ಚಿಕ್ಕಬಳ್ಳಾಪುರದಲ್ಲಿ ಜಲಾಶಯಕ್ಕೆ ಹಾರಿ ಶಿಕ್ಷಕ ಆತ್ಮಹತ್ಯೆ
ಚಿಕ್ಕಬಳ್ಳಾಪುರ, ಆಗಸ್ಟ್ 19: ಶಿಕ್ಷಕರೊಬ್ಬರು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜಿ.ಬೊಮ್ಮಸಂದ್ರದ ನಿವಾಸಿ, ಶಿಕ್ಷಕ ಶ್ರೀನಾಥ ರೆಡ್ಡಿ (34) ಅವರು ಜಕ್ಕಳಮಡಗು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Recommended Video
ಇಂದು ಬೆಳಿಗ್ಗೆ ಜಲಾಶಯದಲ್ಲಿ ಮೃತದೇಹ ಪತ್ತೆಯಾಗಿದೆ. ಬಾದಿಮರಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಶ್ರೀನಾಥ ರೆಡ್ಡಿ ಅವರು ಸೋಮವಾರ ಶಾಲೆಗೆ ಹಾಜರಾಗಿರಲಿಲ್ಲ. ಆದಿನ ಸಂಜೆ ಮನೆಗೂ ಬಂದಿರಲಿಲ್ಲ. ಹೀಗಾಗಿ ಕುಟುಂಬದವರು ಅವರ ಹುಡುಕಾಟ ನಡೆಸಿದ್ದರು.
ಆಗ ಶ್ರೀನಾಥ ರೆಡ್ಡಿ ಅವರ ಬೈಕ್ ಹಾಗೂ ಮೊಬೈಲ್ ಜಕ್ಕಲಮಡಗು ಜಲಾಶಯದ ದಂಡೆ ಮೇಲೆ ಪತ್ತೆಯಾಗಿದ್ದವು. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಮಂಗಳವಾರ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು.
ಶ್ರೀನಾಥ ರೆಡ್ಡಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.