ಕುಟುಂಬ ರಾಜಕಾರಣ ಮಾಡಲು ಜೆಡಿಎಸ್ ಪಕ್ಷ ಹುಟ್ಟಿರೋದು: ಪುಟ್ಟಸ್ವಾಮಿ
ಚಿಕ್ಕಬಳ್ಳಾಪುರ, ನವೆಂಬರ್ 25: ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ಪರ ಮತಯಾಚನೆ ಮಾಡಿದ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ "ಜೆಡಿಎಸ್ ಪಕ್ಷ ಜನಿಸಿರೋದೇ ಕುಟುಂಬ ರಾಜಕಾರಣ ಮಾಡಲು" ಎಂದು ಟೀಕಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಮಾತನಾಡಿದ ಪುಟ್ಟಸ್ವಾಮಿ ಅವರು "ರಾಜ್ಯದ ಜನರ ಸಮಸ್ಯೆಗಳಿಗೆ ಗಮನ ಕೊಡದೇ ರಾಜಕಾರಣಕ್ಕೆ ಕುಟುಂಬಸ್ಥರನ್ನು ಪರಿಚಯಿಸಲು ಶುರು ಮಾಡಿದರು. ಹೀಗಾಗಿ ತಾವು ಹುಟ್ಟುಹಾಕಿದ ಕುಟುಂಬ ರಾಜಕಾರಣದಿಂದಲೇ ಹೆಚ್.ಡಿ.ದೇವೇಗೌಡ ಮತ್ತು ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋತರು" ಎಂದರು.
ಚಿಕ್ಕಬಳ್ಳಾಪುರ: ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲು
ಜೆಡಿಎಸ್ ಪಕ್ಷ ನಿಜವಾದ ಜಾತ್ಯಾತೀತ ತತ್ವಗಳನ್ನು ಅಳವಡಿಸಿಕೊಂಡಿಲ್ಲ, ಜಾತ್ಯಾತೀತ ತತ್ವಕ್ಕೆ ಅವಮಾನ ಮಾಡಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಘೋಷಿತ ಸಿಎಂ ಹಾಗೂ ರೇವಣ್ಣ ಅಘೋಷಿತ ಸಿಎಂ ಆಗಿದ್ದರು, ಸಂಬಂಧಿಗಳಾದ ತಮ್ಮಣ್ಣ ಹಾಗೂ ಸಾ.ರಾ.ಮಹೇಶ್ ಸಚಿವರಾದರು. ಸಂಬಂಧಿಕರೇ ತುಂಬಿ ಹೋಗಿದ್ದರು ಎಂದು ವಾಗ್ದಾಳಿ ನಡೆಸಿದರು.
ಆ ಪಕ್ಷ ನಂಬಿದ ಜನರೇ ಅವರ ಜತೆಯಲ್ಲಿಲ್ಲ, ಜೆಡಿಎಸ್ ಬಗ್ಗೆ ಜನ ಅಸಹ್ಯ ಪಡುತ್ತಿದ್ದು ಹೀಗಾಗಿಯೇ ನಿಖಿಲ್ ಕುಮಾರಸ್ವಾಮಿ ಮತ್ತು ದೇವೇಗೌಡರನ್ನು ಮತದಾರರು ಸೋಲಿಸಿದರು ಎಂದರು. ಮುಂದಿನ ಚುನಾವಣೆ ಬರುವಷ್ಟರಲ್ಲಿ ಜೆಡಿಎಸ್ ಪಕ್ಷ ಅಧೋಗತಿಗೆ ತಲುಪಿದೆ ಎಂದು ಹೇಳಿದರು.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯರದು ಏಕಾಂಗು ಹೋರಾಟ ಮಾಡುತ್ತಿದ್ದಾರೆ. ಅಲ್ಲಿ ಮೂಲ ಮತ್ತು ವಲಸಿಗ ಎಂಬ ಎರಡು ಬಣಗಳಾಗಿವೆ, ಉಪ ಚುನಾವಣೆ ಪ್ರಚಾರಕ್ಕೆ ಮೂಲ ಕಾಂಗ್ರೆಸ್ಸಿಗರು ಬರುತ್ತಿಲ್ಲ ಎಂದರು.
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ 'ಅನರ್ಹ' ಸುಧಾಕರ್ ಆಡಿಯೋ ಬಹಿರಂಗ
ಈ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 15 ಕ್ಷೇತ್ರಗಳನ್ನು ಗೆಲ್ಲಲಿದೆ. ಇದರಿಂದ ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನ ಕಳೆದುಕೊಳ್ಳಲಿದ್ದಾರೆ, ಅವರು ರಾಜಕೀಯದಿಂದ ಇನ್ನಾದರೂ ನವೃತ್ತಿ ಪಡೆಯಲಿ ಎಂಬ ಸಲಹೆ ಕೊಟ್ಟದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಡಿಸೆಂಬರ್ 05 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಬಿಜೆಪಿಯಿಂದ ಡಾ.ಕೆ.ಸುಧಾಕರ್, ಕಾಂಗ್ರೆಸ್ ನಿಂದ ಎಂ.ಅಂಜಿನಪ್ಪ. ಜೆಡಿಎಸ್ ನಿಂದ ಎನ್.ರಾಧಾಕೃಷ್ಣ ಕಣದಲ್ಲಿದ್ದಾರೆ.