ಅಕ್ರಮ ಸ್ಫೋಟಕಗಳ ಪತ್ತೆಗೆ ಜಂಟಿ ಕಾರ್ಯಾಚರಣೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ!
ಬೆಂಗಳೂರು, ಫೆ. 25: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಸ್ಫೋಟ ದುರ್ಘಟನೆ ಬಳಿಕ ಗಣಿ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಸ್ಫೋಟಕಗಳ ಅಡಿಟ್ ಮಾಡಲು ಇದೀಗ ತೀರ್ಮಾನ ಮಾಡಲಾಗಿದ್ದು, ಈ ಕುರಿತು ದಾವಣಗೆರೆಯಲ್ಲಿ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸರ್ಕಾರದ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ರಾಜ್ಯದಲ್ಲಿನ ಸ್ಫೋಟಕಗಳನ್ನು ಪತ್ತೆ ಹಚ್ಚಲು ಎಲ್ಲಾ ಗಣಿಗಾರಿಕೆ ಕೇಂದ್ರಗಳ ಮೇಲೆ ವಿಶೇಷ ಕಾರ್ಯಾಚರಣೆ ಮಾಡಲಾಗುವುದು. ಆ ಮೂಲಕ ಒಟ್ಟಾರೆ ಸ್ಪೋಟಕಗಳ ಆಡಿಟ್ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗಣಿ ಮತ್ತು ಗೃಹ ಇಲಾಖೆ ಅಧಿಕಾರಿಗಳ ತಂಡಗಳು ಜಂಟಿಯಾಗಿ ಈ ಕಾರ್ಯಾಚರಣೆ ಮಾಡಲಿದ್ದು, ರಾಜ್ಯದಲ್ಲಿನ ಅಕ್ರಮ ಹಾಗೂ ಸಕ್ರಮ ಗಣಿಗಾರಿಕೆ ಕೇಂದ್ರಗಳ ವಿರುದ್ಧ ಜಂಟಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಜಂಟಿ ಕಾರ್ಯಾಚರಣೆ ಮಾಡಲು ಸಂಬಂಧಿಸಿದ ಎಲ್ಲ ಇಲಾಖೆಗಳ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರತಿ ತಿಂಗಳು ತಪಾಸಣೆ
ಇದುವರೆಗೆ ಪ್ರತಿ 3 ತಿಂಗಳಿಗೊಮ್ಮೆ ಗಣಿಗಾರಿಕೆ ಕೇಂದ್ರಗಳಲ್ಲಿ ಸ್ಫೋಟಕಗಳ ತಪಾಸಣೆ ಮಾಡಲಾಗುತ್ತಿತ್ತು. ಈಗ ಆ ನಿಯಮವನ್ನು ಬದಲಾಯಿಸಲಾಗಿದ್ದು, ಈ ಸಂಬಂಧ ವಿಶೇಷ ಸುತ್ತೋಲೆ ಹೊರಡಿಸಲಾಗಿದೆ. ಇನ್ನುಮುಂದೆ ಪ್ರತಿ 15 ದಿನಗಳಿಂದ 1 ತಿಂಗಳ ಅವಧಿಯಲ್ಲಿ ಒಂದು ಬಾರಿ ರಾಜ್ಯದ ಎಲ್ಲ ಗಣಿಗಾರಿಕೆ ಕೇಂದ್ರಗಳಲ್ಲಿ ತಪಾಸಣೆ ಮಾಡುತ್ತೇವೆ. ಅಲ್ಲಿ ಸಂಗ್ರಹಿಸಿರುವ ಸ್ಫೋಟಕಗಳನ್ನು ಪತ್ತೆ ಮಾಡಲಾಗುವುದು. ಅಕ್ರಮ-ಸಕ್ರಮ ಸ್ಪೋಟಕಗಳನ್ನು ಪತ್ತೆ ಮಾಡಿ, ಅಕ್ರಮವಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಸ್ಪೋಟಕಗಳ ಅಡಿಟ್ಗಾಗಿ ಜಂಟಿ ಕಾರ್ಯಾಚರಣೆ ಬಗ್ಗೆ ಗಣಿ ಹಾಗೂ ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಜತೆ ಚರ್ಚಿಚಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪಿಎಸ್ಐ ಅಮಾನತು
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಹಿರೇನಾಗವಲ್ಲಿ ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಸಬ್ಇನ್ಸಪೆಕ್ಟರ್ ಒಬ್ಬರನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ನಿರ್ಲಕ್ಷ ಆರೋಪದ ಮೇಲೆ ಪಿಎಸ್ಐ ಗೋಪಾಲ ರೆಡ್ಡಿ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ ಎಂದು ಇದೇ ಸಂದರ್ಭದಲ್ಲಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಸ್ಫೋಟ ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ತೋರಿದ ಅತೀವ ನಿರ್ಲಕ್ಷದ ಆರೋಪಡಿ ಗೊಪಾಲ ರೆಡ್ಡಿ ಅವರನ್ನು ನಿರ್ಲಕ್ಷ ಹಾಗೂ ಬೇಜವಾಬ್ದಾರಿತನ ವರ್ತನೆ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದಿದ್ದಾರೆ.
ಡಿಜೆ ಹಳ್ಳಿ ಗಲಭೆ; ಎನ್ಐಎ ಚಾರ್ಜ್ಶೀಟ್
ಡಿಜೆ ಹಳ್ಳಿ ಹಾಗೂ ಕೆ ಜೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಚಾರ್ಜ್ ಶೀಟ್ನ್ನು ಸಲ್ಲಿಸಿದೆ. ಅಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿದ್ದು ಹೇಗೆ ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಇದೇ ವಿಷಯವನ್ನು ನಾವು ವಿಧಾನಸಭೆಯಲ್ಲೂ ಹೇಳಿದ್ದೆವು. ಅದನ್ನೇ ಎನ್ಐಎ ತನ್ನ ಚಾರ್ಜ್ಶೀಟ್ನಲ್ಲಿ ಹೇಳಿದೆ. ಈ ಕೃತ್ಯ ಎಸಗಲು ಸಾಮಾಜಿಕ ಜಾಲತಾಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಕುರಿತು ಕೋರ್ಟ್ ತನ್ನ ಆದೇಶ ನೀಡಲಿದೆ ಎಂದು ಬೊಮ್ಮಾಯಿ ಹೇಳಿದರು.
ಹಲವರಿಂದ ಮೀಸಲಾತಿಗೆ ಮನವಿ
ಮೀಸಲಾತಿಗಾಗಿ ಲಿಂಗಾಯತ ಪಂಚಮಸಾಲಿ ಹಾಗೂ ಕುರುಬ ಸಮುದಾಯಗಳ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿರುವ ಬಸವರಾಜ್ ಬೊಮ್ಮಾಯಿ ಅವರು, ಹಲವು ಸಮುದಾಯಗಳು ಮೀಸಲಾತಿಗಾಗಿ ಮನವಿ ಮಾಡಿವೆ. ಇವರೆಲ್ಲರ ಮನವಿಗಳನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಕಳುಹಿಸಲಾಗಿದೆ. ಮೀಸಲಾತಿ ಸೌಲಭ್ಯ ಕಲ್ಪಿಸಲು ಸಿಎಂ ಯಡಿಯೂರಪ್ಪ ಕ್ರಮ ಕೈಗೊಂಡಿದ್ದಾರೆ. ಎಲ್ಲ ವರ್ಗಗಳ ಜನರಿಗೆ ನ್ಯಾಯ ಕೊಡಿಸಲು ಸಿಎಂ ಬದ್ಧರಾಗಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.