ಚಿಕ್ಕಬಳ್ಳಾಪುರ ಎಲೆಕ್ಟ್ರಿಷಿಯನ್ ಗೆ 'ಇಟಲಿ ಗೆಳತಿ'ಯಿಂದ 33 ಲಕ್ಷ ವಂಚನೆ
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 20: ಗೆಳತಿಯನ್ನು ಮದುವೆಯಾಗಿ, ಇಟಲಿಯಲ್ಲಿ ಸಂತೋಷವಾಗಿ ಜೀವನ ನಡೆಸುವ ಕನಸು ಕಂಡಿದ್ದ ಚಿಕ್ಕಬಳ್ಳಾಪುರದ 45 ವರ್ಷದ ಎಲೆಕ್ಟ್ರಿಷಿಯನ್ ಗೆ 33 ಲಕ್ಷ ರುಪಾಯಿ ವಂಚನೆಯಾಗಿದೆ. ಇದೀಗ ಈ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾರೆ. ಚಿಕ್ಕಬಳ್ಳಾಪುರದ ಟೀಚರ್ಸ್ ಕಾಲೋನಿಯ ಆರ್. ಕೆ. ಮುನಿರಾಜ ಮೋಸ ಹೋದವರು.
ಸಿಹಿಯಾದ ಮಾತುಗಳಿಂದ ಬಲೆಗೆ ಕೆಡವಿಕೊಂಡ ವಂಚಕಿ ಸಾಲಕ್ಕೆ ಸಿಲುಕಿಸಿದಳು ಎಂದು ಪರಿತಪಿಸುತ್ತಿದ್ದಾರೆ ಮುನಿರಾಜ. ಪತ್ನಿ ಜತೆಗೆ ವಿಚ್ಛೇದನ ಆದ ಮೇಲೆ ವೈವಾಹಿಕ (ಮ್ಯಾಟ್ರಿಮೋನಿ) ವೆಬ್ ಸೈಟ್ ನಲ್ಲಿ ಮುನಿರಾಜ ನೋಂದಣಿ ಮಾಡಿಕೊಂಡಿದ್ದರು. ಮುನಿರಾಜ ಅವರಿಗೆ ದಕ್ಷ ಪಟೇಲ್ ಹೆಸರಿನಲ್ಲಿ ಆನ್ ಲೈನ್ ನಲ್ಲಿ ಪರಿಚಯ ಮಾಡಿಕೊಂಡಿದ್ದಾಳೆ.
ಸ್ವಸಹಾಯ ಸಂಘಗಳ ಸಾಲದ ಹೆಸರಿನಲ್ಲಿ 17 ಲಕ್ಷ ರು. ವಂಚನೆ; ವಂಚಕನ ಬಂಧನ
ನಿರಂತರವಾಗಿ ಚಾಟಿಂಗ್ ನಡೆಸಿದ ಮೇಲೆ ಮುನಿರಾಜ ಅವರನ್ನು ಮದುವೆ ಆಗುವುದಾಗಿ ದಕ್ಷ ಆಸಕ್ತಿ ತೋರಿಸಿದ್ದಾಳೆ. ''ನಮ್ಮಿಬ್ಬರ ಮದುವೆಗೆ ತಂದೆ- ತಾಯಿಯನ್ನು ಒಪ್ಪಿಸ್ತೀನಿ. ನಾವು ತುಂಬ ಶ್ರೀಮಂತರು. ಭಾರತಕ್ಕೆ ನಾನು ಬರುವುದಕ್ಕೆ ಮುಂಚೆ ನಿಮ್ಮ ಖಾತೆಗೆ ಹದಿನೈದು ಕೋಟಿ ಹಣ ಹಾಕ್ತೀನಿ" ಎಂದು ಕೂಡ ಹೇಳಿದ್ದಾಳೆ.
