ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟದ ಪ್ರಮುಖ ಆರೋಪಿ ನಾಗರಾಜ್ ಬಂಧನ
ಚಿಕ್ಕಬಳ್ಳಾಪುರ, ಫೆಬ್ರವರಿ.25: ಚಿಕ್ಕಬಳ್ಳಾಪುರ ಜಿಲ್ಲೆ ಮಂಡಿಕಲ್ ಹೋಬಳಿಯ ಹಿರೇನಾಗವಲ್ಲಿ ಗ್ರಾಮದಲ್ಲಿ ಸಂಭವಿಸಿರುವ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಕಲ್ಲು ಕ್ವಾರೆ ಮಾಲೀಕ ಹಾಗೂ ಬಿಜೆಪಿ ಮುಖಂಡ ಆಗಿರುವ ಜಿ.ಎಸ್.ನಾಗರಾಜ್ ರನ್ನು ಬಂಧಿಸಲಾಗಿದೆ.
ಜಿಲೆಟಿನ್ ಸ್ಫೋಟದ ಬಳಿಕ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಶಿರಡಿಸಾಯಿ ಅಗ್ರಿಗೇಟ್ಸ್ ಕ್ವಾರಿ ಮತ್ತು ಭ್ರಮರವಾಸಿನಿ ಕ್ರಷರ್ಸ್ ಮಾಲೀಕ ಜಿ.ಎಸ್. ನಾಗರಾಜ್ ರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಗಣೇಶ್ ಎಂಬಾತನನ್ನು ತಮಿಳುನಾಡಿನಲ್ಲಿ ಬಂಧಿಸಿ ಕರೆ ತರಲಾಗಿದೆ.
ಚಿಕ್ಕಬಳ್ಳಾಪುರ ಅಕ್ರಮ ಜಿಲೆಟಿನ್ ಸ್ಪೋಟ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ?
ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 286, 304, ಮತ್ತು 1908ರ ಸ್ಫೋಟಕ ವಸ್ತುಗಳ ಕಾಯ್ದೆ 6, 3, 5 ಹಾಗೂ 1984ರ ಸ್ಫೋಟಕ ಕಾಯ್ದೆಯ 9 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಜಿಲೆಟಿನ್ ಸ್ಫೋಟ ಸಂಬಂಧ 5 ಆರೋಪಿ ಬಂಧನ
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಗೊಂಡಿರುವ ಗುಡಿಬಂಡೆ ಠಾಣೆ ಪೊಲೀಸರು ಕಲ್ಲು ಕ್ವಾರಿ ಮತ್ತು ಕ್ರಷರ್ ಮಾಲೀಕರಾದ ರಾಘವೇಂದ್ರ ರೆಡ್ಡಿ, ಮಧುಸೂದನ್ ರೆಡ್ಡಿ, ವೆಂಕಟ ಶಿವಾರೆಡ್ಡಿ, ಮ್ಯಾನೇಜರ್ ಪ್ರವೀಣ್ ಹಾಗೂ ಸ್ಫೋಟದ ನಂತರ ಬದುಕುಳಿದಿರುವ ಟಾಟಾ ಏಸ್ ಚಾಲಕ ರಿಯಾಜ್ ನನ್ನು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ ಅಧಿಕಾರಿಗಳು
ಜಿಲೆಟಿನ್ ಸ್ಫೋಟ ಪ್ರಕರಣದ ಗಂಭೀರತೆಯನ್ನು ಅರಿತ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿತು. ಸರ್ಕಾರದ ಆದೇಶದ ಪ್ರತಿ ಕೈಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸಿಐಡಿ ಅಧಿಕಾರಿಗಳು ಗುಡಿಬಂಡೆ ಠಾಣೆಗೆ ಭೇಟಿ ನೀಡಿದ ಪ್ರಕರಣವನ್ನು ಹಸ್ತಾಂತರಿಸಿಕೊಂಡರು. ಅದಾಗಿ 24 ಗಂಟೆಗಳಲ್ಲೇ ಕ್ರಷರ್ ಮಾಲೀಕ ರಾಘವೇಂದ್ರ ರೆಡ್ಡಿ ಮತ್ತು ರಿಯಾಜ್ ನನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತುಗೊಳಿಸಿ ಆದೇಶ
ಅಕ್ರಮ ಜಿಲೆಟಿನ್ ಸ್ಫೋಟ ಘಟನೆಯು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಹಿನ್ನೆಲೆ ಗುಡಿಬಂಡೆ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೋಪಾಲ್ ರೆಡ್ಡಿ ಅವರನ್ನು ಅಮಾನತುಗೊಳಿಸಿ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಆದೇಶಿಸಿದ್ದಾರೆ.
Recommended Video
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ
ಕಳೆದ ಫೆಬ್ರವರಿ.23ರಂದು ಚಿಕ್ಕಬಳ್ಳಾಪುರ ಜಿಲ್ಲೆ ಮಂಡಿಕಲ್ ಹೋಬಳಿಯ ಹಿರೇನಾಗವಲ್ಲಿ ಗ್ರಾಮದಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿತ್ತು. ಈ ವೇಳೆ ಒಟ್ಟು ಆರು ಮಂದಿ ಮೃತಪಟ್ಟಿದ್ದು, ಕಾರು ಚಾಲಕ ರಿಯಾಜ್ ಗಂಭೀರವಾಗಿ ಗಾಯಗೊಂಡಿದ್ದನು. ಇನ್ನು, ಜಿಲೆಟಿನ್ ಸ್ಫೋಟದಲ್ಲಿ ಮೃತಪಟ್ಟವರನ್ನು ಕ್ರಷರ್ ಇಂಜಿನಿಯರ್ ಉಮಾಕಾಂತ್, ಕಂಪ್ಯೂಟರ್ ಆಪರೇಟರ್ ಆರ್. ಗಂಗಾಧರ್, ವೇಯರ್ ಆಗಿರುವ ಮುರುಳಿ, ಅಭಿ, ವಾಚ್ ಮೆನ್ ಮಹೇಶ್ ಹಾಗೂ ಸ್ಥಳೀಯ ರಾಮು ಎಂದು ಗುರುತಿಸಲಾಗಿತ್ತು. ಭ್ರಮರವಾಸಿನಿ ಕ್ರಷರ್ ನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಇರುವ ಅರಣ್ಯದಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಮತ್ತು ಎಲೆಕ್ಟ್ರಿಕ್ ಡಿಟೋನೇಟರ್ಸ್ ಅನ್ನು ಹೊತ್ತು ತರಲು ತೆರಳಿದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿತ್ತು ಎಂದು ಹೇಳಲಾಗಿದೆ.