ಶಾಸಕರ ರಾಜೀನಾಮೆ ಕೊಡಿಸಿದವರಲ್ಲಿ ನಾನೂ ಒಬ್ಬ: ಎಸ್.ಎಂ.ಕೃಷ್ಣ
ಚಿಕ್ಕಬಳ್ಳಾಪುರ, ನವೆಂಬರ್ 26: ಹದಿನೇಳು ಜನ ಶಾಸಕರು ರಾಜೀನಾಮೆ ಕೊಟ್ಟು ಮೈತ್ರಿ ಸರ್ಕಾರ ಬೀಳಿಸಿ, ಬಿಜೆಪಿ ಸರ್ಕಾರ ರಚನೆ ಮಾಡಿ ಈಗ ಆ ಶಾಸಕರೆಲ್ಲಾ ಬಿಜೆಪಿ ಸೇರಿಯಾಗಿದೆ. ಆದರೆ ಆ ಹದಿನೇಳು ಶಾಸಕರಿಂದ ರಾಜೀನಾಮೆ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದವರ ಹೆಸರುಗಳು ಒಂದಾದೊಂದಾಗಿ ಹೊರಬರುತ್ತಿವೆ.
ಆ ಶಾಸಕರು ರಾಜೀನಾಮೆ ನೀಡುವಂತೆ ಪ್ರೇರೇಪಿಸುವಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಹ ಒಬ್ಬರಂತೆ! ಹೌದು, ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಇಂದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಪರ ಪ್ರಚಾರ ಮಾಡಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ 'ಶಾಸಕರು ರಾಜೀನಾಮೆ ಕೊಡಿಸುವಲ್ಲಿ ನಾನೂ ಸಹ ಪಾತ್ರಧಾರಿ' ಎಂದು ಹೇಳಿದರು.
'ಸುಧಾಕರ್ ರಾಜೀನಾಮೆ ಬಗ್ಗೆ ಹಲವರು ಏನೇನೋ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಲೆಂದು ಸುಧಾಕರ್ ರಾಜೀನಾಮೆ ಕೊಟ್ಟಿದ್ದಾರೆ, ಶಾಸಕರ ರಾಜೀನಾಮೆ ಕೊಡಲು ಪ್ರೇರೇಪಿಸಿದವರಲ್ಲಿ ನಾನೂ ಒಬ್ಬ, ಯಡಿಯೂರಪ್ಪ ಸಿಎಂ ಆಗಿದ್ದು ಸಂತಸ ತಂದಿದೆ' ಎಂದರು.
'ಅನಿಷ್ಟ ಸರ್ಕಾರ ನಿರ್ಮಾಣ ಆಗಿ ಎರಡೂ ಪಕ್ಷಗಳ ವಾಚಾನುಗೋಚರ ದ್ವೇಷ ಮಾಡುತ್ತಿದ್ದರು ಅಹೋರಾತ್ರಿ ಸರ್ಕಾರ ಮಾಡಲು ಹೊರಟಿದ್ದರು. ಮಂತ್ರಿ ಮಂಡಲದಲ್ಲಿ ಒಬ್ಬ ಸಿಎಂ, ಡಿಸಿಎಂ ಮಾಡಿದ್ದರು. ಹೊರಗೆ ಒಬ್ಬ ಸೂಪರ್ ಸಿಎಂ ಬೇರೆ ಮಾಡಿದ್ದರು. ನಿಮಗೆ ಗೊತ್ತಿದೆ ಸೂಪರ್ ಸಿಎಂ ಯಾರೆಂದು?' ಎಂದು ಸಿದ್ದರಾಮಯ್ಯ ಕಾಲೆಳೆದರು ಎಸ್.ಎಂ.ಕೃಷ್ಣ.
ಮೈತ್ರಿ ಸರ್ಕಾರದಲ್ಲಿ ಆಡಳಿತವೇ ಆಗಲಿಲ್ಲ, ನಿತ್ಯ ಬೆಳಿಗೆದ್ದು ಸರ್ಕಾರ ಉಳಿಸಿಕೊಳ್ಳುವುದೇ ಅವರ ಕೆಲಸವಾಗಿತ್ತು ಎಂದು ಎಸ್.ಎಂ.ಕೃಷ್ಣ ಹೇಳಿದರು.