ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ರಿಂದ ಬಿಜೆಪಿ ಸರ್ಕಾರಕ್ಕೆ ಬಹುಪರಾಕ್
ಚಿಕ್ಕಬಳ್ಳಾಪುರ, ಜುಲೈ 28: ಕರ್ನಾಟಕದ ಮಹಾಜನತೆಯ ಜನಾದೇಶವನ್ನು ಪಡೆದುಕೊಂಡು ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರ ಜುಲೈ 26 ನೇ ತಾರೀಕಿನಂದು 1 ವರ್ಷ ಪೂರೈಸಿದೆ. ರಾಜ್ಯದ ಮಹಾಜನತೆಯ ಆಶೋತ್ತರಗಳಿಗೆ ತಕ್ಕಂತೆ ಸಮೃದ್ಧ ಕರ್ನಾಟಕ ನಿರ್ಮಿಸುವ ಸಂಕಲ್ಪದೊಂದಿಗೆ ಕಾರ್ಯೋನ್ಮುಖವಾಗಿರುವ ಬಿಜೆಪಿ ಸರ್ಕಾರ ಕಳೆದ 1 ವರ್ಷದಲ್ಲಿ, ಅತೀವೃಷ್ಠಿ, ಅನಾವೃಷ್ಠಿ, ಈಗ ಕೊರೋನ ದಂತಹ ಹಲವು ಅಡ್ಡಿ ಆತಂಕಗಳನ್ನು ನಡುವೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
Recommended Video
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಎಂದೂ ಕಂಡಿರದ ಇಂತಹ ಸವಾಲುಗಳ ನಡುವೆಯೂ ಜನನಾಯಕ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಉಕ್ತಿಯಂತೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕೊರೋನ ಸಂಕಷ್ಟದಲ್ಲಿರುವ ಜನತೆಯ ಜೀವನ ಸುಗಮವಾಗಿ ಸಾಗಲು ಪೂರಕ ಸೌಲಭ್ಯಗಳನ್ನು, ಪರಿಹಾರಗಳನ್ನು ಸಕಾಲದಲ್ಲಿ ಒದಗಿಸುವ ಬೃಹತ್ ಹೊಣೆಗಾರಿಕೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜೊತೆಯಾಗಿ ನಿರ್ವಹಿಸುತ್ತಿವೆ ಎಂದು ಹೇಳಿದರು.
ಕೇವಲ ಮೊದಲನೇ ವರ್ಷ, ಇನ್ನೂ ಆರಂಭ
ಇದು ಕೇವಲ ಮೊದಲನೇ ವರ್ಷ, ಇನ್ನೂ ಆರಂಭ. ಕಳೆದ 1 ವರ್ಷದಲ್ಲಿ ನಮ್ಮ ಸರ್ಕಾರ ಎದುರಿಸಿರುವ ಸವಾಲು, ಸಮಸ್ಯೆ ಹಾಗೂ ಆತಂಕಗಳ ನಡುವೆ, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇದು ಕೇವಲ ಮೊದಲನೇ ವರ್ಷ, ಇನ್ನೂ ಆರಂಭ. ರಾಜ್ಯದಲ್ಲಿ ಬಿಜಿಪಿ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಹಲವು ಸವಾಲುಗಳನ್ನು ಎದುರಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಸುಮಾರು 6,000 ರೂ. ಕೋಟಿಗೂ ಹೆಚ್ಚು ನೆರವು ನೀಡುವ ಮೂಲಕ ಜನರ ಕೈಹಿಡಿದಿದೆ. ಎಂದು ಸಚಿವ ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿ
ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳು ಸಚಿವರಾಗಿ ಕಾರ್ಯ ನಿರ್ವಹಿಸಿರುವುದು ಬಹಳ ವಿರಳ. ಆದರೆ, ನನಗೆ ಅಂತಹ ಸದವಕಾಶ ಕಲ್ಪಿಸಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ನನ್ನ ಧ್ಯೇಯ. ಮೂಲ ಸೌಕರ್ಯದಿಂದ ಹಿಡಿದು ರೈತರ ಹಿತ ಕಾಯುವ ಎಲ್ಲಾ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ನಾನು ಬದ್ಧನಾಗಿದ್ದೇನೆ. ನನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಈಡೆರಿಸುತ್ತಾ ಸಾಗುತ್ತಿದ್ದೇನೆ. ಇದಕ್ಕೆ ಪೂರಕವಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಎಲ್ಲಾ ಸಹಕಾರಗಳನ್ನು ನೀಡುತ್ತಿದೆ. ಚಿಕ್ಕಬಳ್ಳಾಪುರವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವುದು ನನ್ನ ಧ್ಯೇಯ. ಅದಕ್ಕಾಗಿ ನಾನು ಬದ್ಧನಾಗಿದ್ದೇನೆ ಹಾಗೂ ನಿಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ ಎಂದು ಸಚಿವ ಸುಧಾಕರ್ ಅವರು ಅಭಿಪ್ರಾಯಪಟ್ಟರು.
