ಪ್ರಿಯಕರನ ಜೊತೆ ಸೇರಿ ಪತಿಯ ಕೊಂದ ಪ್ರಕರಣ: ಪೊಲೀಸರು ಭೇದಿಸಿದ್ದು ಹೇಗೆ?
ಚಿಕ್ಕಬಳ್ಳಾಪುರ, ಫೆಬ್ರವರಿ 2: ಚಿಕ್ಕಬಳ್ಳಾಪುರದಲ್ಲಿ ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪ್ರಕರಣವನ್ನು ಪೊಲೀಸರು ಬೇಧಿಸಿ ತಪ್ಪಿತಸ್ಥರನ್ನು ಬಂಧಿಸಿದ್ದಾರೆ.
ಮದುವೆಯಾಗಿ ಎಂಟು ವರ್ಷ ಕಳೆದಿದ್ದರೂ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಪತ್ನಿಯನ್ನು ಪ್ರಶ್ನಿಸಿದ್ದಕ್ಕೆ ಪ್ರಿಯಕರನ ಜೊತೆ ಸೇರಿ, ಪತಿಯನ್ನೇ ಕೊಲೆಗೈದು ಪ್ರಸಿದ್ಧ ಪ್ರವಾಸಿತಾಣವೊಂದರಲ್ಲಿ ಶವ ಸುಟ್ಟು ನಿರಾಳರಾಗಿದ್ದರು. ಆದರೆ ಇದೀಗ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಲಘುಮೇನಹಳ್ಳಿ ನಿವಾಸಿ ಲಕ್ಷ್ಮಿ, 8 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ನಿವಾಸಿ ವೆಂಕಟೇಶನನ್ನು ಮದುವೆಯಾಗಿದ್ದಳು.
ಮದುವೆಯಾದರೂ ತನ್ನ ಹಳೆಯ ಪ್ರಿಯಕರ ನಾಗರಾಜ್ ನ ಸಹವಾಸ ಮಾತ್ರ ಬಿಟ್ಟಿರಲಿಲ್ಲ. ಇದರಿಂದ ಅಸಮಧಾನಗೊಂಡಿದ್ದ ವೆಂಕಟೇಶ್ ಪತ್ನಿಗೆ ಬುದ್ಧಿವಾದ ಹೇಳಿದ್ದನು. ಇದರಿಂದ ಆಕ್ರೋಶಗೊಂಡ ಲಕ್ಷ್ಮಿ ತನ್ನ ಪ್ರಿಯಕರ ನಾಗರಾಜನ ಜೊತೆ ಸೇರಿ ಗಂಡನನ್ನು ಕೊಲೆಗೈದು ಶವ ಸುಟ್ಟು ಸಾಕ್ಷಿಗಳಿಲ್ಲದ ಹಾಗೆ ಮಾಡಿದ್ದಳು ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
2018ರ ಜೂಲೈ 28 ರಂದು ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ನಂಧಿಗಿರಿಧಾಮದ ಕಣಿವೆ ಬಸವಣ್ಣ ದೇವಸ್ಥಾನದ ಬಳಿಯ ಅರಣ್ಯದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ದೊರೆತಿತ್ತು. ಬಳಿಕ ನಂಧಿಗಿರಿಧಾಮ ಠಾಣೆ ಪೋಲಿಸರು ಶವದ ಮೂಳೆಗಳನ್ನು ಆಯ್ದುಕೊಂಡು ಬಂದು, ನಾಪತ್ತೆ ಆದ ವ್ಯಕ್ತಿಗಳ ತನಿಖೆ ನಡೆಸಿದಾಗ ಪತ್ತೆಯಾಗಿದೆ. ಆಗ ವೆಂಕಟೇಶ್ ಕೊಲೆಯಾಗಿದ್ದಾನೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.