"ನಾನು ಒಂದೂವರೆ ಕೋಟಿ ರುಪಾಯಿಯಷ್ಟು ಹಣವನ್ನು ವಿದೇಶೀ ಕರೆನ್ಸಿಯಲ್ಲಿ ತೆಗೆದುಕೊಂಡು ಭಾರತಕ್ಕೆ ಬರುತ್ತಿದ್ದೇನೆ" ಎಂದು ಸೆಪ್ಟೆಂಬರ್ ಎಂಟನೇ ತಾರೀಕು ಮುನಿರಾಜ ಅವರಿಗೆ ಹೇಳಿದ್ದಾಳೆ. ಆ ನಂತರ ಕರೆ ಮಾಡಿದ ಆಕೆ, ದೊಡ್ಡ ಮೊತ್ತದ ಹಣದ ಜತೆಗೆ ಕಸ್ಟಮ್ಸ್ ಅಧಿಕಾರಿಗಳು ನನ್ನನ್ನು ವಶಕ್ಕೆ ಪಡೆದಿದ್ದಾರೆ. ಕ್ಲಿಯರೆನ್ಸ್ ಸರ್ಟಿಫಿಕೇಟ್ ತೆಗೆದುಕೊಳ್ಳುವುದಕ್ಕೆ ಹಣ ನೀಡಬೇಕಿದೆ. ಅದಕ್ಕೆ ಭಾರತೀಯ ರುಪಾಯಿ ಬೇಕು ಎಂದು ಆಕೆ ಹೇಳಿದ್ದಾಳೆ.
ಆ ನಂತರ ಮುನಿರಾಜ ಅವರು ಸಾಲ ಮಾಡಿ, ತಾವು ಉಳಿತಾಯ ಮಾಡಿದ್ದ ಐದು ಲಕ್ಷ ಡ್ರಾ ಮಾಡಿ ಒಟ್ಟು ಮೂವತ್ಮೂರು ಲಕ್ಷ ರುಪಾಯಿಯನ್ನು ಆಕೆ ಹೇಳಿದ ಬ್ಯಾಂಕ್ ಖಾತೆಗಳಿಗೆ ಮುನಿರಾಜ ಡೆಪಾಸಿಟ್ ಮಾಡಿದ್ದಾರೆ. ಆ ನಂತರ ಮಹಿಳೆಯ ಫೋನ್ ರಿಂಗಣಿಸುವುದೇ ನಿಂತಿದೆ. ಮುನಿರಾಜ ಅವರು ಬ್ಯಾಂಕ್ ನ ಬ್ರ್ಯಾಂಚ್ ಮ್ಯಾನೇಜರ್ ನ ಭೇಟಿ ಆದಾಗ, "ನೀವು ಮೋಸ ಹೋಗಿದ್ದೀರಿ" ಎಂದು ಅವರು ತಿಳಿಸಿದ್ದಾರೆ.
"ತಿಂಗಳಿಗೆ ಒಂದು ಲಕ್ಷ ರುಪಾಯಿ ಬಡ್ಡಿಗೆ ಸಾಲ ತಂದಿದ್ದೆ. ಇದನ್ನು ಮೂರ್ಖತನ ಅನ್ನಿ ಅಥವಾ ದುರಾಸೆ ಅನ್ನಿ. ಆದರೆ ನಾನು ಎಲ್ಲ ಕಳೆದುಕೊಂಡಿದ್ದೇನೆ. ಅವಳು ಬಹಳ ಒಳ್ಳೆಯವಳು ಅಂದುಕೊಂಡು ಹರಕು- ಮುರುಕು ಇಂಗ್ಲಿಷ್ ನಲ್ಲೇ ಅವಳ ಜತೆ ಮಾತನಾಡುತ್ತಿದ್ದೆ. ಅಪರಿಚಿತರ ಜತೆ ಆನ್ ಲೈನ್ ನಲ್ಲಿ ಮಾತನಾಡುವಾಗ, ವ್ಯವಹರಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು" ಎನ್ನುತ್ತಾರೆ ಮುನಿರಾಜ.