ಚಿಕ್ಕಬಳ್ಳಾಪುರ ಸ್ಪೋಟ ಪ್ರಕರಣ: ಫೆ.7ರಂದೇ ದಾಖಲಾಗಿತ್ತು ಎಫ್ಐಆರ್!
ಚಿಕ್ಕಬಳ್ಳಾಪುರ, ಫೆಬ್ರವರಿ 23: ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲು ಕ್ವಾರಿ ಮಾಲೀಕ ರಾಘವೇಂದ್ರ ರೆಡ್ಡಿ, ಮೂರ್ತಿ ಗಂಗೋಜಿ ರಾವ್ ಎಂಬುವವರ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ಅವರೇ ದೂರು ದಾಖಲಿಸಿದ್ದರು ಎಂಬ ಮಾಹಿತಿ ದೊರೆತಿದೆ.
ಶ್ರೀ ಶಿರಡಿ ಸಾಯಿ ಅಗ್ರಿಗೇಟ್ ಕ್ವಾರಿ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ದೂರು ದಾಖಲಿಸಿಕೊಂಡಿದ್ದರು. ಅನುಮತಿ ಇಲ್ಲದೆ ಅಕ್ರಮವಾಗಿ ಅಪಾಯಕಾರಿ ಸ್ಪೋಟಕಗಳನ್ನು ಸ್ಪೋಟಿಸಲು ಮಾಹಿತಿ ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿ, ನಂತರ ಇನ್ಸ್ ಪೆಕ್ಟರ್ ದೂರು ದಾಖಲಿಸಿದ್ದರು ಎಂದು ತಿಳಿದುಬಂದಿದೆ.
ನಾಲಾಯಕ್ ಗಳು ನೀವು ಕೆಲಸ ಮಾಡಲಿಕ್ಕೆ: ಅಧಿಕಾರಿಗಳಿಗೆ ಬೆವರಿಳಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗಂಗೋಜಿ ರಾವ್ ಅಪಾಯಕಾರಿ ಸ್ಪೋಟಕಗಳನ್ನು ಸರಬರಾಜು ಮಾಡುತ್ತಿದ್ದರು. ಸ್ಪೋಟಕದ ಒಪ್ಪಂದ ಪತ್ರಗಳನ್ನು ತರುವಂತೆ ಹೇಳಿದಾಗ ಗಂಗೋಜಿ ರಾವ್ ಅವರು ಸ್ಥಳದಿಂದ ಪರಾರಿಯಾಗಿದ್ದರು.
14 ರಂಧ್ರಗಳಿಂದ 125 ಗ್ರಾಂ ತೂಕ 6 ಇಂಚು ಉದ್ದವಿರುವ 14 ಜಿಲೆಟಿನ್ ಜೆಲ್ ಟ್ಯೂಬ್ ಗಳು ಪೊಲೀಸರು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ಹಾಗೆಯೇ 17 ಎಲೆಕ್ಟ್ರಿಕ್ ಡಿಟೋನೇಟರ್ ಗಳನ್ನು ಕೂಡ ವಶಕ್ಕೆ ಪಡೆದಿದ್ದರು.
ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕಳೆದ ಫೆ.7 ರಂದೇ ಪೊಲೀಸ್ ಇನ್ಸ್ ಪೆಕ್ಟರ್ ದೂರು ದಾಖಲಿಸಿದ್ದರು. ಸ್ವತಃ ಪೊಲೀಸರೇ ದೂರು ನೀಡಿದರೂ, ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ್ಯ ತೋರಿತ್ತು ಎಂಬ ಆರೋಪ ಕೇಳಿಬಂದಿದೆ. ದಾಳಿ ವೇಳೆ ಈ ಹಿಂದೆಯೂ ಬಂಡೆಗಳನ್ನು ಒಡೆದಿರುವ ನಿಶಾನೆ ಪತ್ತೆಯಾಗಿದೆ.