ಕೋಚಿಮುಲ್ ಆಡಳಿತ ಮಂಡಳಿ ಮೋಜು- ಮಸ್ತಿ: ಸಿಡಿದೆದ್ದ ಹಾಲು ಉತ್ಪಾದಕರು
ಚಿಕ್ಕಬಳ್ಳಾಪುರ, ನವೆಂಬರ್ 25: ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ಆಡಳಿತ ಮಂಡಳಿಯ ಐಷಾರಾಮಿ ಜೀವನ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ ಬುಧವಾರ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಮತ್ತು ನೊಂದ ಹಾಲು ಉತ್ಪಾದಕರ ವೇದಿಕೆ ಸದಸ್ಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಗೌರಿಬಿದನೂರು ನಗರದ ಶೀಥಲ ಕೇಂದ್ರದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಎನ್. ಜ್ಯೋತಿರೆಡ್ಡಿ ಭಾಗವಹಿಸಿ ಮಾತನಾಡಿದರು. ಹಲವು ದಶಕಗಳಿಂದ ರೈತರಿಗೆ ಹಲವು ರೀತಿಯ ಸಂಕಷ್ಟಗಳು ಎದುರಾಗುತ್ತಿವೆ. ಸಕ್ಕರೆ ಕಾರ್ಖಾನೆ ರೈತರು ಹಾಗೂ ಕಾರ್ಮಿಕರಿಗೆ ಹಲವು ರೀತಿಯ ಕಷ್ಟಗಳು ಬಂದಿದೆ. ನಂತರ ಇದೀಗ ಹಾಲು ಉತ್ಪಾದಕರಿಗೆ ಹಾಲಿನ ದರ ಕಡಿಮೆ ಮಾಡಿ ಅವರ ಜೀವನವನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ.
ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ನಂಜೇಗೌಡಗೆ ಪ್ರಶ್ನೆ ಮಾಡಿದರೆ ಒಕ್ಕೂಟ ನಷ್ಟದಲ್ಲಿ ಇದೆ ಎನ್ನುತ್ತಾರೆ. ಈ ನಷ್ಟ ಬರಲು ಒಕ್ಕೂಟದ ದುಂದು ವೆಚ್ಚವೇ ಕಾರಣ ಎಂದು ಆರೋಪಿಸಿ, ಒಕ್ಕೂಟದ ಆಡಳಿತ ಮಂಡಳಿ ಕೂಡಲೇ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ಹೊತ್ತಿದ್ದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್. ಲಕ್ಷ್ಮೀನಾರಾಯಣ್ ಮಾತನಾಡಿ, ರೈತ ಮತ್ತು ರೈತ ಮಹಿಳೆಯರು ಬಿಸಿಲು- ಮಳೆ, ರಾತ್ರಿ ಎನ್ನದೆ ಹಸು ಸಾಕಾಣೆ ಮಾಡಿ ಗುಣಮಟ್ಟದ ಹಾಲು ಒಕ್ಕೂಟಕ್ಕೆ ನೀಡಿದರೆ ಅದಕ್ಕೆ ಉತ್ತಮ ದರ ನೀಡದೆ ನಮ್ಮ ಹಣದಲ್ಲಿ ಮೋಜು- ಮಸ್ತಿ ಮಾಡಿ ಐಷಾರಾಮಿ ಜೀವನದ ಜೊತೆಗೆ ಎಸಿ ಕಾರಿನಲ್ಲಿ ಒಡಾಡಿ ತಮ್ಮ ಜೀವನ ಕಳೆಯುತ್ತಿದ್ದಾರೆ. ಇದು ಎಷ್ಟು ಸರಿ? ರೈತರನ್ನು ಕಡೆಗಣಿಸಿದರೆ ಸರ್ಕಾರಗಳೇ ಇರುವುದಿಲ್ಲ ಇನ್ನೂ ಒಕ್ಕೂಟ ಇರುತ್ತದೆಯೇ? ಎಂದು ಪ್ರಶ್ನೆ ಮಾಡಿದರು.
