ಚಿಕ್ಕಬಳ್ಳಾಪುರ: ಆನೆ ಗಾತ್ರದ ಆಲಿಕಲ್ಲು ಮಳೆಗೆ ನೆಲಕ್ಕುರುಳಿದ ಪಾಲಿಹೌಸ್!
ಚಿಕ್ಕಬಳ್ಳಾಪುರ, ಏಪ್ರಿಲ್ 22 : ಬರಡು ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಕೋಟ್ಯಂತರ ಮೌಲ್ಯದ ಬೆಳೆಗಳು ನಾಶವಾಗಿವೆ. ಮಳೆ ಜತೆಗೆ ಆನೆ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದು, ಜಿಲ್ಲೆಯ ಪಾಲಿಹೌಸ್, ದಾಳಿಂಬೆ, ದ್ರಾಕ್ಷಿ, ನರ್ಸರಿ ತೋಟಗಳು ನೆಲಸಮವಾಗಿವೆ. ಎಂದೂ ನೋಡದ ಆನೆ ಗಾತ್ರದ ಆಲಿ ಕಲ್ಲು ಮಳೆ ಅಬ್ಬರಕ್ಕೆ ಜಿಲ್ಲೆಯ ಕೆಲ ಭಾಗದ ರೈತರು ಕಂಗಾಲಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ, ಗೌಡಗೆರೆ ಸುತ್ತಮುತ್ತ ಗ್ರಾಮ ಸುತ್ತಮುತ್ತ ಗುಡುಗು ಸಮೇತ ಮಳೆ ಬಿದ್ದಿದೆ. ಇದರ ಜತೆಗೆ ದಪ್ಪ ಗಾತ್ರದ ಆಲಿ ಕಲ್ಲುಗಳು ಬಿದ್ದಿದ್ದು, 30 ರಿಂದ 40 ಕೆ.ಜಿ. ತೂಕದ್ದಾಗಿವೆ. ದೊಡ್ಡ ಗಾತ್ರದ ಆಲಿಕಲ್ಲು ನೋಡಲು ಜನರು ತಂಡೋಪತಂಡವಾಗಿ ಹೋಗಿ ನೋಡುತ್ತಿದ್ದಾರೆ. ದಪ್ಪ ಗಾತ್ರದ ಆಲಿಕಲ್ಲುಗಳ ಹೊಡೆತಕ್ಕೆ ನೂರಾರು ಪಾಲಿಹೌಸ್ ಗಳು ಮುರಿದು ಬಿದ್ದಿವೆ. ಅದೇ ರೀತಿ ದ್ರಾಕ್ಷಿ ತೋಟಗಳು ನಾಶವಾಗಿವೆ.
ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ರೈತರು ಲಕ್ಷಾಂತರ ವ್ಯಯಿಸಿ ಇತ್ತೀಚೆಗೆ ದಾಳಿಂಬೆ ಕೃಷಿಗೆ ಇಳಿದಿದ್ದರು. ಕೆಲವು ದಾಳಿಂಬೆ ತೋಟಗಳಲ್ಲಿ ಇದೀಗಷ್ಟೇ ಹೂವು ಕಾಣಿಸಿಕೊಂಡಿತ್ತು. ಆಲಿಕಲ್ಲು ಸಮೇತ ಬಿದ್ದ ಮಳೆಗೆ ಹೂವುಗಳು ಸಂಪೂರ್ಣ ಉದುರಿ ಹೋಗಿವೆ. ಇದೇ ರೀತಿ ನರ್ಸರಿಗಳು ಕೂಡ ನಷ್ಟಕ್ಕೆ ಒಳಗಾಗಿವೆ. ನಮ್ಮ ಜೀವ ಮಾನದಲ್ಲಿ ಈ ಘಾತ್ರದ ಆಲಿ ಕಲ್ಲು ಮಳೆ ನೋಡಿರಲಿಲ್ಲ. ಮಳೆ ಬಂದರೆ ಸಂತೋಷ. ಆದರೆ, ಬೇಸಿಗೆಯ ಮೊದಲ ಮಳೆಯೇ ಈ ರೀತಿಯ ಹೊಡೆತ ನೀಡಿದರೆ ರೈತರು ಉದ್ಧಾರ ಆಗುವುದು ಹೇಗೆ ? ಈಗಾಗಲೇ ಕೊರೋನಾ ಸೋಂಕಿನಿಂದ ಆದ ಬೆಳವಣಿಗೆಯಿಂದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ.
ಮಳೆ ಮುನ್ಸೂಚನೆ: ನಿರೀಕ್ಷೆಗೂ ಮೀರಿ ರಾಜ್ಯದ ಹಲವೆಡೆ ಮಳೆಗೆ ಏನು ಕಾರಣ?
ಇದೀಗ ಮೊದಲ ಮಳೆಯಲ್ಲಿ ಆಲಿಕಲ್ಲು ಬಿದ್ದು ಕೆಲವು ರೈತರನ್ನೇ ಬೀದಿಗೆ ತಂದಿದೆ ಎಂದು ಬಶೆಟ್ಟಿಹಳ್ಳಿಯ ರೈತರೊಬ್ಬರು ತನ್ನ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಆಲಿಕಲ್ಲಿನಿಂದ ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಕಟ್ಟಿಕೊಡಬೇಡು. ಜಿಲ್ಲಾಡಳಿತ ರೈತರ ಸಹಾಯಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೊಂದಡೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ಸಿಡಿಲು ಬಡಿದು ಮನೆಯೊಂದು ಕುಸಿದು ಬಿದ್ದು ಏಳು ಮಂದಿ ಗಾಯಗೊಂಡಿದ್ದಾರೆ. ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂತೂ ಮುಂಗಾರು ಆರಂಭಕ್ಕೂ ಮೊದಲೇ ಬೇಸಿಗೆ ಮಳೆ ಅಬ್ಬರಿಸಿದ್ದು, ಮಳೆ ಆಶ್ರಿತ ರೈತರಲ್ಲಿ ಸಂತಸ ಮನೆ ಮಾಡಿಸಿದೆ. ಆದರೆ, ಬೋರ್ ವೆಲ್ ನಂಬಿ ಲಕ್ಷಾಂತರ ಸುರಿದು ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದ ರೈತರ ಪಾಲಿಗೆ ಆಲಿಕಲ್ಲು ಮಳೆ ಮರ್ಮಾಘಾತ ನೀಡಿದೆ.