ಕಾಂಗ್ರೆಸ್ ಪಾದಯಾತ್ರೆ ಬೀದಿ ನಾಟಕವಿದ್ದಂತೆ: ಸುಧಾಕರ್ ಲೇವಡಿ
ಚಿಕ್ಕಬಳ್ಳಾಪುರ ಆಗಸ್ಟ್ 21: ಸ್ವಾತಂತ್ರ್ಯ ಬಂದು 75 ವರ್ಷದಲ್ಲಿ ರಾಷ್ಟ್ರಧ್ವಜವನ್ನೇ ಮರೆತಿದ್ದ ಕಾಂಗ್ರೆಸ್ನವರು ಪ್ರಧಾನಿಗಳ 'ಹರ್ ಘರ್ ತಿರಂಗಾ ಘೋಷಣೆ ನಂತರ ಬೆಂಗಳೂರಿನ ಬೀದಿಗಳಲ್ಲಿ ಧ್ವಜ ಹಿಡಿದು ಪಾದಯಾತ್ರೆ ಮಾಡುತ್ತಿದ್ದಾರೆ. ಇದೊಂದು ಕಾಂಗ್ರೆಸ್ನ ಬಯಲು ನಾಟಕ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಲೇವಡಿ ಮಾಡಿದ್ದಾರೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಾದಯಾತ್ರೆ ಎಂದು ಬಯಲು ನಾಟಕ ಮಾಡುತ್ತಿರುವ ಕಾಂಗ್ರೆಸ್ ಗೆ ಕಳೆದ 75 ವರ್ಷದಲ್ಲಿ ರಾಷ್ಟ್ರಧ್ವಜ ನೆನಪಿತ್ತೆ?. ಈಗ ಪ್ರಧಾನಿಯವರ ಘೋಷಣೆಯ ನಂತರ ಬೀದಿ ಬೀದಿಗಳಲ್ಲಿ ಧ್ವಜ ಹಿಡಿದು ಪಾದಯಾತ್ರೆ ಮಾಡಿ ಮಾತನಾಡುತ್ತಿದ್ದಾರೆ ಎಂದು ಹರ್ ಘರ್ ತಿರಂಗಾ ಕುರಿತು ಕಾಂಗ್ರೆಸ್ ಹೇಳಿಕೆಗೆ ಅವರು ತಿರುಗೇಟು ನೀಡಿದರು.
ಬಿಜೆಪಿ ಒಂದು ಯಶಸ್ವಿ ಆಡಳಿತ ನೀಡಿದ ಹಿನ್ನೆಲೆ ಜನೋತ್ಸವ ಆಚರಿಸಲಿದೆ. ಈ ಬಗ್ಗೆ ಜನರು ಮಾತನಾಡಬೇಕು. ಮುಂದಿನ 2023ರ ಚುನಾವಣೆಯಲ್ಲಿ ಜನರು ಯಾವ ಪಕ್ಷಕ್ಕೆ ಅಧಿಕಾರ ನೀಡುವ ಮೂಲಕ ಉತ್ತರ ಹೇಳುತ್ತಾರೆ. ಬಿಜೆಪಿ ಭ್ರಷ್ಟವಾಗಿದ್ದರೆ 2018ರಲ್ಲಿ ಯಾಕೆ ಕಾಂಗ್ರೆಸ್ ಯಾಕೆ ಸೋಲುಡಿತು. ಈ ಬಗ್ಗೆ ಕಾಂಗ್ರೆಸ್ ನಾಯಕರು ಪರಾಮರ್ಶೆ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಅವರ ಜನೋತ್ಸವ ಕುರಿತ ಹೇಳಿಕೆ ಸುಧಾಕರ್ ಪ್ರತಿಕ್ರಿಯಿಸಿದರು.
ವೈಯಕ್ತಿ ಉತ್ಸವ ನೋಡಿ ಜನೋತ್ಸವ ಮಾಡುತ್ತಿಲ್ಲ
ಆರೋಪ ಮಾಡುವಾಗ ವಿಷಯದ ಬಗ್ಗೆ ಸ್ಪಷ್ಟತೆ ಇಟ್ಟುಕೊಂಡು ಮಾತನಾಡಬೇಕು. ಕಳೆದ ಮೂರು ವರ್ಷದಲ್ಲಿ ಸರ್ಕಾರದ ಸಾಧನೆಗಳು ಮತ್ತು ಜನಪರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಮುಟ್ಟಿಸಲು ಜನೋತ್ಸವ ಆಯೋಜಿಸಲಾಗಿದೆ. ಸರ್ಕಾರದ ಸಾಧನೆಗಳ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಡುತ್ತಿದ್ದೇವೆ, ಯಾರದೋ ವೈಯಕ್ತಿಕ ಉತ್ಸವವನ್ನು ಕಂಡು ಜನೋತ್ಸವ ಮಾಡುತ್ತಿಲ್ಲ.
ಈಗಾಗಲೇ ಜನೋತ್ಸವವನ್ನು ಯೋಜಿಸಿದ್ದೆವು, ಆದರೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು, ಈಗ ಕಾಲ ಕೂಡಿ ಬಂದಿದೆ ಹಾಗಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಮೊದಲ ಕಾರ್ಯಕ್ರಮ ದೊಡ್ಡಬಳ್ಳಾಪುರದಲ್ಲಿ ನಡೆಯಲಿದ್ದು, ಇನ್ನೂ ನಾಲ್ಕೆದು ಕಾರ್ಯಕ್ರಮವಗಳನ್ನು ರಾಜ್ಯದಲ್ಲಿ ಆಯೋಜಿಸಲು ಪಕ್ಷ ನಿರ್ಧರಿಸಿದೆ ಎಂದ ಅವರು ವಿವರಿಸಿದರು.
ಸಂವಿಧಾನಕ್ಕೆ ಅಪಚಾರವಾಗಿದ್ದರೆ ತೋರಿಸಲಿ
ಸಂವಿಧಾನಕ್ಕೆ ಬಿಜೆಪಿಯಿಂದ ಅಪಾಯ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಳೆದ 8 ವರ್ಷಗಳಿಂದ ನರೇಂದ್ರಮೋದಿ ಅವರು ಪ್ರಧಾನಿಯಾಗಿದ್ದಾರೆ. ಅದರ ಹಿಂದೆ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಐದು ವರ್ಷ ದೇಶದ ಪ್ರಧಾನಿಯಾಗಿದ್ದರು. ಒಟ್ಟು 13 ವರ್ಷದಲ್ಲಿ ಸಂವಿಧಾನಕ್ಕೆ ಆಗಿರುವ ಧಕ್ಕೆಯಾದರೂ ಏನು? ಎಂದು ಸುಧಾಕರ್ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.
ಸಂವಿಧಾನಕ್ಕೆ ಏನು ಅಪಚಾರವಾಗಿದೆ ಎಂಬುದನ್ನು ಸುಖಾಸುಮ್ಮನೆ ಆರೋಪಿಸುತ್ತಿರುವರು ತೋರಿಸಿ ನಂತರ ಮಾತನಾಡಲಿ. ಅದನ್ನು ಬಿಟ್ಟು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರಿಗೆ ಮಂಕು ಬೂದಿ ಎರಚುವ ಕೆಲಸ ಮಾಡಬೇಡಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.