ನಂದಿ ಗಿರಿಧಾಮ ಪ್ರವಾಸಿಗರಿಗೆ ಮುಕ್ತ, ಷರತ್ತು ಅನ್ವಯ
ಚಿಕ್ಕಬಳ್ಳಾಪುರ, ಮಾರ್ಚ್ 24; ವಾರಾಂತ್ಯದಲ್ಲಿ ನಂದಿ ಗಿರಿಧಾಮಕ್ಕೆ ಪ್ರವಾಸಿಗರು ಭೇಟಿ ನೀಡಲು ಹಾಕಿದ್ದ ತಡೆಯನ್ನು ತೆಗೆದು ಹಾಕಲಾಗಿದೆ. ಮಾರ್ಚ್ 26ರಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹೇಳಿದೆ.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಂದಿ ಗಿರಿಧಾಮದ ಅಭಿವೃದ್ಧಿ ಬಗ್ಗೆ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಆರ್. ಲತಾ, "ಈ ವಾರಾಂತ್ಯದಿಂದಲೇ ಪ್ರವೇಶ ಪತ್ರ ಪಡೆದ ಪ್ರವಾಸಿಗರಿಗೆ ನಂದಿ ಗಿರಿಧಾಮ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ" ಎಂದರು.
ನಂದಿ ಗಿರಿಧಾಮದಲ್ಲಿ ಪ್ರವಾಸಿಗರಿಗೆ ತಡೆ, ಪ್ರತಿಭಟನೆ
ನಂದಿ ಗಿರಿಧಾಮಕ್ಕೆ ಶನಿವಾರ ಪ್ರವಾಸಕ್ಕೆ ಬರುವವರು ಶುಕ್ರವಾರ ಸಂಜೆ 6 ಗಂಟೆಯ ಒಳಗೆ ಆನ್ಲೈನ್ ಮೂಲಕ ಟಕೆಟ್ ಪಡೆಯಬೇಕು. ಭಾನುವಾರದ ಪ್ರವಾಸಕ್ಕೆ ಬರುವವರು ಶನಿವಾರ ಸಂಜೆ 6 ಗಂಟೆಯೊಳಗೆ ಟಕೆಟ್ ಪಡೆಯಬೇಕು.
ಮೈಸೂರು ದಸರಾ ಮಾದರಿಯಲ್ಲೇ ನಂದಿ ಗಿರಿಧಾಮದಲ್ಲಿ ಶಿವೋತ್ಸವ
ಪ್ರತಿನಿತ್ಯ 2,500 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಶೇ 50ರಷ್ಟು ಟಿಕೆಟ್ ಆನ್ಲೈನ್ ಮೂಲಕ ಮತ್ತು ಶೇ 50ರಷ್ಟು ಟಿಕೆಟ್ ಆಫ್ಲೈನ್ ಮೂಲಕ ಮಾರಾಟ ಮಾಡಲಾಗುತ್ತದೆ.
ವಿಶ್ವವಿಖ್ಯಾತ ನಂದಿ ಬೆಟ್ಟದಲ್ಲಿ ರೋಪ್ವೇ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಸ್ತು
ಆನ್ಲೈನ್ನಲ್ಲಿ ಟಿಕೆಟ್ ಸಿಗದವರು ನಂದಿ ಗಿರಿಧಾಮದ ಬಳಿ ಸಕ್ಷಮ ಪ್ರಾಧಿಕಾರ ತೆರೆದಿರುವ ಕೌಂಟರ್ನಲ್ಲಿ ಟಿಕೆಟ್ ಖರೀದಿ ಮಾಡಿ ಪ್ರವಾಸ ಮಾಡಬಹುದು. ಟಿಕೆಟ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ನಂದಿ ಗಿರಿಧಾಮಕ್ಕೆ ಪ್ರವಾಸ ಬರುವವರು www.kstdc.co ವೆಬ್ ಸೈಟ್ ಮೂಲಕ ಟಿಕೆಟ್ ಖರೀದಿ ಮಾಡಬಹುದಾಗಿದೆ. ಟಿಕೆಟ್ ಇಲ್ಲದವರಿಗೆ ಯಾವುದೇ ಕಾರಣಕ್ಕೂ ಆಗಮಿಸಲು ಅವಕಾಶ ನೀಡುವುದಿಲ್ಲ.
ಗಿರಿಧಾಮದ ಮೇಲೆ 1000 ಬೈಕ್, ಕಾರು, ಮಿನಿ ಬಸ್ ಸೇರಿದಂತೆ 300 ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅನುಮತಿ ಇದೆ. ಅಷ್ಟು ವಾಹನಗಳನ್ನು ಮಾತ್ರ ಗಿರಿಧಾಮದ ಮೇಲಕ್ಕೆ ಬಿಡಲಾಗುತ್ತದೆ.
