ಮಂಚನಬೆಲೆ ಕೆರೆಗಳಿಗೂ ನೀರು ತುಂಬಿಸುವ ಯೋಜನೆ: ಸುಧಾಕರ್
ಚಿಕ್ಕಬಳ್ಳಾಪುರ, ಆಗಸ್ಟ್ 29: ಎತ್ತಿನಹೊಳೆ ಅಥವಾ ಎಚ್ಎನ್ ವ್ಯಾಲಿ ಯೋಜನೆಯಿಂದ ಮಂಚನಬೆಲೆಯ ಎರಡು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, "ಜಿಲ್ಲೆಗೆ ಕುಡಿಯುವ ನೀರೊದಗಿಸುವ ಯೋಜನೆಗೆ ಪ್ರಥಮ ಆದ್ಯತೆ ನೀಡಿದ್ದೇನೆ. ಎಚ್ಎನ್ ವ್ಯಾಲಿಯಿಂದ ದಿಬ್ಬೂರು ಪಂಚಾಯಿತಿ ಒಂದರಲ್ಲೇ ಏಳು ಕೆರೆಗಳು ತುಂಬುತ್ತಿವೆ. ಇನ್ನು ಮಂಚನಬೆಲೆಯಲ್ಲೂ ಕೆರೆ ತುಂಬಿಸುವ ಯೋಜನೆ ರೂಪಿಸಲಾಗುವುದು" ಎಂದರು.
1 ವರ್ಷದಲ್ಲಿ ಚಿಕ್ಕಬಳ್ಳಾಪುರದಲ್ಲಿನ ಅಭಿವೃದ್ಧಿ ಕಾರ್ಯಗಳ ಪಟ್ಟಿ
"ಜಿಲ್ಲೆಯಲ್ಲಿ 5,000 ಜನರಿಗೆ ವಸತಿ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಒಂದು ವರ್ಷದಲ್ಲಿ ಮನೆಗಳು ನಿರ್ಮಾಣಗೊಳ್ಳಲಿವೆ. ಲಭ್ಯವಿರುವ ಮತ್ತಷ್ಟು ಸರ್ಕಾರಿ ಜಾಗಗಳನ್ನು ವಸತಿ ಯೋಜನೆಗೆ ಗುರುತಿಸಲಾಗುತ್ತಿದೆ" ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ನಂತರ ದಿಬ್ಬೂರು ಕೆರೆಗೆ ಬಾಗಿನ ಸಮರ್ಪಿಸಿದರು. ಸಂಸದ ಬಿ.ಎನ್.ಬಚ್ಚೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ಪಾಲ್ಗೊಂಡಿದ್ದರು.
ಬಾಗೇಪಲ್ಲಿ ಕೈಗಾರಿಕಾ ವಲಯವಾಗಿ ಅಭಿವೃದ್ಧಿ
"ಬಾಗೇಪಲ್ಲಿ ಕೈಗಾರಿಕಾ ವಲಯವಾಗಿ ಅಭಿವೃದ್ಧಿಯಾಗಲಿದ್ದು, ಇದಕ್ಕೆ ಪೂರಕವಾಗಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮತ್ತಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ದೇಹದಲ್ಲಿ ರಕ್ತನಾಳದಂತೆ ದೇಶದಲ್ಲಿ ರಸ್ತೆ, ಕೃಷಿ, ಶಿಕ್ಷಣ ಮುಖ್ಯ" ಎಂದರು. ಬಾಗೇಪಲ್ಲಿಯಲ್ಲಿ ಲೋಕೋಪಯೋಗಿ ಇಲಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಅವಕಾಶಗಳು ಕುಟುಂಬಕ್ಕೆ ಸೀಮಿತವಲ್ಲ
ಕಾಂಗ್ರೆಸ್ ಪಕ್ಷದ ಇತ್ತೀಚೆಗಿನ ಬೆಳವಣಿಗೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ "ನಮ್ಮನ್ನಾಳುತ್ತಿದ್ದ ಬ್ರಿಟಿಷರ ವಿರುದ್ಧ ಸಿಡಿದೆದ್ದು, ಸ್ವಾತಂತ್ರ್ಯ ಹೋರಾಟಗಾರರು ಸಮಾನತೆ ಹಾಗೂ ಪ್ರಜಾಪ್ರಭುತ್ವವನ್ನು ತಂದರು. ಈ ವ್ಯವಸ್ಥೆ ಕುರಿತು ಕೆಲ ರಾಜಕೀಯ ನಾಯಕರಿಗೆ ಬಹಳ ನಿಧಾನವಾಗಿ ಪ್ರಜ್ಞೆ ಬಂದಿದೆ. ಇಂತಹವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಒಂದು ಕುಟುಂಬಕ್ಕೆ ಅಥವಾ ಒಬ್ಬ ವ್ಯಕ್ತಿಗೆ ಅವಕಾಶಗಳು ಸೀಮಿತವಾಗಬಾರದು. ನಾನು ಮೊದಲಿನಿಂದಲೂ ಕುಟುಂಬ ರಾಜಕಾರಣವನ್ನು, ಏಕಚಕ್ರಾಧಿಪತ್ಯವನ್ನು ವಿರೋಧಿಸುತ್ತೇನೆ" ಎಂದರು.
