ನಂದಿ ಗಿರಿಧಾಮಕ್ಕೆ ಹೋಗುವ ಮುನ್ನ ಇದನ್ನೊಮ್ಮೆ ಗಮನಿಸಿ!
ಬೆಂಗಳೂರು, ಜು. 08: ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರವಾಸಿ ತಾಣಗಳಿಗೆ ಜನರು ಬರುವುದನ್ನು ನಿಷೇಧಿಸಲಾಗಿದೆ. ಸ್ಥಳೀಯರೂ ಕೂಡ ಪ್ರವಾಸಿಗರು ಬರುವುದು ಬೇಡ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರವಾಸಿಗರು ಮಾತ್ರ ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿದ್ದಾರೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕೊರೊನಾ ವೈರಸ್ ಹರಡುವ ಆತಂಕದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳುಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆ ನಂದಿಗಿರಿಧಾಮಕ್ಕೆ ಪ್ರವಾಸಿಗರು ಬರುವುದನ್ನು ನಿಷೇಧಿಸಲಾಗಿದೆ. ಆದರೆ ಜಿಲ್ಲಾಡಳಿತದ ನಿಷೇಧವನ್ನು ಮೀರಿಯೂ ಬರುತ್ತಿರುವ ಪ್ರವಾಸಿಗರು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ತಲೆ ನೋವಾಗಿದ್ದಾರೆ. ಈಗ ಮತ್ತೆ ಜುಲೈ 31ರ ವರೆಗೆ ನಂದಿ ಹಿಲ್ಸ್ಗೆ ಪ್ರವಾಸಿಗರು ಬರುವುದನ್ನು ನಿಷೇಧಿಸಿ ಆದೇಶ ಮಾಡಲಾಗಿದೆ. ಹೀಗಾಗಿ ಪ್ರವಾಸಿಗರು ನಂದಿ ಹಿಲ್ಸ್ಗೆ ಬರಬಾರದು ಎಂದು ಜಿಲ್ಲಾಧಿಕಾರಿ ಆರ್. ಲತಾ ಅವರು ಮನವಿ ಮಾಡಿದ್ದಾರೆ.
ಮುಂಜಾನೆ ನಂದಿ ಬೆಟ್ಟಕ್ಕೆ ಬಂದವರು ನಿರಾಸೆಯಿಂದ ವಾಪಸ್!
ಜಿಲ್ಲಾಡಳಿತದ ಆದೇಶ, ಮನವಿಯ ಹೊರತಾಗಿಯೂ ಪ್ರತಿನಿತ್ಯ ನೂರಾರು ಪ್ರವಾಸಿಗರು ನಂದಿಗಿರಿಗೆ ಬಂದು ವಾಪಸ್ ಹೋಗುತ್ತಿದ್ದಾರೆ. ಇನ್ನು ಮುಂದಾದರೂ ಈ ಕಡೆಗೆ ಯಾರೂ ಬರಬಾರದು ಎಂದು ಜಿಲ್ಲಾಡಳಿತ ಮತ್ತೊಮ್ಮೆ ಮನವಿ ಮಾಡಿದೆ.