ಕೇಂದ್ರದಿಂದ ಬಂದ ಬರ ಪರಿಹಾರ: ಅನುಮಾನಕ್ಕೆ ಎಡೆಯಾದ ದೇವೇಗೌಡ್ರ ಹೇಳಿಕೆ
ಚಿಕ್ಕಬಳ್ಳಾಪುರ, ಅ 7: ಬರ ಪರಿಹಾರಕ್ಕೆ ಕೇಂದ್ರದಿಂದ ಮಂಜೂರಾದ ಹಣದ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ನೀಡಿರುವ ಹೇಳಿಕೆ, ಹೊಸ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನಗರದಲ್ಲಿ ಮಾತನಾಡುತ್ತಿದ್ದ ದೇವೇಗೌಡ್ರು, "ಕೇಂದ್ರದಿಂದ ಮಂಜೂರಾದ 1,200 ಕೋಟಿ ರೂಪಾಯಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆಯ ನಷ್ಟದ ಪರಿಹಾರದ ಮೊತ್ತ" ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ 1200 ಕೋಟಿ ಮಂಜೂರು
"ಉತ್ತರ ಕರ್ನಾಟಕದ ಭಾಗದಲ್ಲಾದ ಅತಿವೃಷ್ಟಿಗೆ ಕೇಂದ್ರದಿಂದ ನಯಾಪೈಸೆ ಬಂದಿಲ್ಲ. ಈಗ ಬಂದಿರುವುದು ಏನಿದ್ದರೂ, ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ನೆರೆಯ ನಷ್ಟದ ಪರಿಹಾರ ಮೊತ್ತ" ಎಂದು ದೇವೇಗೌಡ್ರು ಹೇಳಿದರು.
"ಕೊಡಗು, ಶಿವಮೊಗ್ಗ ಮುಂತಾದ ಕಡೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ನೆರೆಯಿಂದ ನಷ್ಟ ಉಂಟಾಗಿತ್ತು. ಈಗ ಬಂದಿರುವ ಪರಿಹಾರದ ಮೊತ್ತ, ಆ ಅವಧಿಯದ್ದು" ಎಂದು ಗೌಡ್ರು ಹೇಳಿದರು.
"ಈಗಿನ ಅತಿವೃಷ್ಟಿಯಿಂದ, 38ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ. ಕೇಂದ್ರದಿಂದ ಇದಕ್ಕೆ ಪರಿಹಾರ ಬರದೇ ಇರುವುದು ಬೇಸರದ ಸಂಗತಿ" ಎಂದು ದೇವೇಗೌಡ್ರು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ, "ಕೇಂದ್ರದಿಂದ ಸರಿಯಾಗಿ ಅನುದಾನ ಬಿಡುಗಡೆಗಾಗಿ ಇದೇ ತಿಂಗಳ 10ರಂದು ಬೆಂಗಳೂರಿನ ಗಾಂಧಿ ಪ್ರತಿಮೆಯಿಂದ ಫ್ರೀಡಂ ಪಾರ್ಕಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತೇನೆ" ಎಂದು ಗೌಡ್ರು ಎಚ್ಚರಿಕೆ ನೀಡಿದರು.