ನೀರಿನ ಸಮಸ್ಯೆ ಪರಿಹರಿಸಲು ಆಂಧ್ರ ಜೊತೆ ನೀರು ಹಂಚಿಕೆ: ಸುಧಾಕರ್
ಎತ್ತಿನಹೊಳೆ ಯೋಜನೆಗೆ ಹೆಚ್ಚು ಅನುದಾನ ಬೇಕಿದೆ
* ಎತ್ತಿನಹೊಳೆ ಯೋಜನೆಗೆ ಹೆಚ್ಚು ಅನುದಾನ ಬೇಕಿದ್ದು, ಬಾಂಡ್ ಬಿಡುಗಡೆ ಮಾಡಿ ಅನುದಾನ ಸಂಗ್ರಹಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
* ಬೆಂಗಳೂರು ಗಲಭೆ ತನಿಖೆಗೆ ಕ್ಲೇಮ್ ಕಮಿಷನರ್ ಆಗಿ ನಿವೃತ್ತ ನ್ಯಾ.ಎಚ್.ಎಸ್.ಕೆಂಪಣ್ಣ ನೇಮಕಗೊಂಡಿದ್ದು, ಕಿಡಿಗೇಡಿಗಳಿಂದ ಪ್ರತಿ ಪೈಸೆ ವಸೂಲಾಗಲಿದೆ ಎಂದು ಸಚಿವರು ಹೇಳಿದ್ದಾರೆ.
* ಜನಧನ ಯೋಜನೆಯಡಿ 6 ವರ್ಷಗಳಲ್ಲಿ 40 ಕೋಟಿ ಖಾತೆಗಳು ತೆರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಕೆ ಸಚಿವರು ಧನ್ಯವಾದ ಸಲ್ಲಿಸಿದ್ದಾರೆ.
ಎನ್ಪಿಎಸ್ ಪಿಂಚಣಿ ಯೋಜನೆ ಜಾರಿಗೆ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಸಂಸ್ಥೆಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಚಿವರಿಗೆ ಧನ್ಯವಾದ ತಿಳಿಸಿದೆ.
ಚಿಂತಾಮಣಿಯಲ್ಲಿ ದೊಡ್ಡ ಕೈಗಾರಿಕಾ ವಲಯ ನಿರ್ಮಾಣ: ಸುಧಾಕರ್
15 ಕೋಟಿ ರೂ. ವೆಚ್ಚದಲ್ಲಿ ರಸ್ತೆ
ಗುಂಡ್ಲಗುರ್ಕಿ ಕ್ರಾಸ್ ನಿಂದ ಆಕತಿಮ್ಮನಹಳ್ಳಿ, ಹೊಸಹಳ್ಳಿ, ಸೊಪ್ಪಹಳ್ಳಿ ಮಾರ್ಗವಾಗಿ ರಾಯಪ್ಪನಹಳ್ಳಿವರೆಗೆ 9.50 ಕಿ.ಮೀ., ಹೊಸೂರಿನಿಂದ ಕಂಡಕನಹಳ್ಳಿ, ಗಿಡ್ನಹಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-234 ವರೆಗೆ 5.78 ಕಿ.ಮೀ., ಅಜ್ಜವಾರ, ತಿಪ್ಪಹಳ್ಳಿ ಮಾರ್ಗವಾಗಿ ಜಾತವಾರವರೆಗೆ 6.63 ಕಿ.ಮೀ. ಉದ್ದದ ರಸ್ತೆಗಳನ್ನು ಒಟ್ಟು 15.78 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗಳಿಗೆ ಸಚಿವ ಡಾ.ಕೆ.ಸುಧಾಕರ್ ಗುದ್ದಲಿಪೂಜೆ ನೆರವೇರಿಸಿದರು.