದ ಮಗುವಿನ ಪೋಷಕರು ಆಸ್ಪತ್ರೆಯಲ್ಲಿನ ಆ್ಯಂಬುಲೆನ್ಸ್ ಹಣ ಹೆಚ್ಚಾಗಿದ್ದರಿಂದ ಟ್ರಸ್ಟ್ ಮೂಲಕ ಚಿಕ್ಕಮಗಳೂರಿನ ಆ್ಯಂಬುಲೆನ್ಸ್ ಗೆ ಸಂಪರ್ಕಿಸಿದ್ದರು.
ಚಾರ್ಮಾಡಿ ಘಾಟ್ ರಸ್ತೆ ಉಳಿಸಿ, ಅಭಿವೃದ್ಧಿಪಡಿಸಿ: ಯುವಕರ ಅಭಿಯಾನ
ಕೂಡಲೇ ಶಿವಮೊಗ್ಗಕ್ಕೆ ಹೋಗಿ ಮಗುವನ್ನು ಕರೆದುಕೊಂಡು ಹೊರಟ ಆ್ಯಂಬುಲೆನ್ಸ್ ಚಾಲಕ, ಆಗುಂಬೆ ಘಾಟ್ ಮೇಲೆ ಹೋಗಲು ರಸ್ತೆ ಜಾಮ್ ಆಗಿದ್ದ ಕಾರಣ, ಚಿಕ್ಕಮಗಳೂರು ಮೂಲಕ ಮಂಗಳೂರಿಗೆ ಹೊರಟರು.
ಈ ವೇಳೆ, ಆ್ಯಂಬುಲೆನ್ಸ್ ಚಾಲಕ ಚಿಕ್ಕಮಗಳೂರು ಪೊಲೀಸರಿಗೆ ಮನವಿ ಮಾಡಿದ್ದರಿಂದ ಕಾಫಿನಾಡಿನ ಖಾಕಿಗಳು ಚಿಕ್ಕಮಗಳೂರಿನಿಂದ ಕೊಟ್ಟಿಗೆಹಾರದ ಗಡಿ ದಾಟುವವರೆಗೂ ಆ್ಯಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದಾರೆ.
ರಸ್ತೆಯುದ್ದಕ್ಕೂ ಚಿಕ್ಕಮಗಳೂರು ಜನರೂ ಕೂಡ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದಾರೆ. ಪೊಲೀಸರ ಈ ನಡೆಗೆ ಜಿಲ್ಲೆಯ ಜನ ಕೂಡ ಶ್ಲಾಘಿಸಿದ್ದಾರೆ. ಶಿವಮೊಗ್ಗದಿಂದ ಸುಮಾರು ಎಂಟರಿಂದ ಒಂಬತ್ತು ಗಂಟೆಯ ಪ್ರಯಾಣದ ಮಂಗಳೂರಿಗೆ ಆ್ಯಂಬುಲೆನ್ಸ್ ಚಾಲಕ ಮೂರೇ ಗಂಟೆಯಲ್ಲಿ ತಲುಪಿದ್ದು, ಸಾರ್ವಜನಿಕರಿಂದ ಆ್ಯಂಬುಲೆನ್ಸ್ ಚಾಲಕನ ಚಾಕಚಕ್ಯತೆಯ ಚಾಲನೆಗೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Recommended Video
ಏಕೆಂದರೆ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗುವವರೆಗೂ ಅಪಾಯಕಾರಿ ತಿರುವುಗಳಿವೆ. ಚಾರ್ಮಾಡಿ ಘಾಟ್ ಡ್ರೈವಿಂಗ್ ನಿಜಕ್ಕೂ ಸವಾಲೇ ಸರಿ. ಹೀಗಿರುವಾಗ ಅದೇ ವೇಗವನ್ನು ಕಾಪಾಡಿಕೊಂಡು ಮೂರೇ ಗಂಟೆಗೆ ಶಿವಮೊಗ್ಗದಿಂದ ಮಂಗಳೂರಿಗೆ ತಲುಪಿರುವ ಚಾಲಕ ಜೀಶಾನ್ ಚಾಲನೆಗೂ ಜನ ಭೇಷ್ ಅಂದಿದ್ದಾರೆ.