ಚಿಕ್ಕಬಳ್ಳಾಪುರಕ್ಕೆ 10 ವೆಂಟಿಲೇಟರ್: ಡಾ.ಅಶ್ವತ್ಥನಾರಾಯಣ
ಬೆಂಗಳೂರು, ಮಾರ್ಚ್ 29: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಾಲ್ವರು ಕೊರೊನಾ ಸೋಂಕಿತರ ಜತೆಗೆ ಹೊಸದಾಗಿ 5 ಜನರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಚಿಕಿತ್ಸೆ ಹಾಗೂ ಇತರರಿಗೆ ರೋಗ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಜಿಲ್ಲಾಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದರು.
ಕೊರೊನಾ ತಡೆಗೆ ಕೈಗೊಂಡಿರುವ ಕ್ರಮಗಳು, ಸೋಂಕಿತರ ಪತ್ತೆ, ಚಿಕಿತ್ಸೆ, ಆಸ್ಪತ್ರೆಗಳಿಗೆ ಅಗತ್ಯ ವೈದ್ಯ ಉಪಕರಣಗಳ ಸಂಗ್ರಹ, ಸರಬರಾಜು ಹಾಗೂ ಕ್ವಾರಂಟೈನ್ ಸೌಲಭ್ಯ ಕಲ್ಪಿಸುವ ಸಂಬಂಧ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.
'ಕೆಟ್ಟ ಧೈರ್ಯ ಬಿಡಿ' - ರಾಜ್ಯದ ಜನರಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಮನವಿ
ರಾಮನಗರ ಜಿಲ್ಲಾಧಿಕಾರಿ ಡಾ. ಎಂ.ಎಸ್.ಅರ್ಚನಾ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಇತರ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ನಲ್ಲಿ ಪಾಲ್ಗೊಂಡಿದ್ದರು. ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಎನ್-95 ಮಾಸ್ಕ್, 3 ಲೇಯರ್ ಮಾಸ್ಕ್, ವೈದ್ಯರ ರಕ್ಷಣಾ ಕಿಟ್ಗಳನ್ನು ತಕ್ಷಣ ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ, ಡಯಾಲಿಸಿಸ್ ಹಾಗೂ ಕ್ಯಾನ್ಸರ್ ರೋಗಿಗಳು ಆಸ್ಪತ್ರೆಗೆ ಓಡಾಡಲು ಹಾಗೂ ಚಿಕಿತ್ಸೆ ಪಡೆಯಲು ಯಾವುದೇ ರೀತಿಯ ತೊಂದರೆ ಆಗದಂತೆ ಜಿಲ್ಲಾಡಳಿತ ಎಚ್ಚರವಹಿಸಬೇಕು ಎಂದರು.
ಚಿಕ್ಕಬಳ್ಳಾಪುರಕ್ಕೆ 10 ವೆಂಟಿಲೇಟರ್
ಇನ್ನೆರಡು ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ 10 ವೆಂಟಿಲೇಟರ್ಗಳನ್ನು ಸರಬರಾಜು ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಬೆಳೆಯುವ ತರಕಾರಿಯನ್ನು ಸಮರ್ಪಕ ರೀತಿಯಲ್ಲಿ ಮಾರುಕಟ್ಟೆಗೆ ತಲುಪಿಸಬೇಕು. ರೈತರು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮ ವಹಿಸಿ
ಹೆಚ್ಚಿನ ಸಂಖ್ಯೆಯಲ್ಲಿ ಶಂಕಿತರು, ಸೋಂಕಿತರಿರುವ ಚಿಕ್ಕಬಳ್ಳಾಪುರದ ಅಲೀಪುರಕ್ಕೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಗೌರಿಬಿದನೂರನ್ನೂ ಸಂಪೂರ್ಣವಾಗಿ ಬಂದ್ ಮಾಡುವಂತೆ ಆದೇಶ ನೀಡಿದರು.
ನಿರ್ಗತಿಕರಿಗೆ ಛತ್ರಗಳಲ್ಲಿ ಆಶ್ರಯ
ಚಿಕ್ಕಬಳ್ಳಾಪುರದಲ್ಲಿ 33 ಕೊಠಡಿಯ ವಸತಿ ನಿಲಯವನ್ನು ಕ್ವಾರೆಂಟೈನ್ ಆಗಿ ಪರಿವರ್ತಿಸಲಾಗಿದೆ. ವಾರ್ಡ್ ಮಟ್ಟದಲ್ಲಿ ವಾಟ್ಸ್ ಆಪ್ ಗ್ರೂಪ್ ರಚಿಸಿ ಜನರಿಗೆ ದಿನನಿತ್ಯ ಬಳಸುವ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ನಿರ್ಗತಿಕರಿಗೆ ಛತ್ರಗಳಲ್ಲಿ ಆಶ್ರಯ ನೀಡಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಟಾಸ್ಕ್ ಫೋರ್ಸ್ ರಚಿಸಿ
ಕೊರೊನಾ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಗ್ರಾಮಗಳ ಮಟ್ಟದಲ್ಲೇ (ಟಾಸ್ಕ್ ಫೋರ್ಸ್) ಗುಂಪುಗಳನ್ನು ಮಾಡಿ, ಸ್ಥಳೀಯವಾಗಿ ಜನರ ಟ್ರಾವೆಲ್ ಹಿಸ್ಟರಿ, ಆರೋಗ್ಯ ಮಾಹಿತಿ ಕಲೆ ಹಾಕುವ ವ್ಯವಸ್ಥೆ ರೂಪಿಸಬೇಕು. ಐಸಿಯು ನಿರ್ವಹಣೆ ಬಗ್ಗೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಡಾ. ಅಶ್ವತ್ಥನಾರಾಯಣ ಸೂಚಿಸಿದರು. ಜೊತೆಗೆ ರಾಮನಗರದಲ್ಲಿ ರೇಷ್ಮೆ ಗೂಡುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಎಂದಿನಂತೆ ನಡೆದಿದ್ದು, ಮುಂದೆಯೂ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರವಹಿಸಬೇಕೆಂದು ನಿರ್ದೇಶಿಸಿದರು.