ರೈತರ ಪ್ರತಿಭಟನೆಗೆ ಈ ದೇಶದ ಪ್ರಧಾನಿಯೇ ಗೌರವ ನೀಡಿ ಕೃಷಿ ಕಾಯ್ದೆಗಳು ವಾಪಸ್ ಪಡೆದ ಉದಾಹರಣೆ ಇದೆ. ಇನ್ನೂ ಹಾಲು ಉತ್ಪಾದಕರ ಕಷ್ಟವನ್ನು ಮರೆತ ಒಕ್ಕೂಟವನ್ನು ಪ್ರಶ್ನೆ ಮಾಡದೇ ಬಿಡುವುದಿಲ್ಲ. ಇನ್ನು ಅವರ ಮೋಜು- ಮಸ್ತಿ ಜೀವನಕ್ಕೆ ಕಡಿವಾಣ ಹಾಕಲು ನಾವು ಹೋರಾಟ ಮಾಡುತ್ತೇವೆ. ಇನ್ನು ಹದಿನೈದು ದಿನದಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಒಕ್ಕೂಟಕ್ಕೆ ಮುತ್ತಿಗೆ ಹಾಕುವುದು ಎಂದು ಎಚ್ಚರಿಕೆ ನೀಡಿದರು.
ಹಿರೇಬಿದನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಡಿ.ಎನ್. ವೆಂಕಟರೆಡ್ಡಿ ಮಾತನಾಡಿ, ರೈತರು ತಮ್ಮ ಜೀವನ ಮುಡಿಪಿಟ್ಟು ಹಸು ಸಾಕಾಣೆ ಮಾಡಿ ಹಾಲು ನೀಡುತ್ತಾರೆ. ಆದರೆ ಒಕ್ಕೂಟ ಅವರ ಸಂಕಷ್ಟಕ್ಕೆ ಕೈಜೋಡಿಸುವುದಿಲ್ಲ. ಲೀಟರ್ಗೆ ಪ್ರೋತ್ಸಾಹ ಧನ 30ರಿಂದ 35 ರೂ. ನೀಡಬೇಕು. ಅದೇ ಈ ಪ್ರತಿಭಟನೆಯ ಮೂಲ ಉದ್ದೇಶ. ಡಿಸೆಂಬರ್ 15ರೊಳಗೆ ನಮ್ಮ ನ್ಯಾಯಯುತ ಬೇಡಿಕೆ ಈಡೇರದದ್ದಿರೆ ಹೋರಾಟವನ್ನು ಉಗ್ರರೂಪಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆರ್.ಎನ್. ರಾಜು ಮಾತನಾಡಿ, ಕೋಚಿಮುಲ್ ಆಡಳಿತದಲ್ಲಿ ಭ್ರಷ್ಟಾಚಾರ ಎಲ್ಲೇ ಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕು. ಅವರು ಹಳ್ಳಿ ರೈತರ ಸಂಕಷ್ಟ ಆಲಿಸಬೇಕು ಮೋಜಿನ ಜೀವನಕ್ಕೆ ಕಡಿವಾಣ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಗುಂಡಾಪುರ ಲೋಕೇಶ್ಗೌಡ ಮತ್ತು ಮಾಳಪ್ಪ ಮಾತನಾಡಿ, ರಾಜ್ಯದಾದ್ಯಂತ ಏಕ ರೂಪದಲ್ಲಿ ಹಾಲಿನ ದರ ನಿಗದಿಪಡಿಸಬೇಕು, ಪಶು ಆಹಾರ ದರವನ್ನು ಕಡಿತಗೊಳಿಸಬೇಕು ಎಂದು ಅಗ್ರಹಿಸಿದರು.
ನೊಂದ ಹಾಲು ಉತ್ಪಾದಕರು ಸುಮಾರು ಅರ್ಧಗಂಟೆ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರು. ಇದರಿಂದ ಬಸ್ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಪ್ರತಿಭಟನಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
Recommended Video
ಕರವೇ ತಾಲ್ಲೂಕು ಅಧ್ಯಕ್ಷ ಜಿ.ಎಲ್. ಅಶ್ವತ್ಥ್ ನಾರಾಯಣ್ ಪ್ರಭು, ಜಯ ಕರ್ನಾಟಕದ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಎ. ಪ್ರದೀಪ್ ಅರುಣ್ಕುಮಾರ್, ನಗರಸಭೆ ಸದಸ್ಯ ಡಿ.ಜೆ. ಚಂದ್ರಮೋಹನ್, ವಾಲ್ಮೀಕಿ ನಾಯಕ ಯುವ ವೇದಿಕೆ ಅಧ್ಯಕ್ಷ ಗಂಗಯ್ಯ, ಚಿಗಟಗೇರೆ ಶ್ರೀನಿವಾಸ್, ಮಹಿಳಾ ಪಧಾದಿಕಾರಿಗಳಾದ ಲಯನ್ ಲಕ್ಷ್ಮೀ, ರತ್ನರಾಜುಮಲಾ, ಲಕ್ಷ್ಮೀ, ಪದ್ಮಾ, ಹೇಮಾವತಿ ಮುಂತಾದ ರೈತ ಮುಖಂಡರು ಭಾಗವಹಿಸಿದ್ದರು.