ಖಾಸಗಿ ಆಸ್ಪತ್ರೆಯಲ್ಲೂ ಕೊರೊನಾ ಸೋಂಕು ಚಿಕಿತ್ಸೆಗೆ ಮಾರ್ಗಸೂಚಿ ಸಿದ್ಧ; ಸುಧಾಕರ್
ಚಿಕ್ಕಬಳ್ಳಾಪುರ, ಜೂನ್ 19: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಆತಂಕ ತಂದಿದೆ ಎಂದು ಹೇಳಿದ್ದಾರೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್.
ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿಗಳ ಕಚೇರಿಯಲ್ಲಿ ಮಾತನಾಡಿದ ಅವರು, "ಕೊರೊನಾ ವೈರಸ್ ಪ್ರಕರಣಗಳಲ್ಲಿ ಶೇ 90ಕ್ಕೂ ಹೆಚ್ಚು ಮಂದಿಯಲ್ಲಿ ರೋಗದ ಲಕ್ಷಣಗಳೇ ಕಾಣಿಸುತ್ತಿಲ್ಲ. ಆದರೆ ತೀವ್ರತರವಾದ ದುಷ್ಪರಿಣಾಮ ಬೀರದೇ ಇರುವುದೇ ಸದ್ಯಕ್ಕೆ ಸಮಾಧಾನಕರವಾದ ವಿಚಾರವಾಗಿದೆ. ಹಿರಿಯರು ಹಾಗೂ ಆರೋಗ್ಯ ಸಮಸ್ಯೆ ಇರುವವರನ್ನು ಈ ಸಮಯದಲ್ಲಿ ಜೋಪಾನವಾಗಿ ನೋಡಿಕೊಳ್ಳಬೇಕು. ಅಂಥವರು ಮುಂಜಾಗ್ರತಾ ಕ್ರಮಗಳನ್ನು ವಹಿಸಿದರೆ ಮಾತ್ರ ಕೊರೊನಾ ಸೋಂಕಿನಿಂದ ಪಾರಾಗಬಹುದು" ಎಂದು ಸಲಹೆ ನೀಡಿದರು.
ರೋಗ ಲಕ್ಷಣ ಇಲ್ಲದಿರುವ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್
ರಾಜ್ಯ ಸರ್ಕಾರದಿಂದ ಕೆಲವು ಹೊಸ ಮಾರ್ಗಸೂಚಿಗಳನ್ನು ಕೊಡುತ್ತಿದ್ದೇವೆ. ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಕೊವಿಡ್ ಕೇರ್ ಸೆಂಟರ್ ಅನ್ನು ಮಾಡಲಾಗುತ್ತಿದೆ. ಕೊರೊನಾ ಪಾಸಿಟಿವ್ ಆಗಿದ್ದು, ರೋಗದ ಲಕ್ಷಣ ಇಲ್ಲದವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಲಕ್ಷಣ ಇರುವವರಿಗೆ ಸಾಮಾನ್ಯ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಕೊಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿಗೆ ಚಿಕಿತ್ಸೆ ಸಿಗಬೇಕು. ಅದಕ್ಕೂ ಮಾರ್ಗಸೂಚಿ ಸಿದ್ಧಪಡಿಸಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭ ಚೀನಾ ಹಾಗೂ ಭಾರತ ಸಂಘರ್ಷದ ವಿಚಾರವಾಗಿ ಪ್ರತಿಕ್ರಿಯಿಸಿ, "ಭಾರತ ಶಾಂತಿಯನ್ನು ಬಯಸುವ ದೇಶ. ಭಾರತೀಯರು ನಾವಾಗಿ ಬೇರೆಯವರ ಮೇಲೆ ಹೋಗಿದ್ದು ಇತಿಹಾಸದಲ್ಲಿಲ್ಲ. ನಮ್ಮ ಗಡಿಭಾಗದಲ್ಲಿ ಭೂ ಆಕ್ರಮಣ ಮಾಡಿರುವುದು ಖಂಡನೀಯ. ಪ್ರಧಾನಿ ಮೋದಿ ದಿಟ್ಟ ನಾಯಕ. ಅವರು ಸ್ಪಷ್ಟ ಸಂದೇಶ ಕಳಿಸಿದ್ದಾರೆ. ಒಂದಿಂಚು ಭೂಮಿಯನ್ನೂ ಬಿಡುವ ಪ್ರಶ್ನೆ ಇಲ್ಲ. ಹುತಾತ್ಮರ ಕುಟುಂಬಗಳಿಗೆ ಭಗವಂತ ನೈತಿಕ ಸ್ಥೈರ್ಯ ನೀಡಲಿ" ಎಂದರು.