ಪರ್ಯಾಯ ಜಾತ್ಯಾತೀತ ಸರ್ಕಾರ ಅಧಿಕಾರಕ್ಕೆ ಬರಲಿ : ಸಿಪಿಐಎಂ
ಚಿಕ್ಕಬಳ್ಳಾಪುರ, ಏಪ್ರಿಲ್ 16: ಬಿಜೆಪಿ ಸರ್ಕಾರ ಬಂದಾಗಿನಿಂದ ದೇಶದೊಳಗೆ ಬೇರು ಬಿಟ್ಟಿರುವ ಮತೀಯವಾದಿ, ಮನುವಾದಿ ಶಕ್ತಿಗಳಿಗೆ ಕುಮ್ಮಕ್ಕು ಸಿಕ್ಕಿದೆ. ಎಲ್ಲಾ ಜನವಿಭಾಗಗಳ ಪ್ರಜಾಪ್ರಭುತ್ವ ಹಕ್ಕುಗಳ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ತೀವ್ರ ದಾಳಿಗಳಾಗುತ್ತಿವೆ. ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಫ್ಯಾಸಿಸ್ಟ್ ಪ್ರವೃತ್ತಿಗಳು ವ್ಯಕ್ತವಾಗುತ್ತಿವೆ ಎಂದು ಚಿಕ್ಕಬಳ್ಳಾಪುರದ ಸಿಪಿಐಎಂ ಅಭ್ಯರ್ಥಿ ಎಸ್ ವರಲಕ್ಷ್ಮಿ ಅವರು ಕಳಕಳ ವ್ಯಕ್ತಪಡಿಸಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಆಳುವ ವರ್ಗಗಳು ದುಡಿಯುವ ಜನರನ್ನು ಒಡೆಯಲು ಕಾರ್ಯತಂತ್ರವನ್ನು ರೂಪಿಸಿಕೊಂಡಿವೆ. ಅದುವೇ ಮುಂದೆ ಮತೀಯ ಫ್ಯಾಸಿಸಂ ಆಗಿ ಬೆಳೆಯಬಹುದಾದ ಮತೀಯವಾದ. ಕಳೆದ 5 ವರ್ಷಗಳ ಅವಧಿಯಲ್ಲಿ ಇಂತಹ ಪ್ರವೃತ್ತಿಯ ಹಲವು ಉದಾಹರಣೆಗಳನ್ನು ನಾವು ಕಂಡಿದ್ದೇವೆ.
ಕೋಲಾರ ಲೋಕ ಸಮರ: ಸಿಪಿಐ(ಎಂ) ಅಭ್ಯರ್ಥಿ ಎಸ್. ವರಲಕ್ಷ್ಮಿ ಪರಿಚಯ
ಸರ್ಕಾರದ ಕುಮ್ಮಕ್ಕಿನಿಂದ, ಗೋರಕ್ಷಣೆ ಹೆಸರಿನಲ್ಲಿ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲೆ ಮಾರಣಾಂತಿಕ ಹಲ್ಲೆಗಳೂ ಬೀದಿಯಲ್ಲೇ ಹೊಡೆದು ಕೊಲ್ಲುವುದು, ಮತಾಂತರದ ಆರೋಪ ಹೊರಿಸಿ ಕ್ರಿಶ್ಚಿಯನ್ನರ ಮೇಲೆ ಹಲ್ಲೆ, ಮಹಿಳೆಯರ ಮೇಲೆ, ಮಕ್ಕಳ ಮೇಲೆ ಅತ್ಯಾಚಾರದ ಪ್ರಕರಣಗಳು ಕಳೆದ 5 ವರ್ಷಗಳಲ್ಲಿ ಆತಂಕಕಾರಿಯಾಗಿ ಹೆಚ್ಚಾಗಿವೆ.
ದೇಶದ ರಕ್ಷಣೆಯ ಮತ್ತು ಭಯೋತ್ಪಾದನೆಯ ವಿರುದ್ಧ ಕಾರ್ಯಾಚರಣೆಯ ಬಗ್ಗೆ ಜಂಭ ಕೊಚ್ಚುವ ಮೋದಿ ಈ ನಿಟ್ಟಿನಲ್ಲೂ ಪೂರ್ಣ ವಿಫಲವಾಗಿದ್ದಾರೆ. ಉರಿ ಮಿಲಿಟರಿ ನೆಲೆ, ಫುಲವಾಮದಲ್ಲಿ ಸಿಆರ್.ಪಿ.ಎಫ್ ಪಡೆಗಳ ಮೇಲೆ ಪ್ರಮುಖ ಭಯೋತ್ಪಾದಕ ದಾಳಿಗಳು ಸೇರಿದಂತೆ ಈ ಅವಧಿಯಲ್ಲಿ ಭಯೋತ್ಪಾದನಾ ಪ್ರಕರಣಗಳು ಶೇ. 126 ರಷ್ಟು ಹೆಚ್ಚಾಗಿವೆ. ಮೋದಿ ಸರ್ಕಾರದ 'ಜಮ್ಮು ಮತ್ತು ಕಾಶ್ಮೀರ' ನೀತಿ ಒಂದು ದೊಡ್ಡ ವೈಫಲ್ಯವಾಗಿದೆ.
