ಎಸ್ಎಂ ಕೃಷ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆಂಜಿನಪ್ಪ ಮೇಲೆ ಎಫ್ಐಆರ್
ಚಿಕ್ಕಬಳ್ಳಾಪುರ, ಡಿಸೆಂಬರ್ 13: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದ ಚಿಕ್ಕಬಳ್ಳಾಪುರ ಉಪ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ. ಆಂಜಿನಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಉಪ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಡಿ. 11ರಂದು ಸುದ್ದಿಗೋಷ್ಠಿ ನಡೆಸಿದ್ದ ಎಂ. ಆಂಜಿನಪ್ಪ, ತಮಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಅವರು ರಾಜಕೀಯ ಬದುಕಿನ ಆರಂಭದಲ್ಲಿ ಎಸ್.ಎಂ. ಕೃಷ್ಣ ತಮಗೆ ಟಿಕೆಟ್ ತಪ್ಪಿಸಿದ್ದರು ಎಂದು ಹರಿಹಾಯ್ದಿದ್ದರು. ಆಗ ಅವಾಚ್ಯ ಪದ ಬಳಕೆ ಮಾಡಿದ್ದರು.
ಇದರ ವಿರುದ್ಧ ಎಸ್.ಎಂ. ಕೃಷ್ಣ ಅಭಿಮಾನಿ ಶಂಕರಪ್ಪ ಎಂಬುವವರು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಆಂಜಿನಪ್ಪ ವಿರುದ್ಧ ಐಪಿಸಿ ಸೆಕ್ಷನ್ 153, 504ರ ಅಡಿ ಪ್ರಕರಣ ದಾಖಲಾಗಿದೆ.
ಶಾಸಕರ ರಾಜೀನಾಮೆ ಕೊಡಿಸಿದವರಲ್ಲಿ ನಾನೂ ಒಬ್ಬ: ಎಸ್.ಎಂ.ಕೃಷ್ಣ
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಕಾಂಗ್ರೆಸ್ನಲ್ಲಿದ್ದು ಎಲ್ಲ ಅಧಿಕಾರಗಳನ್ನೂ ಅನುಭವಿಸಿ ಪಕ್ಷದ್ರೋಹ ಮಾಡಿದರು. ಇಂತಹವರನ್ನು ಬೆಳೆಸಿದ್ದರಿಂದಲೇ ಕಾಂಗ್ರೆಸ್ಗೆ ಇಂತಹ ಸಂಕಷ್ಟ ಬಂದಿದೆ ಎಂದು ಆಂಜಿನಪ್ಪ ವಾಗ್ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಎಸ್ಎಂ ಕೃಷ್ಣ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದರು.
ಮೂರು ಕಾಸಿನ ಯೋಗ್ಯತೆ ಇಲ್ಲದವರು
ಪಕ್ಷದಲ್ಲಿ ವಂಚಕರನ್ನು ಇಟ್ಟುಕೊಂಡು ಕಾಂಗ್ರೆಸ್ ಅವರನ್ನು ಬೆಳೆಸಿದೆ. ಮೂರು ಕಾಸಿನ ಯೋಗ್ಯತೆ ಇಲ್ಲದವರನ್ನು ಮುಖ್ಯಮಂತ್ರಿ, ರಾಜ್ಯಪಾಲ ಮತ್ತು ಕೇಂದ್ರ ಸಚಿವರಂತಹ ಹುದ್ದೆಗಳನ್ನು ನೀಡಿ ಉತ್ತೇಜಿಸಿದ್ದರೆ ಅವರು 86ನೇ ವಯಸ್ಸಿನಲ್ಲಿ ಇಷ್ಟೆಲ್ಲಾ ನೀಡಿದ ಪಕ್ಷಕ್ಕೆ ದ್ರೋಹ ಮಾಡಿ ಹೋಗುತ್ತಾರೆ. ಅಂತಹವರನ್ನು ಬೆಳೆಸುವುದರಿಂದಲೇ ಕಾಂಗ್ರೆಸ್ಗೆ ಹೊಡೆತ ಬಿದ್ದಿದೆ ಎಂದು ಆಂಜಿನಪ್ಪ ಹೇಳಿದ್ದರು.
