ಚಿಕ್ಕಬಳ್ಳಾಪುರದ ಚಿನ್ನದಂಗಡಿ ಮಾಲೀಕನಿಗೆ ಕೊರೊನಾ ಸೋಂಕು
ಚಿಕ್ಕಬಳ್ಳಾಪುರ, ಮೇ 10: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಚಿನ್ನದಂಗಡಿ ಮಾಲೀಕನಿಗೆ ಕೊರೊನಾ ವೈರಸ್ ಸೋಂಕು ದೃಢವಾದ ಹಿನ್ನೆಲೆಯಲ್ಲಿ ನಗರದಲ್ಲಿ ಹೈ ಅಲರ್ಟ್ ಆಗಿದೆ. ಇಂದಿನಿಂದ ಚಿಂತಾಮಣಿ ನಗರದಲ್ಲಿ ಚಿನ್ನದಂಗಡಿ, ಚಪ್ಪಲಿ, ಬಟ್ಟೆ, ಫ್ಯಾನ್ಸಿ ಸ್ಟೋರ್ ಸೇರಿ ಬಹುತೇಕ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಕೊರೊನಾ ಸೋಂಕಿತ ವ್ಯಕ್ತಿ ಚಿನ್ನದಂಗಡಿ ಮಾಲೀಕನಾಗಿರುವ ಕಾರಣ, ಸಮುದಾಯದ ಸಂಪರ್ಕದಲ್ಲಿದ್ದರು ಎಂದು ಎಲ್ಲಾ ಚಿನ್ನದಂಗಡಿಗಳನ್ನು ಬಂದ್ ಮಾಡಲಾಗಿದೆ. ಚಿಂತಾಮಣಿ ನಗರ ವಾಣಿಜ್ಯ ನಗರಿಯಾಗಿದೆ.
ಹೃದಯಾಘಾತ; ಚಿಕ್ಕಬಳ್ಳಾಪುರ ಜನಪ್ರಿಯ ವೈದ್ಯ ಅನಿಲ್ ಕುಮಾರ್ ನಿಧನ
ಸೋಂಕಿತನ ಪತ್ನಿ ಮೇ 4 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅಂತ್ಯಕ್ರಿಯೆಯಲ್ಲಿ ಇವರ ಸಮುದಾಯದ ನೂರಾರು ಮಂದಿ ಭಾಗಿಯಾಗಿದ್ದರು. ಹೀಗಾಗಿ ಆ ಸಮುದಾಯದವರು ವ್ಯಾಪಾರ ವಹಿವಾಟು ಮಾಡುವ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಕೇವಲ ಅಗತ್ಯ ವಸ್ತುಗಳಾದ ದಿನಸಿ, ಹಾಲು, ತರಕಾರಿ ಹಾಗೂ ಕೃಷಿ ಪರಿಕರಗಳು ಕೆಲ ಅಂಗಡಿಗಳು ತೆರೆಯಲಷ್ಟೇ ಅನುಮತಿ ನೀಡಲಾಗಿದೆ.
ಲಾಕ್ ಡೌನ್ 3.0 ಸಡಿಲಿಕೆಗಳ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ತೆರೆಯಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು.
ಆದರೆ ಈಗ ಚಿಂತಾಮಣಿ ನಗರದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶವಿದೆ. ಸದ್ಯಕ್ಕೆ ಸೋಂಕಿತನ ನಿವಾಸದ 200 ಮೀಟರ್ ಸುತ್ತಳತೆಯಲ್ಲಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಕನ್ನಡಿಗರಿಗೆ ಸಿಹಿಸುದ್ದಿ; ಚಿಕ್ಕಬಳ್ಳಾಪುರದಲ್ಲಿ ನಾಲ್ವರು ಸೋಂಕಿತರು ಗುಣಮುಖ
ಚಿಂತಾಮಣಿ ನಗರ ಹೊರವಲಯದ ಬಿಸಿಎಂ ವಸತಿ ನಿಲಯದಲ್ಲಿ ಸೋಂಕಿತನ ಪ್ರಥಮ ಸಂಪರ್ಕಿತ 42 ಮಂದಿ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಇನ್ನಷ್ಟು ಮಂದಿ ಕ್ವಾರಂಟೈನ್ ಗೆ ಒಳಪಡಿಸುವ ಸಾಧ್ಯತೆಯಿದೆ.
ಇದಲ್ಲದೇ ಸೋಂಕಿತನ 22 ವರ್ಷದ ಮೊಮ್ಮಗನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದ್ದು, ವೃದ್ಧನ ಮೊಮ್ಮಗನಿಗೂ ಕೊರೊನಾ ಸೋಂಕು ಧೃಢವಾಗುವ ಸಾಧ್ಯತೆಯಿದೆ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.