ಪ್ರಸಾದ ಸೇವಿಸಿ ಸಾವು ತಡೆಗೆ ಸರ್ಕಾರದಿಂದ ಮಾರ್ಗಸೂಚಿ: ಕುಮಾರಸ್ವಾಮಿ
ಬೆಂಗಳೂರು, ಜನವರಿ 26: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ದೇವಾಲಯದಲ್ಲಿ ಪ್ರಸಾದ ಸ್ವೀಕರಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಮರಣೋತ್ತರ ಪರೀಕ್ಷೆಯ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದರು.
ಪದೇ ಪದೇ ಇಂತಹ ದುರಂತಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸರ್ಕಾರ ಕೆಲವು ಮಾರ್ಗಸೂಚಿ ಹೊರಡಿಸುವ ಅಗತ್ಯವಿದೆ ಎಂಬುದು ನನ್ನ ಅಭಿಪ್ರಾಯ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದರು.
ಚಿಂತಾಮಣಿಯಲ್ಲಿ ಪ್ರಸಾದ ಸೇವಿಸಿ ಯುವತಿ ಸಾವು, 6 ಮಂದಿ ಅಸ್ವಸ್ಥ
ಚಾಮರಾಜನಗರ ಸುಳ್ವಾಡಿಯ ಕಿಚ್ಗುತ್ ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿ ಡಜನ್ಗೂ ಹೆಚ್ಚು ಜೀವಗಳು ಬಲಿಯಾದ ಕೆಲವೇ ತಿಂಗಳಲ್ಲಿ ಈಗ ಮತ್ತೊಂದು ಅದನ್ನೇ ಹೋಲುವಂತ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದ್ದು, ಇದಕ್ಕೆ ತೀವ್ರ ಆತಂಕವನ್ನು ಸಿಎಂ ಅವರು ವ್ಯಕ್ತಪಡಿಸಿದ್ದಾರೆ.
ಸುಳ್ವಾಡಿ ದುರಂತಕ್ಕೆ ಒಂದು ತಿಂಗಳು : ಇನ್ನೂ ಮಾಸದ ಸಾವಿನ ನೋವು
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಗಂಗಮ್ಮ ದೇವಿ ದೇವಾಲಯದಲ್ಲಿ ಪ್ರಸಾದ ತಿಂದ ಆರು ಮಂದಿ ಅಸ್ವಸ್ಥರಾಗಿದ್ದು, ಒಬ್ಬ ಮಹಿಳೆ ಮೃತರಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಮೂವರು ಮಹಿಳೆಯರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.