ಚಿಕ್ಕಬಳ್ಳಾಪುರದ ವ್ಯಕ್ತಿ ಮೃತಪಟ್ಟಿದ್ದು, ಕೊರೊನಾ ಲಸಿಕೆ ಪಡೆದಿದ್ದರಿಂದಲ್ಲ
ಚಿಕ್ಕಬಳ್ಳಾಪುರ,ಫೆಬ್ರವರಿ 23: ಚಿಕ್ಕಬಳ್ಳಾಪುರದ ವ್ಯಕ್ತಿ ಕೊರೊನಾ ಲಸಿಕೆ ಪಡೆದಿದ್ದರಿಂದ ಮೃತಪಟ್ಟಿಲ್ಲ, ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳಿತ್ತು ಎಂದು ಜಯದೇವ ನಿರ್ದೇಶಕ ಡಾ. ಮಂಜುನಾಥ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರು ಕೋವಿಡ್-19 ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದರು. ಕೋವಿಡ್-19 ಲಸಿಕೆ ಪಡೆದ ನಂತರ ಮೃತಪಟ್ಟ 4 ನೇ ವ್ಯಕ್ತಿ ಇವರಾಗಿದ್ದರಿಂದ ಸಹಜವಾಗಿಯೇ ಲಸಿಕೆ ಕುರಿತ ಆತಂಕ ಹೆಚ್ಚಾಗಿತ್ತು.
ಮಹಾರಾಷ್ಟ್ರದ ಅಮರಾವತಿಯಲ್ಲಿ ವಾರಾವಧಿ ಲಾಕ್ಡೌನ್ ಜಾರಿ
"ರೋಗಿಗೆ ಆರೋಗ್ಯದ ಹಲವು ಸಮಸ್ಯೆಗಳಿತ್ತು. ಫೆ.10 ರಂದು ತೀವ್ರವಾದ ಹೃದಯಾಘಾತಕ್ಕೆ ಒಳಗಾಗಿದ್ದರು. ರಕ್ತ ಹೆಪ್ಪುಗಟ್ಟಿರುವುದನ್ನು ಕರಗಿಸುವುದಕ್ಕಾಗಿ ಔಷಧವನ್ನು ನೀಡಿ, ಆಂಜಿಯೋಗ್ರಾಮ್ ಕೂಡ ಮಾಡಲಾಗಿತ್ತು. ಬಳಿಕ ಜಯದೇವ ಆಸ್ಪತ್ರೆಯಲ್ಲಿ ECHO ಪರೀಕ್ಷೆಗೊಳಪಡಿಸಿದಾಗ ಹೃದಯ ಕಡಿಮೆ ಕೆಲಸ ಮಾಡುತ್ತಿರುವುದು ಕಂಡುಬಂದಿತ್ತು. ಅಷ್ಟೇ ಅಲ್ಲದೇSevere Caortic Stenosis ಸಮಸ್ಯೆ ಇರುವುದೂ ಸಹ ಬೆಳಕಿಗೆ ಬಂದಿತ್ತು ಎಂದು ಡಾ. ಮಂಜುನಾಥ್ ಹೇಳಿದ್ದಾರೆ.
ವ್ಯಕ್ತಿಗೆ ಎದೆನೋವು ಕಾಣಿಸಿಕೊಂಡಿತ್ತು
ಚಿಕ್ಕಬಳ್ಳಾಪುರದಲ್ಲಿ ಜಲಸಂಪನ್ಮೂಲ ಇಲಾಖೆ ಇಲಾಖೆಯಲ್ಲಿ ವಾಲ್ವ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ 56 ವರ್ಷದ ವ್ಯಕ್ತಿಗೆ ಫೆ.19 ರಂದು ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಆತ ಮೃತಪಟ್ಟಿದ್ದರು.
ರಾಜ್ಯದಲ್ಲಿ ಶೇ.62 ರಷ್ಟು ಕೊರೊನಾ ಲಸಿಕೆ
ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು (ಶೇ.79 ರಷ್ಟು) ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ ನಂತರದ ಸ್ಥಾನದಲ್ಲಿ ಶೇ.76 ರಷ್ಟು ಲಸಿಕೆ ಪಡೆದಿರುವ ಚಿಕ್ಕಮಗಳೂರು ಜಿಲ್ಲೆ ಇದೆ.ಇದೇ ವೇಳೆ ರಾಜ್ಯದಲ್ಲಿ ಶೇ.62 ರಷ್ಟು ಕೊರೊನಾ ಲಸಿಕೆಯನ್ನು ನೀಡಲಾಗಿದೆ. 11 ಲಕ್ಷ ಆರೋಗ್ಯ ಹಾಗೂ ಮುನ್ನೆಲೆ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದ್ದು ಎರಡೂ ಡೋಸ್ ಗಳನ್ನು ಪೂರ್ಣಗೊಳಿಸಲಾಗಿದೆ.
ಫೆ.10ರಂದು ಕೊರೊನಾ ಲಸಿಕೆ ಪಡೆದಿದ್ದರು
ಫೆ.10 ರಂದು ಕೋವಿಡ್-19 ಗೆ ಕೋವಿಶೀಲ್ಡ್ ಲಸಿಕೆಯನ್ನು ಪಡೆದ ನಂತರ ಈ ವ್ಯಕ್ತಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಆತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಫೆ.18 ರಂದು ಜಯದೇವಾಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಸರ್ಜರಿ ಮಾಡುವಂತಿರಲಿಲ್ಲ
ಇದು ಅತಿ ಅಪಾಯದ ಪ್ರಕರಣವಾಗಿದ್ದರಿಂದ ಸರ್ಜರಿ ಮಾಡುವಂತಿರಲಿಲ್ಲ. ಶೇ.100 ರಷ್ಟು ಇದು ಕೋವಿಡ್-19 ಲಸಿಕೆಯ ಕಾರಣದಿಂದಾಗಿ ಉಂಟಾಗಿದ್ದಲ್ಲ ಎಂದು ಅವರು ಹೇಳಿದ್ದಾರೆ. ಮೃತಪಟ್ಟ ವ್ಯಕ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಮಧುಮೇಹ ಇತ್ತು. ಆದರೆ ಇದು ಆತನಿಗೆ ತಿಳಿದಿರಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.