ಸಿದ್ದರಾಮಯ್ಯ ನಿಮಗೆ ಹೃದಯ, ಮನಸ್ಸು ಇದೆಯಾ?: ಕೆ ಸುಧಾಕರ್
ಚಿಕ್ಕಬಳ್ಳಾಪುರ, ನವೆಂಬರ್ 5: ಪಕ್ಷಕ್ಕೆ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸುವ ವಿಚಾರದಲ್ಲಿ ಬಿಗಿಪಟ್ಟು ಹಿಡಿದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಕೆ. ಸುಧಾಕರ್ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, 'ಪಕ್ಷಕ್ಕಾಗಿ ನಮ್ಮನ್ನು ನಂಬಿರುವ ನಾಯಕರಿಗಾಗಿ ನಿಮ್ಮ ನಾಯಕತ್ವವನ್ನು ಆರು ವರ್ಷಗಳ ಕಾಲ ಹೆಗಲ ಮೇಲೆ ಹೊತ್ತುಕೊಂಡು ನಾವು ನಿಮ್ಮನ್ನು ರಕ್ಷಣೆ ಮಾಡಿದೆವು. ನಿಮ್ಮ ವಿರುದ್ಧ ಯಾರು ಕೂಡ ಒಂದೂ ಮಾತನಾಡದಂತೆ ಹೋರಾಟ ಮಾಡಿದ ನಮ್ಮನ್ನೇ ನೀವು ಅನರ್ಹಗೊಳಿಸಿದಿರಲ್ಲ, ನಿಮಗೆ ಹೃದಯ, ಮನಸ್ಸು ಇದೆಯೇ?' ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಮೆಡಿಕಲ್ ಕಾಲೇಜು ವಿಚಾರ: ಡಿಕೆಶಿಗೆ ತಿರುಗೇಟು ಕೊಟ್ಟ ಸುಧಾಕರ್
'ನಿಮ್ಮ ಹಗೆತನವನ್ನು ನಮ್ಮ ಮೇಲೆ ತೋರಿಸಬೇಡಿ. ನಿಮಗೆ ತಾಕತ್ತು ಇದ್ದರೆ ನಿಮ್ಮನ್ನು ರಾಜಕೀಯವಾಗಿ ಮುಗಿಸಿದವರ ಮೇಲೆ ನಿಮ್ಮ ಹಗೆತನ ತೋರಿಸಿ. ಒಂದು ಬಾರಿ ಶಾಸಕನಾಗಿ ಗೆಲ್ಲಬೇಕು ಎಂದರೆ ಒಂದು ಜನ್ಮ ಎತ್ತಿ ಬಂದ ಹಾಗೆ. ಆದ್ದರಿಂದ ಶಾಸಕರನ್ನು ಅನರ್ಹಗೊಳಿಸಬೇಡಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದರೂ ಅವರ ಮಾತನ್ನು ಕೇಳದೆ ನಮ್ಮನ್ನು ಅನರ್ಹಗೊಳಿಸಿದಿರಿ. ನಿಜವಾದ ರಾಜಕಾರಣಿಗೆ ವಿಶಾಲ ಮನೋಭಾವ ಇರುತ್ತದೆ. ಈ ರೀತಿಯ ಕೀಳು ಬುದ್ಧಿ ಇರುವುದಿಲ್ಲ' ಎಂದು ಕಿಡಿಕಾರಿದರು.
ಸರ್ಕಾರ ಬೀಳಲು ನೀವೇ ಕಾರಣ
ನಮಗೆ ತಂದೆ ಸ್ಥಾನದಲ್ಲಿದ್ದ ನೀವು ಎಲ್ಲರನ್ನೂ ಸಮಾನವಾಗಿ ಕಾಣಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಉರುಳಲು ಸ್ವತಃ ನೀವೇ ಕಾರಣ ಹೊರತು ನಾವಲ್ಲ. ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ನನಗೆ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದರೂ ಕಾಂಗ್ರೆಸ್ನ ಕೆಲವು ನಾಯಕರೇ ಅಡ್ಡಿಪಡಿಸಿದರು. ಅವರ ಮೇಲೆ ಯಾವ ಕ್ರಮ ತೆಗೆದುಕೊಂಡಿರಿ ಸಿದ್ದರಾಮಯ್ಯ ಅವರೇ? ಪಕ್ಷದ ನಾಯಕತ್ವ ವಹಿಸಿಕೊಂಡು ತಂದೆಯ ಸ್ಥಾನದಲ್ಲಿದ್ದಾಗ ಎಲ್ಲರೂ ಸಮಾನರು ಎಂದು ನೀವು ನೋಡಿಕೊಳ್ಳಬೇಕಿತ್ತು. ಆದರೆ ನೀವು ಅದರಲ್ಲಿ ವಿಫಲರಾದಿರಿ. ಹಾಗಾಗಿಯೇ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ನಮ್ಮ ಮೇಲೆ ಹಗೆತನ ಸಾಧಿಸದೆಯೇ ನಿಮ್ಮ ವಿರುದ್ಧ ಕೆಲಸ ಮಾಡಿದವರ ವಿರುದ್ಧ ಹಗೆ ಸಾಧಿಸಿ ಎಂದು ಸವಾಲು ಹಾಕಿದರು.
