ಗಂಗಮ್ಮ ದೇವಾಲಯದ ವಿಷ ಪ್ರಸಾದ ದುರಂತ: ದ್ವೇಷ, ಅನೈತಿಕ ಸಂಬಂಧವೇ ಕಾರಣ?
ಚಿಂತಾಮಣಿ, ಜನವರಿ 28: ಚಾಮರಾಜನಗರದ ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ದೇವಾಲಯದಲ್ಲಿ ಸಂಭವಿಸಿದ ವಿಷ ಪ್ರಸಾದ ದುರಂತದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಂಣಿಯ ಗಂಗಮ್ಮ ದೇವಿ ದೇವಾಲಯದಲ್ಲೂ ನಡೆದ ವಿಷಪ್ರಸಾದ ದುರಂತ ರಾಜ್ಯವನ್ನು ಬೆಚ್ಚಿಬೀಳಿಸಿದೆ.
'ಎಲ್ಲರಿಗೂ ಒಳಿತು ಮಾಡು ದೇವರೇ...' ಎಂದು ಬೇಡುತ್ತ, ಎರಡು ಕೈಯಲ್ಲೂ ಭಕ್ತಿಯಿಂದ ಹಿಡಿದು, ಕಣ್ಣಿಗೊತ್ತಿಕೊಂಡು ತಿನ್ನುವ ಪ್ರಸಾದವೇ ವಿಷವಾದರೆ, ಜಗತ್ತಿನಲ್ಲಿ ನಂಬಿಕೆ ಎಂಬ ಪದಕ್ಕೆ ಯಾವ ಅರ್ಥವಿರುತ್ತದೆ?
ಗಂಗಮ್ಮ ದೇವಿ ಪ್ರಸಾದ ದುರಂತ, ಮೃತರ ಸಂಖ್ಯೆ 2ಕ್ಕೆ ಏರಿಕೆ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗಜಾನನ ವೃತ್ತದ ಬಳಿ ಇರುವ ಗಂಗಮ್ಮ ದೇವಿ ದೇವಾಲಯದಲ್ಲಿ ಪ್ರಸಾದ ಸೇವಿಸಿದ ಪರಿಣಾಮ ಇಬ್ಬರು ಮಹಿಳೆಯರು ಮೃತರಾಗಿದ್ದರು. ಹನ್ನೊಂದಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಅಷ್ಟಕ್ಕೂ ದೇವಾಲಯ ದುರಂತಕ್ಕೆ ಕಾರಣವೇನು ಎಂದು ಕಾರಣದ ಜಾಡುಹಿಡಿದು ಹೊರಟಾಗ ಪೊಲೀಸರು, 'ದ್ವೇಷ ಮತ್ತು ಅನೈತಿಕ ಸಂಬಂಧವೇ' ಈ ದುರಂತಕ್ಕೆ ಕಾರಣ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಅನೈತಿಕ ಸಂಬಂಧ
ಮೂಲಗಳ ಪ್ರಕಾರ, ಪ್ರಸಾದ ಸೇವಿಸಿ ಮೃತರಾದ ಸರಸ್ವತಮ್ಮ(56) ಅವರ ಅಳಿಯ ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ಸರಸ್ವತಮ್ಮ ಅವರಿಗೆ ತಿಳಿದಿದ್ದರಿಂದ ಈ ಪ್ರಸಾದಕ್ಕೆ ವಿಷ ಬೆರೆಸುವ ಪ್ರಹಸನ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಪ್ರಸಾದದಲ್ಲಿದ್ದ ಯಮರಾಯ!
ಶನಿವಾರ ಗಂಗಮ್ಮ ದೇವಿ ದೇವಾಲಯದಲ್ಲಿ ಪೂಜೆಯ ನಂತರ ಪ್ರಸಾದ ಸೇವಿಸಿದ್ದ ಇಬ್ಬರು ಮೃತರಾಗಿದ್ದರು. ತಮ್ಮ ಮಗಳ ಮನೆಗೆಂದು ಬಂದಿದ್ದ ಸರಸ್ವತಮ್ಮ ದೇವಾಲಯಕ್ಕೆ ಹರಕೆ ತೀರಿಸಲೆಂದು ಬಂದಿದ್ದರು. ಆದರೆ ಪೂಜೆಯ ನಂತರ ಪ್ರಸಾದ ಸೇವಿಸಿದ್ದರಿಂದ ಅವರು ಮೃತರಾದರು. ಕವಿತಾ ಎಂಬ ಇನ್ನೋರ್ವ ಯುವತಿಯೂ ಪ್ರಸಾದ ಸೇವಿಸಿದ ನಂತರ ಚಿಂತಾಜನಕ ಸ್ಥಿತಿಯಲ್ಲಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರೂ ಅಸುನೀಗಿದರು. ದುರಂತದಲ್ಲಿ ಹನ್ನೊಂದಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಪ್ರಸಾದ ಪ್ರಕರಣದ ಸಂಪೂರ್ಣ ಮಾಹಿತಿ: ಇದು ಮೂವರ ದ್ವೇಷದ ಕತೆ
ಪ್ರಯೋಗಾಲಯಕ್ಕೆ ಕೇಸರಿಬಾತ್
ಅಂದು ಭಕ್ತರಿಗೆ ಹಂಚಲಾಗಿದ್ದ ಕೇಸರಿಬಾತ್ ಅನ್ನು ಈಗಾಗಲೇ ಫಾರೆನ್ಸಿಕ್ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ವಿಷ ಯಾವುದು ಎಂದು ಪತ್ತೆ ಹೆಚ್ಚಲಾಗುತ್ತಿದೆ. ಪ್ರಸಾದ ತಯಾರಿಸಿದ್ದ ಲಕ್ಷ್ಮಿ ಎಂಬುವವರನ್ನು ಮತ್ತು ಹಂಚಿತ ಅಮರಾವತಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ಘಟನೆಯಲ್ಲಿ ನಮ್ಮ ಕೈವಾಡವಿಲ್ಲ ಎಂದು ಅವರು ಹೇಳಿದ್ದು, ಸರಸ್ವತಮ್ಮ ಅವರ ಅಳಿಯನಿಗೆ ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧವಿದ್ದಿದ್ದೇ ಈ ದುರಂತಕ್ಕೆ ಕಾರಣ ಎಂದು ಇಬ್ಬರು ಮಹಿಳೆಯರೂ ದೂರಿದ್ದಾರೆ.
ಮಾರ್ಗಸೂಚಿಯ ಅಗತ್ಯವಿದೆ
ಪದೇ ಪದೇ ಇಂತಹ ದುರಂತಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸರ್ಕಾರ ಕೆಲವು ಮಾರ್ಗಸೂಚಿ ಹೊರಡಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿಅವರು ತಿಳಿಸಿದ್ದಾರೆ.