'ಕೊರೊನಾ ಸೋಂಕು ಹರಡದಂತೆ ತಡೆಯಲು ಪ್ರತಿಯೊಬ್ಬರ ಸಹಕಾರ ಬೇಕು'
ಚಿಕ್ಕಬಳ್ಳಾಪುರ ಮಾರ್ಚ್ 21: ಕೊರೊನಾ ವೈರಸ್ ಅತಿ ವೇಗವಾಗಿ ಹರಡುವ ವೈರಸ್ ಆಗಿದ್ದು, ಇದನ್ನು ತಡೆಗಟ್ಟಲು ನಮ್ಮ ಸುತ್ತಮುತ್ತಲಿನ ಪ್ರದೇಶದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶುಚಿತ್ವ ಕಾಪಾಡಲು ಆದ್ಯತೆ ಮೇರೆಗೆ ಕಾರ್ಯನಿರ್ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಜನತಾ ಕರ್ಫ್ಯೂ; ಸುಮ್ಮನೆ ತಿರುಗಾಡಿದರೆ ಬೀಳತ್ತೆ ಕೇಸು
ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕುಡಿಯುವ ನೀರು ಪೂರೈಕೆ ಸಂಬಂಧ ಆಯೋಜಿಸಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಗ್ರಾಮಗಳು ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರದೇಶಗಳಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಲು ಸಮಯ ನಿಗಧಿ ಪಡಿಸಿ, ಅತಿ ತುರ್ತಾಗಿ ಈ ಕಾರ್ಯ ಪೂರ್ಣಗೊಳಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ
ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನ ಹಿರೇಬಿದನೂರಿನ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಸೋಂಕಿನ ಬಗ್ಗೆ ಬೆಂಗಳೂರಿನಲ್ಲಿ ದೃಢಪಟ್ಟಿದ್ದು, ಹೆಚ್ಚಿನ ಪರೀಕ್ಷೆಗೆ ಪುಣೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಸೋಂಕು ಹರಡದಂತೆ ಹೆಚ್ಚಿನ ಕ್ರಮ ಕೈಗೊಳ್ಳಬೇಕಾಗಿದ್ದು, ಇದಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ.
ಪ್ರಧಾನಿಯವರ ಕರೆಗೆ ಕೈಜೋಡಿಸಬೇಕು
ಕೊರೊನಾ ಸೋಂಕು ಹರಡದಂತೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ನಮ್ಮ ನಿಮ್ಮೆಲ್ಲರಿಗಾಗಿ ಮಾರ್ಚ್ 22 ರಂದು ಮಾನ್ಯ ಪ್ರಧಾನ ಮಂತ್ರಿಗಳು ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ಕರ್ಫ್ಯೂಗೆ ಬೆಂಬಲ ನೀಡಬೇಕು. ಯಾರೋಬ್ಬರು ಮನೆಯಿಂದ ಹೊರಗಡೆ ಬರದೆ, ಕೊರೊನಾ ವಿರುದ್ಧ ಸಮರ ಸಾರೋಣ. ಕೊರೊನ್ ವೈರಸ್ ನಿಗ್ರಹಕ್ಕೆ ಈ ಮೂರು ವಾರಗಳು ಬಹಳ ಮುಖ್ಯವಾಗಿದೆ. ಹಾಗಾಗಿ, ಜನತೆ ಎಚ್ಚರ ತಪ್ಪದೇ, ಜಾಗೃತರಾಗಿರಬೇಕು ಹಾಗೂ ಪ್ರಧಾನಿಯವರ ಕರೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಯಾವುದಕ್ಕೂ ಕೊರತೆಯಿಲ್ಲ
'ದುಬಾರಿ ಬೆಲೆಗೆ ಮಾಸ್ಕ್ ಮಾರಾಟ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಸಿಎಂ ಬಹಳ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ದುಬಾರಿ ಬೆಲೆಗೆ ಮಾಸ್ಕ ಮಾರಾಟಮಾಡುವುದು ಅಪರಾಧ. ಅಂತವರ ಮೇಲೆ ಕ್ರಮ ತೆಗೆದುಕೊಳ್ತೇವೆ. ಕೆಲವೊಂದು ಕಡೆ ಕೊರತೆ ಕಂಡು ಬಂದಿದೆ. ಹೆಚ್ಚಿನ ಮಾಸ್ಕ್, ಸ್ಯಾನಿಟೈಸರ್ ತರಿಸಿಕೊಳ್ತಿದ್ದೇವೆ. ಯಾವುದಕ್ಕೂ ಕೊರತೆಯಿಲ್ಲ' ಎಂದರು.
ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು
ಪ್ರಸ್ತುತ ಬೇಸಿಗೆ ಕಾಲವಿದ್ದು, ತಾಪಮಾನವು ಮತ್ತಷ್ಟು ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ನೀರಿನ ಅಭಾವವು ಅಧಿಕವಾಗಲಿದ್ದು, ನಾಗರಿಕರಿಗೆ ನೀರಿನ ಪೂರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಆದ್ಯತೆ ಮೇರೆಗೆ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರು ಪೂರೈಕೆ ಮಾಡಿ. ಖಾಸಗಿ ಕೊಳವೆ ಬಾವಿ ಲಭ್ಯವಿರದ ಪ್ರದೇಶಗಳಲ್ಲಿ ಆ ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಬೇಕು. ಅಂತಿಮವಾಗಿ ಅವಶ್ಯವಿದ್ದಲ್ಲಿ ಮಾತ್ರ ನೂತನ ಕೊಳವೆ ಬಾವಿಗಳನ್ನು ಕೊರೆಸಬೇಕು. ಒಟ್ಟಾರೆ ನಾಗರಿಕರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.