ಕೋವಿಡ್ ಕಾರಣದಿಂದಾಗಿ ವಾರಾಂತ್ಯದ ದಿನಗಳಲ್ಲಿ ಕೊಠಡಿ ಕಾಯ್ದಿರಿಸಿದ ಪ್ರವಾಸಿಗರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ನಂದಿ ಗಿರಿಧಾಮಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಇದಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಈಗ ವಾರಾಂತ್ಯದ ಶನಿವಾರ ಎಲ್ಲಾ ಪ್ರವಾಸಿಗರಿಗೆ ನಂದಿ ಗಿರಿಧಾಮಕ್ಕೆ ಅವಕಾಶ ನೀಡಲಾಗಿದೆ. ಆದರೆ ಟಿಕೆಟ್ ಖರೀದಿ ಮಾಡುವುದು ಕಡ್ಡಾಯವಾಗಿದೆ.
ಪ್ರವಾಸಿಗರ ಪ್ರತಿಭಟನೆ; ಕಳೆದ ಭಾನವಾರ ಬೆಂಗಳೂರು ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಆದರೆ ಅವರ ಭೇಟಿಗೆ ಅವಕಾಶ ನೀಡದೆ ಪೊಲೀಸರು ವಾಪಸ್ ಕಳಿಸಿದ್ದರು.
ವಾರಾಂತ್ಯದಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಸಾಮಾನ್ಯ ಪ್ರವಾಸಿಗರನ್ನು ಅಧಿಕಾರಿಗಳು ವಾಪಸ್ ಕಳಿಸಿದ್ದಾರೆ. ಇದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರವಾಸಿಗರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದರು.
ನಂದಿ ಗಿರಿಧಾಮಕ್ಕೆ ವಾರಾಂತ್ಯದಲ್ಲಿ ಸುಮಾರು 10 ರಿಂದ 15 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿರುತ್ತದೆ. ಭಾನುವಾರ ಪ್ರವೇಶ ದ್ವಾರದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಕಾವಲು ನಿಂತಿದ್ದರು. ಪ್ರವೇಶ ನೀಡದೇ ಜನರನ್ನು ವಾಪಸ್ ಕಳಿಸಿದ್ದರು.
ಪ್ರವಾಸಿಗರಿಗೆ ನಿರ್ಬಂಧ; 2021ರ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ನಂದಿ ಗಿರಿಧಾಮದ ರಸ್ತೆ ಕುಸಿದ ಪರಿಣಾಮ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಆಗ ಗಿರಿಧಾಮದ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು.
ರಸ್ತೆ ದುರಸ್ಥಿ ಕಾಮಗಾರಿ ಪೂರ್ಣಗೊಂಡ ಬಳಿಕ ಡಿಸೆಂಬರ್ 1ರಿಂದ ಗಿರಿಧಾಮಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶ ನೀಡಲಾಗಿತ್ತು. ಆದರೆ ವಾರಾಂತ್ಯದ ಶನಿವಾರ ಮತ್ತು ಭಾನುವಾರದ ದಿನಗಳಂದು ಮಾತ್ರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಗಿರಿಧಾಮದ ಹೋಟೆಲ್ ಮತ್ತು ವಸತಿ ಗೃಹಗಳಲ್ಲಿ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ವಾರಾಂತ್ಯದ ದಿನಗಳಂದು ಪ್ರವೇಶವಿರುತ್ತದೆ ಎಂದು ಜಿಲ್ಲಾಡಳಿತ ಹೇಳಿತ್ತು.
ಪ್ರಕೃತಿ ರಮಣೀಯತೆ ಮತ್ತು ಸಸ್ಯಗಳು ಹಾಗೂ ಜೀವವೈವಿಧ್ಯತೆಯ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು ವಿಶಿಷ್ಠವಾಗಿ ಗುರುತಿಸಿಕೊಂಡಿರುವ ನಂದಿಗಿರಿಧಾಮ ಜಿಲ್ಲೆಯ ಅಮೂಲ್ಯವಾದ ಆಸ್ತಿ ಮತ್ತು ಹೆಮ್ಮೆಯಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಸ್ವಚ್ಛತೆ ಕಾಪಾಡುವ ಮೂಲಕ ಗಿರಿಧಾಮದ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿತ್ತು.
Recommended Video
ಅಂದಿನಿಂದಲೂ ವಾರಂತ್ಯದ ದಿನಗಳಲ್ಲಿ ಸಾಮಾನ್ಯ ಪ್ರವಾಸಿಗರಿಗೆ ಗಿರಿಧಾಮದ ಭೇಟಿಗೆ ಅವಕಾಶವಿರಲಿಲ್ಲ. ಈಗ ವಾರಾಂತ್ಯದಲ್ಲಿ ಎಲ್ಲರೂ ಭೇಟಿ ನೀಡಬಹುದಾಗಿದೆ. ಆದರೆ ಟಿಕೆಟ್ ಪಡೆಯುವುದು ಕಡ್ಡಾಯವಾಗಿದೆ.