ಬಿಜೆಪಿಯಿಂದ ಗಣಿಗಾರಿಕಾ ಭಯೋತ್ಪಾದನೆ: ಎಎಪಿ ಆಕ್ರೋಶ
ಬೆಂಗಳೂರು, ಫೆ.23: ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಅಕ್ರಮ ಗಣಿಗಾರಿಕೆಗಳು ತಲೆ ಎತ್ತುವುದಕ್ಕೂ ಸಂಬಂಧವಿದೆ. ಕಳೆದ ಒಂದು ತಿಂಗಳಲ್ಲೇ ಎರಡನೇ ಬಾರಿ ದುರ್ಘಟನೆ ಸಂಭವಿಸಿದೆ. ಬಿಜೆಪಿಯಿಂದ ಗಣಿಗಾರಿಕಾ ಭಯೋತ್ಪಾದನೆ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದರು.
ಚಿಕ್ಕಬಳ್ಳಾಪುರದ ಅಕ್ರಮ ಕಲ್ಲು ಗಣಿಯಲ್ಲಿ ಜಿಲೆಟಿನ್ ಸ್ಫೋಟದಿಂದ 6 ಜನ ಜೀವ ಕಳೆದುಕೊಂಡಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ. ಕಲ್ಲು ಗಣಿಗಾರಿಕೆಯ ಮಾಫಿಯಾಗಳ ಜೊತೆ ಕೈ ಜೋಡಿಸಿರುವ ಕಾರಣ ಇಂತಹ ದುರ್ಘಟನೆಗಳು ನಡೆಯುತ್ತಿವೆ.
ಇಷ್ಟೆಲ್ಲಾ ಭಾರೀ ಪ್ರಮಾಣದ ಅಕ್ರಮ ಸ್ಪೋಟಕಗಳು ಹೇಗೆ ಸಾಗಾಣಿಕೆಯಾಗುತ್ತವೆ, ಎಲ್ಲಿ ಸಿಗುತ್ತವೆ, ಇವುಗಳ ನಿರ್ವಹಣೆ ಹೇಗೆ ನಡೆಯುತ್ತಿದೆ ಎನ್ನುವುದೇ ನಿಗೂಢವಾಗಿ ಉಳಿದಿದೆ. ಇದಕ್ಕೆಲ್ಲ ಅಧಿಕಾರಶಾಹಿ ಹಾಗೂ ಸ್ಥಳೀಯ ಪುಡಾರಿಗಳ ಬೆಂಬಲವಿದೆ ಹಾಗೂ ರಾಜ್ಯ ಸರ್ಕಾರಕ್ಕೆ ಹಫ್ತಾ ಹೋಗುತ್ತಿರುವ ಕಾರಣ ಪೊಲೀಸ್ ವ್ಯವಸ್ಥೆಯು ಬಾಯಿಗೆ ಬೀಗ ಹಾಕಿಕೊಂಡು ಕೂತಿದೆ ಎಂದು ಆರೋಪಿಸಿದರು.
ಗಣಿಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರೇ ಇಲ್ಲಿ ಮುಗ್ಧ ಜೀವಗಳು ಬಲಿಯಾಗಿವೆ, ಇನ್ನಾದರೂ ಮೈ ಚಳಿ ಬಿಟ್ಟು ಎಲ್ಲಾ ರೀತಿಯ ಗಣಿಗಾರಿಕೆಗಳನ್ನು ತಾತ್ಕಾಲಿಕವಾಗಿ 6 ತಿಂಗಳ ಕಾಲ ನಿಲ್ಲಿಸಿ. ಆನಂತರ ಕಾನೂನು ಬದ್ದವಾದ ಗಣಿಗಳಿಗೆ ಅನುಮತಿ ನೀಡಿ.
ಸ್ಪೋಟಕಗಳ ಸುರಕ್ಷಿತ ಸಾಗಣೆ, ಬಳಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ರೂಪಿಸಬೇಕು ಹಾಗೂ ಅಗತ್ಯಕ್ಕಿಂತ ಹೆಚ್ಚು ಕಲ್ಲುಗಳು ಹಾಗೂ ಎಂ ಸ್ಯಾಂಡ್ ಉತ್ಪಾದನೆಯಾಗುತ್ತಿದ್ದು ಕರ್ನಾಟಕದ ಅಮೂಲ್ಯ ಪ್ರಾಕೃತಿಕ ಸಂಪತ್ತು ಹಾಳಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಉತ್ಪಾದನೆ ಕಾನೂನು ರೂಪಿಸಬೇಕು.
ಗಣಿಗಾರಿಕೆಗಳ ಮಾಲೀಕರಿಂದಲೇ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಸರ್ಕಾರ ಕೊಡಿಸಬೇಕು. 6 ತಿಂಗಳ ಕಾಲ ಗಣಿಗಾರಿಕೆ ನಿಲ್ಲಿಸಬೇಕು ಹಾಗೂ ಗಣಿಗಳಲ್ಲಿ ದುಡಿಯುವ ಕಾರ್ಮಿಕರಿಗೆ 1 ಕೋಟಿ ಮೊತ್ತದ ವಿಮೆ ಮಾಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದ್ದಾರೆ.
Recommended Video