ನಾಲಾಯಕ್ ಗಳು ನೀವು ಕೆಲಸ ಮಾಡಲಿಕ್ಕೆ: ಅಧಿಕಾರಿಗಳಿಗೆ ಬೆವರಿಳಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ಬೆಂಗಳೂರು, ಫೆಬ್ರವರಿ: ಆರು ಜನರನ್ನು ಬಲಿ ಪಡೆದ ಚಿಕ್ಕಬಳ್ಳಾಪುರದ ಹೀರೇನಾಗವೇಲಿಯಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ:
ಜಿಲೆಟಿನ್ ಎಲ್ಲಿಂದ ಬಂತು. ಹೇಗೆ ಬಂತು. ಯಾರು ಇದನ್ನು ಪೂರೈಕೆ ಮಾಡಿದ್ದಾರೆ ಎಂಬುದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ ಕಲ್ಲು ಗಣಿಗಾರಿಕೆ ಬಗ್ಗೆ ಅಡಿಟ್ ಮಾಡಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಮುಂದಿನ 24 ಗಂಟೆಗಳಲ್ಲಿ ತಪ್ಪಿತಸ್ಥರನ್ನು ಬಂಧಿಸುವಂತೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಮೃತರಿಗೆ ತಲಾ ಐದು ಲಕ್ಷ ರೂ. ಪರಿಹಾರ :
ಜಿಲೆಟಿನ್ ಸ್ಫೋಟ ಪ್ರಕರಣದಲ್ಲಿ ಮೃತರಾದ ಆರು ಮಂದಿಯ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ರೂ. ಪರಿಹಾರ ನೀಡುವುದಾಗಿ ಇದೇ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ. ಚಿಕ್ಕಬಳ್ಳಾಪುರದ ಹೀರೇನಾಗವೇಲಿಯಲ್ಲಿ ಮಧ್ಯರಾತ್ರಿ ನಡೆದ ಜಿಲೆಟಿನ್ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದರು. ದೇಹಗಳು ಛಿದ್ರವಾಗಿದ್ದವು. ಮೃತರ ಅಕ್ರಂದನ ಮುಗಿಲು ಮುಟ್ಟಿದೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಗೃಹ ಸಚಿವರು ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಪ್ರಕಟಿಸಿದರು.
ಅಧಿಕಾರಿಗಳಿಗೆ ಬೆವರಿಸಿದ ಹೋಮ್ :
ಇನ್ನು ಹೀರೇನಾಗವೇಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ಅಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಘಟನೆ ಬಳಿಕ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚಿಸಲಾಗಿತ್ತು. ಇಷ್ಟಾಗಿಯೂ ಯಾವುದೇ ಕ್ರಮ ಜರುಗಿಸಿಲ್ಲ. ನೀವೇನು ಕಣ್ಣು ಮುಚ್ಚಿ ಕೂತಿದ್ದೀರಾ ? ಎಫ್ಐಆರ್ ಆದ ಮೇಲೂ ಯಾಕೆ ಕ್ರಷರ್ ಮಾಲೀಕನನ್ನು ಬಂಧಿಸಿಲ್ಲ ಎಂದು ಗೃಹ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಮಾರು ಮುಕ್ಕಾಲು ಗಂಟೆ ಅಧಿಕಾರಿಗಳಿಗೆ ಬೆರವರಿಳಿಸಿದ್ದು, ಒಬ್ಬ ಅಧಿಕಾರಿ ಕೂಡ ತುಟಿ ಬಿಚ್ಚಿಲ್ಲ.
ನಿರ್ದಾಕ್ಷಿಣ್ಯ ಕ್ರಮ :
ಹೀರೇನಾಗವೇಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಿಗೂ ಮುಲಾಜು ನೋಡಲ್ಲ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸ್ಪೋಟಕ ಎಲ್ಲಿಂದ ತಂದಿದ್ದಾರೆ. ಹೇಗೆ ತಂದಿದ್ದಾರೆ. ಪರವಾನಗಿ ಇದೆಯಾ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಲು ಸೂಚಿಸಿದ್ದೇನೆ. ಇದರ ಹಿಂದೆ ಯಾವುದೇ ಅಧಿಕಾರಿ, ರಾಜಕಾರಣಿ ಇದ್ದರೂ ಬಿಡಲ್ಲ. ಸದ್ಯ ಈ ಜಾಗ ಗೋಮಾಳ ಅಂತ ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ಈಗಾಗಲೇ ನಾಲ್ಕು ಕೇಸ್ ಬುಕ್ ಆಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಮುಲಾಜಿಲ್ಲದೇ ಕ್ರಮ ಜರುಗಿಸಲು ಸೂಚಿಸಿದ್ದೇನೆ ಎಂದು ಗೃಹ ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.
Recommended Video
ಎಫ್ಎಸ್ ಎಲ್ ನಿಂದ ಪ್ರಥಮ ಮಾಹಿತಿ:
ಇನ್ನು ಹೀರೇನಾಗವೇಲಿ ಸಮೀಪ ನಡೆದ ಸ್ಫೋಟದ ಜಾಗಕ್ಕೆ ವಿಧಿ ವಿಜ್ಞಾನ ಪ್ರಯೋಗಾಲದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆಟ್ರೋಲಿಯಂ ಜಲ್ ರೀತಿಯ ವಸ್ತು ಸಿಕ್ಕಿದೆ. ದೇಹಗಳು ಛಿದ್ರವಾಗಿರುವುದನ್ನು ನೋಡಿದರೆ, ವಾಟರ್ ಜೆಲ್ ಸ್ಫೋಟಕ ಬಳಿಸಿರುವ ಸಾಧ್ಯತೆಯಿದೆ. ಇನ್ನು ವಾಟರ್ ಜೆಲ್ , ಜಿಲೆಟಿನ್ ಕಡ್ಡಿಗಳಿಗಿಂತಲೂ ಅಪಾಯಕಾರಿ. ಅವನ್ನು ಕ್ರೇಟ್ ನಲ್ಲಿ ತೆಗೆದುಕೊಂಡು ಹೋಗುವಾಗ ಸ್ಫೋಟ ಸಂಭವಿಸಿರುವ ಸಾಧ್ಯತೆಯಿದೆ. ಇನ್ನು ಸ್ಫೋಟಗೊಂಡಿರುವ ಕಲ್ಲು ಕ್ವಾರಿಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದವರು ನಾಗರಾಜ್ ಮತ್ತು ರೆಡ್ಡಿ ಮೂಲತಃ ಆಂಧ್ರ ಪ್ರದೇಶದವರು. ಈ ಹಿಂದೆ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿತ್ತು. ಆದರೆ ಆರೋಪಿಗಳನ್ನು ಬಂಧಿಸಿರಲಿಲ್ಲ. ಕಲ್ಲು ಗಣಿಗಾರಿಕೆಗೆ ಬ್ರೇಕ್ ಬಿದ್ದಿಲ್ಲ ಎಂಬುದು ಇದೀಗ ಬಹು ಚರ್ಚೆಗೆ ಕಾರಣವಾಗಿರುವ ಸಂಗತಿ.