ನಂದಿ ಬೆಟ್ಟ ಪ್ರವಾಸಿಗರಿಗೆ ಸಿಹಿ ಸುದ್ದಿ; ಡಿ.1ರಿಂದ ಪ್ರವೇಶಾವಕಾಶ
ಚಿಕ್ಕಬಳ್ಳಾಪುರ, ನವೆಂಬರ್ 30: ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಪ್ರವಾಸಿಗರ ಫೆವರೇಟ್ ಹಾಗೂ ಪ್ರೇಮಿಗಳ ಸ್ವರ್ಗದ ತಾಣ ನಂದಿ ಬೆಟ್ಟ ಪ್ರಿಯರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಿಹಿ ಸುದ್ದಿಯೊಂದನ್ನು ನೀಡಿದೆ.
ಬುಧವಾರದಿಂದ ಪ್ರವಾಸಿಗರಿಗೆ ನಂದಿ ಬೆಟ್ಟಕ್ಕೆ ಪ್ರವೇಶ ಆರಂಭವಾಗುತ್ತಿದ್ದು, ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ. ಆರ್. ಮಾಹಿತಿ ನೀಡಿದ್ದು, ಭೂ ಕುಸಿತದಿಂದ 3 ತಿಂಗಳ ನಂತರ ನಂದಿ ಬೆಟ್ಟಕ್ಕೆ ಪ್ರವಾಸಿಗರನ್ನು ಅನುಮತಿಸಲಾಗುತ್ತಿದೆ. ಹಾಳಾದ ರಸ್ತೆಗಳನ್ನು ಪುನರ್ ನಿರ್ಮಿಸಲಾಗಿದೆ ಎಂದು ಹೇಳಿದರು.
ಡಿಸೆಂಬರ್ 1ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ. ಶನಿವಾರ ಮತ್ತು ಭಾನುವಾರದಂದು ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕಳೆದ ಎರಡೂವರೆ ತಿಂಗಳುಗಳ ಕಾಲ ನಂದಿ ಬೆಟ್ಟಕ್ಕೆ ಹೋಗಲು ಅವಕಾಶವಿರಲಿಲ್ಲದ ಕಾರಣ ಪ್ರವಾಸಿಗರಿಗೆ ತೀರ ಬೇಸರವಾಗಿತ್ತು. ಆದರೆ ಜಿಲ್ಲಾಧಿಕಾರಿ ಬುಧವಾರದಿಂದ ಬೆಟ್ಟಕ್ಕೆ ಹೋಗಲು ಪ್ರವೇಶಕ್ಕೆ ಅವಕಾಶ ನೀಡಿದ್ದು ಪ್ರವಾಸಿಗರಿಗೆ ಖುಷಿ ನೀಡಿದೆ.
ವಾರಾಂತ್ಯದಲ್ಲಿ ನಂದಿ ಬೆಟ್ಟದತ್ತ ಹೆಚ್ಚು ಪ್ರವಾಸಿಗರು, ಪ್ರಕೃತಿ ಪ್ರಿಯರು ಆಗಮಿಸುತ್ತಾರೆ. ಹೀಗಾಗಿ ಜನಜಂಗುಳಿ ತಪ್ಪಿಸಲು ಶನಿವಾರ ಮತ್ತು ಭಾನುವಾರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಬೆಟ್ಟದಲ್ಲಿ ಹೋಟೆಲ್, ರೂಮ್ಗಳ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಶನಿವಾರ ಭಾನುವಾರ ಅವಕಾಶ ಇದೆ ಅಂತ ಜಿಲ್ಲಾಧಿಕಾರಿ ಲತಾ. ಆರ್ ತಿಳಿಸಿದ್ದಾರೆ.