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ 4,000 ರೂ. ಹೆಚ್ಚುವರಿ ನೀಡುವ ಮೂಲಕ 50 ಲಕ್ಷ ರೈತರಿಗೆ ಅನುಕೂಲವಾಗುವ ಯೋಜನೆ ರೂಪಿಸಲಾಗಿದೆ. ಇದೇ ಮಾದರಿಯಲ್ಲಿ ನೇಕಾರರಿಗೂ ಯೋಜನೆ ರೂಪಿಸಲಾಗಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ತಮ್ಮ ಬೆಳೆಯನ್ನು ಗರಿಷ್ಠ ಬೆಲೆಗೆ ಮಾರುವ ಹಕ್ಕು ನೀಡಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ₹2272 ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ಅಸಂಘಟಿತ ವಲಯದ ಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಕ್ಷೌರಿಕರು, ಮಡಿವಾಳರು, ಹೂವು, ಹಣ್ಣು, ತರಕಾರಿ ಬೆಳೆಗಾರರಾಗಿ ನೆರವು ನೀಡಲಾಗಿದೆ. ರೈತರು ಮತ್ತು ಉದ್ಯಮಗಳಿಗೆ ಅನುಕೂಲ ಕಲ್ಪಿಸಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಬಂಡವಾಳ ಆಕರ್ಷಿಸಲು ಮತ್ತು ಉದ್ಯಮಗಳಿಗೆ ಉತ್ತೇಜನ ನೀಡಲು ಹೊಸ ಕೈಗಾರಿಕಾ ನೀತಿ ರೂಪಿಸಲಾಗಿದೆ.
ಕೋವಿಡ್ ನಿಯಂತ್ರಣದಲ್ಲಿ ರಾಜ್ಯವೇ ಉತ್ತಮ
ಕೋವಿಡ್ ನಿಯಂತ್ರಣದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಪರಿಸ್ಥಿತಿ ಉತ್ತಮವಾಗಿದೆ. ಹಲವು ಸವಾಲುಗಳ ನಡುವೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಆತಂಕ ಮತ್ತು ಭಯದಿಂದ ಕೊರೋನಾ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ದೈರ್ಯದಿಂದ ಮತ್ತು ಆತ್ಮಸ್ಥೈರ್ಯದಿಂದ ಕೊರೋನಾ ನಿರ್ಮೂಲನೆ ಸಾಧ್ಯ. ಜನತೆ ಎಲ್ಲರು ಸುರಕ್ಷತೆಗಾಗಿ ಸರ್ಕಾರ ತಿಳಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕೊರೋನಾ ನಿರ್ವಹಣೆಗೆ ನಮ್ಮೊಂದಿಗೆ ಕೈಜೋಡಿಸಿ. ಎಂದು ಸಚಿವರು ತಿಳಿಸಿದರು.