ಶ್ರೀರಾಮನವಮಿಗೆ ಪಾನಕ-ಮಜ್ಜಿಗೆ ಹಂಚಿದ ಜಮೀರ್ ಅಹ್ಮದ್
ಹೊಸಕೋಟೆ, ಏಪ್ರಿಲ್ 13: ಲೋಕಸಭೆ ಚುನಾವಣೆ ಪ್ರಚಾರದಲ್ಲಿದ್ದ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಅವರು ಶ್ರೀರಾಮನವಮಿ ಪ್ರಯುಕ್ತ ಭಕ್ತರಿಗೆ ಮಜ್ಜಿಗೆ-ಪಾನಕ ಹಂಚಿ ಖುಷಿ ಪಟ್ಟರು.
ಚಿಕ್ಕಬಳ್ಳಾಪುರ ಕ್ಷೇತ್ರದ ಹೊಸಕೋಟೆಯಲ್ಲಿ ಇಂದು ಬೆಳಿಗ್ಗೆ ಪ್ರಚಾರ ನಡೆಸಿದ ಸಚಿವ ಜಮೀರ್ ಅಹ್ಮದ್ ಅವರು ಹನುಮ ದೇವಾಲಯವೊಂದರ ಬಳಿ ಪ್ರಚಾರ ವಾಹನವನ್ನು ನಿಲ್ಲಿಸಿ ಭಕ್ತಾದಿಗಳಿಗೆ ಪಾನಕ-ಮಜ್ಜಿಗೆಯನ್ನು ಹಂಚಿದರು. ತಾವೂ ಸಹ ಪಾನಕ-ಮಜ್ಜಿಗೆ ಕುಡಿದು ಸಂತೃಪ್ತರಾದರು.
ಮೋದಿ ಸರ್ಕಾರದಲ್ಲಿ ಒಂದೂ ಹಗರಣವಿಲ್ಲ: ಸದಾನಂದ ಗೌಡ
ಜಮೀರ್ ಅಹ್ಮದ್ ಅವರು ಇಂದು ಚಿಕ್ಕಬಳ್ಳಾಪುರ ಕ್ಷೇತ್ರದ ಹೊಸಕೋಟೆ, ವಿಜಯಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೈತ್ರಿ ವೀರಪ್ಪ ಮೊಯ್ಲಿ ಅವರ ಪರ ಪ್ರಚಾರ ಮಾಡಿದರು.
ಹೊಸಕೋಟೆಯಲ್ಲಿ ಮಾತ್ರವಲ್ಲದೆ, ದೇವನಹಳ್ಳಿ, ಚಿಕ್ಕಬಳ್ಳಾಪುರದಲ್ಲೂ ಸಹ ದಾರಿ ಮಧ್ಯೆ ಪಾನಕ-ಮಜ್ಜಿಗೆಗಳನ್ನು ಹಂಚಿದರು. ಜಮೀರ್ ಅವರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದಾಗ ಅಭಿಮಾನಿಗಳಿಗೆ, ಮಕ್ಕಳಿಗೆ ಕೈತುತ್ತು ನೀಡುವ ಅಭ್ಯಾಸವಿಟ್ಟುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿಜಯಪುರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರು ಕೇವಲ ಸುಳ್ಳು ಹೇಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.