ಮಂಡ್ಯದಲ್ಲಿ ನಿಖಿಲ್ಗೆ ಸಿಪಿಐ(ಎಂ) ಬೆಂಬಲ, ಸುಮಲತಾಗೆ ಅಲ್ಲ
ಹೀಗೆ ಎಲ್ಲಾ ರಂಗಗಳಲ್ಲೂ ವಿಫಲವಾದ ಬಿಜೆಪಿ ಸರಕಾರಕ್ಕೆ ಮತ್ತೆ ಅಧಿಕಾರ ಕೊಡಬಾರದು. ಪುನಃ ಅಧಿಕಾರ ಹಿಡಿದು ಸಾಂವಿಧಾನಿಕ ಪ್ರಜಾಪ್ರಭುತ್ವ ನಾಶ ಮಾಡಲು ಅವಕಾಶ ಕೊಡಬಾರದು. ಬಿಜೆಪಿ ಮೈತ್ರಿಕೂಟವನ್ನು ನಿರ್ಣಾಯಕವಾಗಿ ಸೋಲಿಸಬೇಕು. ಪರ್ಯಾಯ ಜಾತ್ಯಾತೀತ ಸರ್ಕಾರ ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದರು.
ಜನವಿಭಾಗಗಳ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿದೆ
ಈ ಭರವಸೆಗಳನ್ನು ಈಡೇರಿಸುವ ಬದಲಾಗಿ, ಮೋದಿ ಸರಕಾರ ಎಲ್ಲಾ ಜನವಿಭಾಗಗಳ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿದೆ. ಕಾರ್ಮಿಕರಿಗೆ ಸ್ವಲ್ಪವಾದರೂ ರಕ್ಷಣೆ ಕೊಡುವ ಈಗಿರುವ ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ-ವಿರೋಧಿ ತಿದ್ದುಪಡಿಗಳನ್ನು ಮಾಡಿ ಕಾರ್ಮಿಕರ ದಮನಕ್ಕೆ ಮುಂದಾಗಿದೆ. ಮರುಪಾವತಿ ಮಾಡಲಾಗದ ರೈತರ ಸಾಲ 2017 ರಲ್ಲಿ 70 ಸಾವಿರ ಕೋಟಿ ರೂ. ಇದ್ದದ್ದು 2018 ರಲ್ಲಿ 1 ಲಕ್ಷ ಕೋಟಿ ರೂ. ಗೆ ಏರಿತು. ಇದು ರೈತರನ್ನು ಆತ್ಮಹತ್ಯೆಗೆ ತಳ್ಳುತ್ತಿರುವ ಕಾರ್ಷಿಕ ಬಿಕ್ಕಟ್ಟಿನ ತೀವ್ರತೆಯನ್ನು ತೋರಿಸುತ್ತದೆ.
ನಿರುದ್ಯೋಗ ಪ್ರಮಾಣ ಏರಿಕೆ
ನಿರುದ್ಯೋಗ ದರವು 2018 ರಲ್ಲಿ ಶೇಕಡಾ 5.9 ರಷ್ಟು ಇದ್ದದ್ದು 2019 ರಲ್ಲಿ ಶೇಕಡ 7.1 ಕ್ಕೆ ಏರಿ, 45 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಮಟ್ಟ ಮುಟ್ಟಿತು. ಆರ್ಥಿಕ ಬೆಳವಣಿಗೆಯ ದರ ಕುಸಿದಿದೆ. ನೋಟು ರದ್ದತಿ ಮತ್ತು ಜಿ.ಎಸ್.ಟಿ ದಾಳಿಯಿಂದ ಮಧ್ಯಮ, ಸಣ್ಣ ಉದ್ದಿಮೆಗಳು ಮುಚ್ಚಿ ಹೋಗಿವೆ. ಆದರೆ, 2014-2018 ಅವಧಿಯಲ್ಲಿ ದೇಶದ ಜನಸಂಖ್ಯೆಯ ಶೇಕಡಾ 1 ಆಗರ್ಭ ಶ್ರೀಮಂತರ ಸಂಪತ್ತು ಶೇಕಡ 49 ರಿಂದ ಶೇಕಡ 73 ಕ್ಕೆ ಏರಿದೆ. ಇಂತಹ ಶ್ರೀಮಂತ-ಪರ ರೈತ-ವಿರೋಧಿ ಬಡವರ ವಿರೋಧಿ ಸರಕಾರ ಬೇಕಾ?
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 16 ಲಕ್ಷ ಮತದಾರರು
ಸಿಪಿಐ(ಎಂ) ಮತ್ತು ಎಡ ಪಕ್ಷಗಳ ಪ್ರಾತಿನಿಧ್ಯ ಹೆಚ್ಚಾಗಲಿ
2004 ರ ಚುನಾವಣೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಒಟ್ಟು 61 ಪ್ರತಿನಿಧಿಗಳನ್ನು ಜನತೆ ಲೋಕಸಭೆಗೆ ಆರಿಸಿ ಕಳುಹಿಸಿತ್ತು. ಬಿಜೆಪಿ ಸರ್ಕಾರದಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು, ಎಡಪಕ್ಷಗಳು ಜಾತ್ಯತೀತ ಸರ್ಕಾರ ರಚನೆಗೆ ಬೆಂಬಲ ನೀಡಿದ್ದವು. ಮಾತ್ರವಲ್ಲ ಮಾಹಿತಿ ಹಕ್ಕು ಕಾಯ್ದೆ, ಅರಣ್ಯ ಹಕ್ಕುಗಳ ಕಾಯ್ದೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಅಂತಹ ಕೆಲವು ಜನಪರವಾದ ಕಾಯ್ದೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದವು.
ಜನವಿರೋಧಿ ನೀತಿಗಳ ಜಾರಿ ತಡೆಗಟ್ಟಬೇಕಿದೆ
ನವ-ಉದಾರೀಕರಣದ ಜನವಿರೋಧಿ ನೀತಿಗಳ ಹರಿಕಾರ ಮತ್ತು ಇನ್ನೂ ಅದರ ಪ್ರಬಲ ಬೆಂಬಲಿಗನಾಗಿರುವ ಕಾಂಗ್ರೆಸಿನ ನಾಯಕತ್ವದ ಸರಕಾರಗಳ ಜನವಿರೋಧಿ ನೀತಿಗಳನ್ನು ಅಷ್ಟೇ ಧೃಢವಾಗಿ ವಿರೋಧಿಸಿದ್ದವು. ಇಂತಹ ಕಟುವಾದ ಜನವಿರೋಧಿ ನೀತಿಗಳ ಜಾರಿಯೇ ಕೋಮುವಾದಿ ಬಲಪಂಥಿಯ ಬಿಜೆಪಿ ಸರಕಾರದ ರಚನೆಗೆ ಹಾದಿ ಮಾಡಿಕೊಟ್ಟಿತು ಎಂದೂ ಮರೆಯುವಂತಿಲ್ಲ. ಅದು ಮರುಕಳಿಸದಂತೆ ಎಡಪಕ್ಷಗಳು ಮಾತ್ರ ಮಾಡಬಲ್ಲವು.
ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?
ಜನಪರ ನಿಲುವುಗಳ ವಿಷಯದಲ್ಲಿ ರಾಜಿ ಇಲ್ಲ
ಲೋಕಸಭೆಯಲ್ಲಿ ತೀವ್ರ ಹಾಗೂ ಅಧ್ಯಯನ ಪೂರ್ಣವಾದ ಚರ್ಚೆಗೆ ಸಿಪಿಐ(ಎಂ) ಹೆಸರುವಾಸಿಯಾಗಿದೆ. ಸಿಪಿಐ(ಎಂ) ಪ್ರತಿನಿಧಿಗಳು ಯಾರ ಮುಲಾಜಿಲ್ಲದೆ ನಿರ್ಭಿಡೆಯಿಂದ ಮಾತನಾಡುತ್ತಾರೆ. ಸೈದ್ಧಾಂತಿಕ ಹಾಗೂ ಜನಪರ ನಿಲುವುಗಳ ವಿಷಯದಲ್ಲಿ ಅವರು ರಾಜಿ ಮಾಡಿಕೊಳ್ಳುವುದಿಲ್ಲ. ತಾನು ಬೆಂಬಲಿಸುವ ಒಂದು ರಾಜಕೀಯ ಮೈತ್ರಿ ಕೂಟವನ್ನು ಅಗತ್ಯಬಿದ್ದರೆ ಟೀಕಿಸಲು ಸಿಪಿಐ(ಎಂ) ಹಿಂಜರಿಯುವುದಿಲ್ಲ.
ಆದ್ದರಿಂದ ಲೋಕಸಭೆಯಲ್ಲಿ ಸಿಪಿಐ(ಎಂ) ಪ್ರಾತಿನಿಧ್ಯವನ್ನು ಹೆಚ್ಚಿಸಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಾರ್ಮಿಕ ನಾಯಕಿ, ಹೋರಾಟಗಾರ್ತಿ ಎಸ್. ವರಲಕ್ಷ್ಮಿ ಅವರನ್ನು ಗೆಲ್ಲಿಸಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿ ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡುತ್ತದೆ.