ಮಾವು ಶೇಖರಣೆ ಸಂಸ್ಕರಣೆಗೆ ಸಹಕಾರ ಸಂಘ ರಚಿಸಲು ಸಚಿವರ ಕರೆ
ಚಿಕ್ಕಬಳ್ಳಾಪುರ, ಫೆಬ್ರವರಿ 17: ಕಬ್ಬು ಬೆಳೆಗಾರರ ಮಾದರಿಯಲ್ಲಿ ಮಾವು ಬೆಳೆಗಾರರು ಸಹಕಾರಿ ಸಂಘ ರಚಿಸಿ ಸಂಸ್ಕರಣೆ, ಶೇಖರಣೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.
ಮಾವು ಬೆಳೆಗಾರರು, ಖರೀದಿದಾರರು ಹಾಗೂ ರಫ್ತುದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಮಾವನ್ನು ಹೆಚ್ಚು ದಿನಗಳ ಕಾಲ ಶೇಖರಿಸಿ ಇಡಲಾಗುವುದಿಲ್ಲ. ಇದಕ್ಕಾಗಿ ಸೂಕ್ತ ಮಾರುಕಟ್ಟೆ ಸೃಷ್ಟಿಸಬೇಕಾಗುತ್ತದೆ. ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಸಮರ್ಪಕ ಸಂಸ್ಕರಣಾ ಘಟಕವಿಲ್ಲ. ಈ ಭಾಗದಲ್ಲಿ ಕೋಲ್ಡ್ ಸ್ಟೋರೇಜ್ ಕೂಡ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಯುವವರು ಸಹಕಾರ ಸಂಘ ಮಾಡಿಕೊಂಡು ಕಬ್ಬು ಸಂಸ್ಕರಣೆ, ಬಳಕೆ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಮಾವು ಬೆಳೆಗಾರರು ಸಹಕಾರ ಕ್ಷೇತ್ರದ ಮೂಲಕ ಸಂಸ್ಕರಣಾ ಘಟಕ, ಕೋಲ್ಡ್ ಸ್ಟೋರೇಜ್ ಮಾಡಬೇಕು. ಇದು ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಪರಿಕಲ್ಪನೆಗೆ ಪೂರಕ ಎಂದರು.
ರಾಜ್ಯದಲ್ಲಿ 1.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಹೆಚ್ಚು ಮಾವು ಬೆಳೆಯುತ್ತಿದ್ದು, ವರ್ಷಕ್ಕೆ 12 ಲಕ್ಷದಿಂದ 14 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತಿದೆ. ಈ ಬಾರಿ ಮಾವು ಉತ್ಪಾದನೆ ಹೆಚ್ಚಲಿದ್ದು, ಸುಮಾರು 14 ಲಕ್ಷ ಟನ್ ಫಸಲು ಬರುವ ನಿರೀಕ್ಷೆ ಇದೆ ಎಂದರು.
ಕೇಂದ್ರ ಸರ್ಕಾರ ಕಿಸಾನ್ ರೈಲು ಆರಂಭಿಸಿದ್ದು, ಇದು ಬೆಳೆಗಳನ್ನು ಒಯ್ಯಲು ಅನುಕೂಲವಾಗಿದೆ. ಆಹಾರದಲ್ಲಿ ರಾಸಾಯನಿಕ ಬಳಕೆ ಹೆಚ್ಚಿರುವುದರಿಂದ ರೋಗಗಳು ಬರುತ್ತಿವೆ. ಕೃಷಿಕರು ಒಂದೇ ಬಾರಿಗೆ ಇಳುವರಿ ಪಡೆಯುವ ಕಡೆ ಗಮನಹರಿಸಬಾರದು. ದೂರದೃಷ್ಟಿ ಇಟ್ಟುಕೊಂಡು ಸಾವಯವ ಕೃಷಿ ಅನುಸರಿಸಬೇಕು ಎಂದು ಸಲಹೆ ನೀಡಿದರು.