ಟಿಕೆಟ್ ತಪ್ಪಿಸಿದ್ದೇ ಕೃಷ್ಣ
ಈ ಹಿಂದೆ ರಾಜಕೀಯಕ್ಕೆ ಕಾಲಿಟ್ಟಿದ್ದ ಕೆ. ಸುಧಾಕರ್ ಅವರಿಗೆ ಮೊದಲು ಬಿ ಫಾರಂ ಕೊಡಿಸಿದ್ದು ಎಸ್ಎಂ ಕೃಷ್ಣ. ಆಗ ನನಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತ್ತು. ಒಂದು ವೇಳೆ ನನಗೆ ಟಿಕೆಟ್ ಸಿಕ್ಕಿದ್ದರೆ ಆಗ ನಾನೇ ಗೆಲ್ಲುತ್ತಿದ್ದೆ. ಆದರೆ ಅಂದು ಎಸ್ಎಂ ಕೃಷ್ಣ ನನಗೆ ಟಿಕೆಟ್ ಸಿಗದಂತೆ ಮಾಡಿ ಸುಧಾಕರ್ಗೆ ಟಿಕೆಟ್ ಕೊಡಿಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಪಕ್ಷ ದ್ರೋಹ ಕಲಿಸಿದ್ದೇ ಕೃಷ್ಣ
ಪಕ್ಷಕ್ಕೆ ದ್ರೋಹ ಮಾಡುವ ಪ್ರವೃತ್ತಿ ಕಲಿಸಿಕೊಟ್ಟದ್ದೇ ಎಸ್ಎಂ ಕೃಷ್ಣ. ಪಕ್ಷ ನೀಡಿದ ಅಧಿಕಾರ ಅನುಭವಿಸಿದ ಅವರು ಬಳಿಕ ದ್ರೋಹ ಎಸಗಿ ಹೋಗಿದ್ದರು. ಅಂತಹವರ ಶಿಷ್ಯರು ಇನ್ನು ಹೇಗೆ ಇರುತ್ತಾರೆ ಎಂದು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದು ಬಳಿಕ ರಾಜೀನಾಮೆ ನೀಡಿ ಸರ್ಕಾರ ಉರುಳಲು ಕಾರಣರಾದ ಶಾಸಕರಲ್ಲಿ ಒಬ್ಬರಾದ ಕೆ. ಸುಧಾಕರ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.
ಹಣ ಹಂಚದೆಯೂ 50 ಸಾವಿರ ಮತ ಬಂದಿದೆ
ಉಪ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಮತ್ತು ಹಣದ ಪ್ರಭಾವ ಬಳಸಿಕೊಂಡು ಗೆದ್ದಿದೆ. ಇದರಿಂದ ಹತಾಶರಾಗುವುದಿಲ್ಲ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಮೇಲೆತ್ತುತ್ತೇವೆ. ಬಿಜೆಪಿಯ ಇಂತಹ ಪ್ರಭಾವಗಳ ನಡುವೆಯೂ ನನಗೆ 50 ಸಾವಿರ ಮತಗಳು ಬಂದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ನಾವು ಉಪ ಚುನಾವಣೆಗೆ ಎಲ್ಲ ರೀತಿಯಲ್ಲಿಯೂ ಸಂಪೂರ್ಣ ಸಜ್ಜಾಗಿರಲಿಲ್ಲ. ಮತದಾರರಿಗೆ ಹಣ ಹಂಚದೆಯೂ 50 ಸಾವಿರ ಮತಗಳು ಬಂದಿರುವುದು ನಮ್ಮ ಸಾಧನೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು.