ಗರ್ಭಿಣಿಯೇ ಅಲ್ಲದ ಮಹಿಳೆಗೆ ಸಿಸೇರಿಯನ್ ಮಾಡಿದ ವೈದ್ಯೆ, ಇದೆಂಥಾ ಆಸ್ಪತ್ರೆ?
ಚಿಕ್ಕಬಳ್ಳಾಪುರ, ಮಾರ್ಚ್ 13: ಗರ್ಭಿಣಿಯೇ ಅಲ್ಲದ ಮಹಿಳೆಯೆಗೆ ಸಿಸೇರಿಯನ್ ಮಾಡಿದ ವೈದ್ಯೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರದಲ್ಲಿ ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾದ ಮಹಿಳೆಯನ್ನು ಗರ್ಭಿಣಿ ಎಂದು ತಪ್ಪಾಗಿ ಭಾವಿಸಿ ಸಿಸೇರಿಯನ್ ಮಾಡಿದ್ದಾರೆ.
ಈ ವೇಳೆ ತೀವ್ರ ರಕ್ತಸ್ರಾವವಾಗಿ ಮಹಿಳೆ ಮೃತಪಟ್ಟಿದ್ದಾಳೆ. ವೈದ್ಯರ ನಿರ್ಲಕ್ಷ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಜಿಲ್ಲಾಸ್ಪತ್ರೆ ಮುಂದೆ ಸಂಬಂಧಿಕರು ಮಹಿಳೆಯ ಶವವಿರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ತಾಲೂಕಿನ ಬಿಸ್ಸೇಗಾರಹಳ್ಳಿಯ ಮುನಿರತ್ನ(23) ಮೃತಪಟ್ಟವರು. ಮಹಿಳೆಗೆ ತೀವ್ರ ಹೊಟ್ಟೆನೋವು ಇತ್ತು ವೈದ್ಯರನ್ನು ಕಾಣಲು ಈಕೆ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಇವರ ನರಳಾಟ ಕಂಡ ವೈದ್ಯೆ ಡಾ. ರೇಣುಕಮ್ಮ ಎಂಬುವವರು ಸ್ಕ್ಯಾನಿಂಗ್ ಮಾಡಿಸಿಕೊಂಡು ಬರುವಂತೆ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಹೊಟ್ಟೆಯಲ್ಲಿ ಮಗು ಅಡ್ಡ ತಿರುಗಿದೆ. ಹಾಗಾಗಿ ಕೂಡಲೇ ಸಿಸೇರಿಯನ್ ಮಾಡಿ ಮಗುವನ್ನುಹೊರಗೆ ತೆಗೆಯಬೇಕು ಎಂದು ಸ್ಕ್ಯಾನಿಂಗ್ ಕೇಂದ್ರದವರು ವರದಿ ನೀಡಿದ್ದಾರೆ. ತಕ್ಷಣವೇ ಆಕೆ ಗರ್ಭಿಣಿ ಹೌದೋ ಅಲ್ವೋ ಎಂದು ನೋಡದೆ ಸ್ಕ್ಯಾನಿಂಗ್ ವರದಿ ನೋಡಿ ಆಕೆಗೆ ಸಿಸೇರಿಯನ್ ಮಾಡಿದ್ದಾರೆ ಕೂಡಲೇ ರಕ್ತಸ್ರಾವ ತೀವ್ರವಾಗಿ ಮಹಿಳೆ ಮೃತಪಟ್ಟಿದ್ದಾಳೆ.