ದಿನೇಶ್ ಗುಂಡೂರಾವ್ ಅಧ್ಯಕ್ಷರಾದಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಯ್ತು: ಕೆ. ಸುಧಾಕರ್
ಪಕ್ಷ ಉಳಿಸಲು ಆತ್ಮಾಹುತಿ ಮಾಡಿಕೊಂಡೆವು
ಇಂದು ಕಾಂಗ್ರೆಸ್ ನಾಯಕರು ಕ್ರೌರ್ಯ ಮತ್ತು ವಿಕೃತ ಮನಸ್ಸಿನಿಂದ ರಾಜಕೀಯ ದಿವಾಳಿತನವನ್ನು ರಾಜ್ಯದ ಜನರ ಮುಂದೆ ಪ್ರದರ್ಶನ ಮಾಡುತ್ತಿದ್ದಾರೆ. ನಾವು ಈ ರೀತಿಯ ತೀರ್ಮಾನ ತೆಗೆದುಕೊಳ್ಳುವುದರ ಹಿಂದೆ ಎಷ್ಟು ನೋವಿದೆ ಎಂದು ನೀವು ಅರ್ಥ ಮಾಡಿಕೊಳ್ಳಲಿಲ್ಲ. ನಮ್ಮ ಪಕ್ಷದ ನಾಯಕರ ಬಗ್ಗೆ ನನಗೆ ಬಹಳ ಗೌರವವಿತ್ತು. ಅವರಿಂದ ಈ ರೀತಿಯ ತೀರ್ಮಾನ ನಿರೀಕ್ಷಿಸಿರಲಿಲ್ಲ. ಪಕ್ಷ ಉಳಿಸುವುದಕ್ಕಾಗಿ ನಾವು ಆತ್ಮಾಹುತಿ ಮಾಡಿಕೊಂಡೆವು. ರಾಜ್ಯದ ಜನರಿಗೆ, ಪಕ್ಷದ ಕಾರ್ಯಕರ್ತರಿಗೆ ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು.
ಸ್ಪೀಕರ್ ಕೇವಲ ನಟರಾಗಿದ್ದರು
ಅನರ್ಹತೆ ಪ್ರಕರಣದಲ್ಲಿ ಸ್ಪೀಕರ್ ಆಕ್ಟರ್ ಆಗಿದ್ದರು. ಇದರ ನಿರ್ದೇಶಕ ಯಾರು, ಕಥೆಗಾರ ಮತ್ತು ನಿರ್ಮಾಪಕ ಯಾರು ಎಂಬುದನ್ನು ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ಹೇಳುತ್ತೇನೆ. ರಮೇಶ್ ಕುಮಾರ್ ಅವರೂ ಒಂದು ಬಾರಿ ಗೆಲ್ಲುತ್ತಾರೆ, ಒಂದು ಬಾರಿ ಸೋಲುತ್ತಾರೆ. ಗೆಲ್ಲಲು ಎಷ್ಟು ಪರಿಶ್ರಮ ಹಾಕಬೇಕು ಎಂಬುದು ಅವರಿಗೂ ಗೊತ್ತಾಗಬೇಕಲ್ಲವೇ? ಎಂದರು.
ವಿಧಾನಸಭೆ ಕಗ್ಗೊಲೆ ಮಾಡಿದಿರಿ
ನಾನು ಹುಟ್ಟುವ ಮೊದಲೇ ಅವರು ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದವರು. ಹೀಗಾಗಿ ಅವರ ಮೇಲೆ ಯಾರು ಎಷ್ಟೇ ಒತ್ತಡ ಹೇರಿದ್ದರೂ ವಸ್ತುಸ್ಥಿತಿ ಅರ್ಥ ಮಾಡಿಕೊಂಡು ಕಾನೂನಿನ ಇತಿಮಿತಿಯಲ್ಲಿ ಪ್ರಕರಣ ಇತ್ಯರ್ಥಪಡಿಸಬೇಕಿತ್ತು. ಆಗ ನಿಮ್ಮ ವ್ಯಕ್ತಿತ್ವಕ್ಕೆ ಇನ್ನಷ್ಟು ಘನತೆ ಸಿಗುತ್ತಿತ್ತು. ಆದರೆ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುತ್ತೇನೆ ಎಂದು ನಮ್ಮನ್ನು ಅನರ್ಹಗೊಳಿಸಿ ವಿಧಾನಸಭೆಯನ್ನು ಕಗ್ಗೊಲೆ ಮಾಡಿಬಿಟ್ಟಿರಿ ಎಂದು ರಮೇಶ್ ಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.