ಜನ, ವಾಹನ, ಬೈಕ್, ಅಂಗಡಿಗಳ ವ್ಯವಹಾರ ಹೀಗೆ ಎಲ್ಲವೂ ಬಂದ್ ಆಗಿ ಸ್ವರ್ಗದಂತೆ ನಿರ್ಮಾಣವಾಗುತ್ತಿದೆ. ಪ್ರವಾಸಿಗರು ನಂದಿಬೆಟ್ಟದ ಸೌಂದರ್ಯವನ್ನು ಆಸ್ವಾದಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ಮುಂದೆ ಪ್ರವಾಸಿಗರ ಕಣ್ಣಿಗೆ ನಂದಿ ಗಿರಿಧಾಮ ಮತ್ತಷ್ಟು ಮುದ ನೀಡಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ನಂದಿ ಗಿರಿಧಾಮ ಬೆಂಗಳೂರಿಗರ ಪಾಲಿಗೆ ವಿಕೇಂಡ್ ಹಾಟ್ಸ್ಪಾಟ್ ಆಗಿದ್ದು, ಆದರೆ ಭಾರಿ ಮಳೆಗೆ ನಂದಿ ಬೆಟ್ಟದ ರಸ್ತೆ ಮಾರ್ಗ ಕುಸಿದು, ಬಂದ್ ಆಗಿತ್ತು. ಇದು ಪ್ರವಾಸಿಗರ ಪಾಲಿಗೆ ಸ್ವರ್ಗದಂತಿದ್ದ ನಂದಿ ಬೆಟ್ಟ ದೂರವಾಗಿತ್ತು. ಕೊಚ್ಚಿ ಹೋಗಿದ್ದ ರಸ್ತೆ ಮರು ನಿರ್ಮಾಣ ಕಾರ್ಯ ನವೆಂಬರ್ 11ಕ್ಕೆ ಮುಕ್ತಾಯವಾಗಿದೆ.
ನಂದಿ ಬೆಟ್ಟದಲ್ಲಿ ಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಮೇಲ್ಭಾಗದಲ್ಲಿ ಕಾಂಕ್ರಿಟ್ ಹಾಕಿ 10 ದಿನ ಕ್ಯೂರಿಂಗ್ ಮಾಡಲಾಗಿದೆ. ಹೀಗಾಗಿ ನಂದಿಬೆಟ್ಟಕ್ಕೆ ಬೈಕ್, ಕಾರು, ಬಸ್ಗಳಲ್ಲಿ ಹೋಗಬಹುದು. 4 ಸಿಮೆಂಟ್ ಕಾಂಕ್ರಿಟ್ ಪೈಪ್ಗಳನ್ನು ಅಳವಡಿಸಿ ಅದರ ಮೇಲೆ ಕಾಂಕ್ರಿಟ್ ರಸ್ತೆ ನಿರ್ಮಿಸುತ್ತಿದ್ದಾರೆ. ಬೆಟ್ಟದ ಮೇಲಿನಿಂದ ಬರುವ ನೀರು ಸರಾಗವಾಗಿ ಕೆಳಗೆ ಹರಿದು ಹೋಗಲಿದೆ ಎಂದು ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಅಭಿಯಂತರ ತಿಮ್ಮರಾಯಪ್ಪ ಮಾಹಿತಿ ಕೊಟ್ಟಿದ್ದಾರೆ.
ಒಟ್ಟಾರೆ ಕಳೆದ ಎರಡು ವರ್ಷಗಳ ನಂತರ ಕೊರೊನಾ ಹಾಗೂ ರಸ್ತೆಯ ಮಾರ್ಗದಿಂದ ಬಂದ್ ಆಗಿದ್ದ ನಂದಿ ಗಿರಿಧಾಮ ಮತ್ತೆ ಸಂಪೂರ್ಣವಾಗಿ ರೀ ಓಪನ್ ಆಗುತ್ತಿದ್ದು, ಪ್ರವಾಸಿಗರಿಗೆ ಮತ್ತಷ್ಟು ಸಂತಸವನ್ನು ತಂದಂತಾಗಿದೆ. ಬುಧವಾರ(ಡಿ.1) ದಿಂದ ಪ್ರವಾಸಿಗರು ನಂದಿ ಬೆಟ್ಟಕ್ಕೆ ಆಗಮಿಸಬಹುದಾಗಿದೆ.
Recommended Video