ಆಸಕ್ತರಿಗೆ ಸಾವರ್ಕರ್ ಕುರಿತ ಪುಸ್ತಕ ನೀಡುತ್ತೇನೆ: ಸುಧಾಕರ್
ಚಿಕ್ಕಬಳ್ಳಾಪುರ ಆಗಸ್ಟ್ 19: ವಿಡಿ ಸಾವರ್ಕರ್ ಅವರು ಸ್ವಾತಂತ್ರಕ್ಕಾಗಿ ಆದರ್ಶದ ಹೋರಾಟ ಮಾಡಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ. ಇದರಲ್ಲಿ ಭಿನ್ನಾಭಿಪ್ರಾಯ ಇದ್ದರೆ, ತಿಳಿದುಕೊಳ್ಳಲು ಆಸಕ್ತಿ ಇದ್ದರೆ ಅವರಿಗೆ ಸಾವರ್ಕರ್ ಪುಸ್ತಕ ನೀಡುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಗುರುವಾರ ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾವರ್ಕರ್ ಬಗ್ಗೆ ಭಿನ್ನಾಭಿಪ್ರಾಯ ಇರುವವರಿಗೆ ಇತಿಹಾಸ ಸಂಪೂರ್ಣ ತಿಳಿದಿರಲು ಸಾಧ್ಯವಿಲ್ಲ. ಅಂತವರಿಗೆ ಆಸಕ್ತಿ ಇದ್ದರೆ ನನ್ನ ಪ್ರಾಯೋಜಕತ್ವದಲ್ಲಿ ಸಾವರ್ಕರ್ ಅವರ ಬದುಕಿನ ಕುರಿತ ಪುಸ್ತಕಗಳನ್ನು ಕಳುಹಿಸುತ್ತೇನೆ. ಅವುಗಳನ್ನು ಓದಿದ ನಂತರ ಮಾತನಾಡಲಿ, ಅಜ್ಞಾನದಿಂದ ಮಾತನಾಡುವುದು ಬೇಡ ಎಂದರು.
ಹಿನ್ನೆಲೆ ಗೊತ್ತಿಲ್ಲದೇ ಅಜ್ಞಾನದಿಂದ ಮಾತನಾಡುವ ಮೂಲಕ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬದುಕನ್ನು ಕಡಿಮೆ ಮಾಡುವ ಕೆಲಸ ಆಗಬಾರದು. ಇತಿಹಾಸ ಸಂಪೂರ್ಣ ಅರಿತು ಮಾತನಾಡುವ ಕೆಲಸವಾಗಬೇಕು ಎಂದು ಕಿವಿ ಮಾತು ಹೇಳಿದರು.
ಮೊಟ್ಟೆ ಎಸೆದಿರುವುದು ಸರಿಯಲ್ಲ:ಸುಧಾಕರ್
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಸೂಕ್ತ ವೇದಿಕೆ ಇದೆ. ಅಲ್ಲದೇ ಹೋರಾಟಕ್ಕೂ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಪ್ರಜಾಪ್ರಭುತ್ವ ನೀತಿಯೂ ಅದೇ ಆಗಿದೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರ ಮೇಲೆ ನಡೆದ ಈ ಘಟನೆಯನ್ನು ಖಂಡಿಸುವುದಾಗಿ ಮತ್ತು ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಖಂಡಿಸಿದ್ದಾರೆ ಎಂದು ಸುಧಾಕರ್ ತಿಳಿಸಿದರು.
ಜನೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಕಾರ್ಯಕ್ರಮದ ಹೆಸರು, ದಿನಾಂಕ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ರಾಷ್ಟ್ರ ನಾಯಕರ ಮಾಹಿತಿಯನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಮಾಡಲಾಗುವುದು ಎಂದರು.
ಗ್ರಾಮಾಂತರ ತಾಲೂಕುಗಳಿಗೆ ಸೂಕ್ತ ಸ್ಥಾನಮಾನ
ಭೌಗೋಳಿಕವಾಗಿ ಜಿಲ್ಲಾಕೇಂದ್ರವಾಗಲು ದೇವನಹಳ್ಳಿ ಸೂಕ್ತವಾಗಿದೆ. ಈ ಹಿಂದೆಯೇ ಜಿಲ್ಲಾಕೇಂದ್ರ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಇನ್ನೊಂದು ತಿಂಗಳಲ್ಲಿ ಈ ಕುರಿತು ಆದೇಶ ಮಾಡಲಾಗುವುದು. ಜಿಲ್ಲಾ ಕೇಂದ್ರವಾಗಿ ದೇವನಹಳ್ಳಿ ರಚನೆಯಾದರೂ ಗ್ರಾಮಾಂತರದ ಎಲ್ಲ ತಾಲೂಕುಗಳಿಗೆ ಸೂಕ್ತ ಸ್ಥಾನಮಾನ ಒದಗಿಸಲಾಗುವುದು. ದೇವನಹಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಇರುವ ಕಾರಣದಿಂದ ಜಿಲ್ಲಾಸ್ಪತ್ರೆಯನ್ನು ದೊಡ್ಡಬಳ್ಳಾಪುರದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಕೇವಲ ರಾಜಕಾರಣದ ದುರುದ್ಧೇಶದಿಂದ ಹೋರಾಟ ಮಾಡಿದರೆ ಉಪಯೋಗವಿಲ್ಲ, ಇದರಲ್ಲಿ ರಾಜಕಾರಣ ಮಾಡುವವರು ಜಿಲ್ಲೆಯ ಪ್ರಗತಿ ಬಗ್ಗೆ ವಿಚಾರ ಮಾಡಲಿ ಎಂದು ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ಸುಧಾಕರ್ ತಿರುಗೇಟು ನೀಡಿದರು.