ಪ್ರವಾಸಿಗರಿಗೆ ಡಿ.30 ರಿಂದ ಮೂರು ದಿನಗಳ ಕಾಲ ನಂದಿ ಬೆಟ್ಟ ಪ್ರವೇಶ ಬಂದ್
ಚಿಕ್ಕಬಳ್ಳಾಪುರ, ಡಿಸೆಂಬರ್ 28: ರಾಜಧಾನಿ ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರಿಯ ಗಿರಿಧಾಮ ನಂದಿ ಬೆಟ್ಟವು ಡಿಸೆಂಬರ್ 30 ರಿಂದ ಮೂರು ದಿನಗಳವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಹೊಸ ವರ್ಷಾಚರಣೆಗೆ ಅಧಿಕ ಜನರು ಬರುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಹೊಸ ವರ್ಷದಂದು ಮೋಜು, ಮದ್ಯಪಾನ ಮತ್ತು ಅಪಘಾತಗಳಿಗೆ ಕಾರಣವಾಗಬಹುದು. ಅಲ್ಲದೆ, ಹೆಚ್ಚಿನ ಸಂಖ್ಯೆಯ ಜನರ ಸೇರುವುದರಿಂದ ಕೋವಿಡ್-19 ಸೋಂಕು ಹರಡಲು ಕಾರಣವಾಗಬಹುದು ಎಂದು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ; ನಂದಿ ಬೆಟ್ಟದ ಪ್ರವಾಸಿಗರ ಗಮನಕ್ಕೆ
ಹೊಸ ವರ್ಷದ ಮುನ್ನಾದಿನದಿಂದ ಗಿರಿಧಾಮದಲ್ಲಿ ಸಂಭ್ರಮಾಚರಣೆ ನಿಷೇಧಿಸಬೇಕು ಎಂದು ಪೊಲೀಸರ ಸಲಹೆ ಮೇರೆಗೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2ರ ಬೆಳಿಗ್ಗೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ನಂದಿ ಬೆಟ್ಟ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದ್ದಾರೆ.
ಕೋವಿಡ್-19 ರ ಏಕಾಏಕಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಲಿ ಈ ಹಿಂದೆ ನಂದಿ ಬೆಟ್ಟ ಪ್ರವೇಶವನ್ನು ಸಾರ್ವಜನಿಕರಿಗೆ ನಿಷೇಧಿಸಲಾಗಿತ್ತು. ನಂತರ ಸೆಪ್ಟೆಂಬರ್ 7 ರಂದು ಮತ್ತೆ ಪುನರಾರಂಭಗೊಂಡಿತ್ತು.
ಪ್ರಸಿದ್ಧ ನಂದಿ ಗಿರಿಧಾಮವು ವಾರದ ದಿನಗಳಲ್ಲಿ ಸುಮಾರು 8,000 ಪ್ರವಾಸಿಗರು ಹೋಗುತ್ತಾರೆ. ವಾರಾಂತ್ಯದಲ್ಲಿ 10,000ಕ್ಕೂ ಹೆಚ್ಚು ಪ್ರವಾಸಿಗರು ಪ್ರಕೃತಿ ಸೌಂದರ್ಯ ವೀಕ್ಷಣೆಗೆ ಆಗಮಿಸುತ್ತಾರೆ.