ಚಿಕ್ಕಬಳ್ಳಾಪುರ: ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲು
ಚಿಕ್ಕಬಳ್ಳಾಪುರ, ನವೆಂಬರ್ 19: ಚಿಕ್ಕಬಳ್ಳಾಪುರ ಕ್ಷೇತ್ರ ಉಪಚುನಾವಣೆ ಕಣದಲ್ಲಿ ಧಿಡೀರ್ ಬದಲಾವಣೆಯೊಂದು ನಡೆದಿದ್ದು, ಜೆಡಿಎಸ್ ಅಭ್ಯರ್ಥಿಯೇ ಬದಲಾಗಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಹಿರಿಯ ಜೆಡಿಎಸ್ ಮುಖಂಡರಾದ ಕೆ.ಪಿ.ಬಚ್ಚೇಗೌಡ ಅವರು ಜೆಡಿಎಸ್ನ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ ಅವರ ನಾಮಪತ್ರ ತಿರಸ್ಕೃತಗೊಂಡ ಕಾರಣ ಜೆಡಿಎಸ್ನ ಅಭ್ಯರ್ಥಿ ಹಠಾತ್ತನೆ ಬದಲಾಗಿದ್ದಾರೆ.
ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ನಾಮಪತ್ರ ತಿರಸ್ಕಾರಗೊಳ್ಳುವ ಅಪಾಯದ ಮುನ್ಸೂಚನೆ ಇದ್ದ ಕಾರಣ, ಜೆಡಿಎಸ್ನ ರಾಧಾಕೃಷ್ಣ ಸಹ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದೀಗ ಕೆ.ಪಿ.ಬಚ್ಚೇಗೌಡ ನಾಮಪತ್ರ ತಿರಸ್ಕಾರಗೊಂಡಿರುವ ಕಾರಣ ರಾಧಾಕೃಷ್ಣ ಚಿಕ್ಕಬಳ್ಳಾಪುರ ಕ್ಷೇತ್ರದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಆಗಿದ್ದಾರೆ.
ಕೆ.ಪಿ.ಬಚ್ಚೇಗೌಡ ಅವರು ಹಿರಿಯ ಜೆಡಿಎಸ್ ಮುಖಂಡರಾಗಿದ್ದು, ಈ ಹಿಂದೆ ಎರಡು ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಈ ಬಾರಿ ಗೆಲ್ಲುವ ನಿರೀಕ್ಷೆ ಇತ್ತು, ಆದರೆ ನಾಮಪತ್ರವೇ ತಿರಸ್ಕಾರವಾಗಿರುವ ಕಾರಣ ನಿರಾಸೆ ಅನುಭವಿಸಿದ್ದಾರೆ.
ನಿನ್ನೆಯೇ ಹೇಳಿದ್ದರು ಕುಮಾರಸ್ವಾಮಿ
ನಿನ್ನೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ, ಕೆ.ಪಿ.ಬಚ್ಚೇಗೌಡ ಮತ್ತು ರಾಧಾಕೃಷ್ಣ ಇಬ್ಬರನ್ನೂ ಜತೆಯಾಗಿ ಕರೆದುಕೊಂಡು ಸಮಾವೇಶ ಮಾಡಿದ್ದರು. ಈ ಸಮಯ ಮಾತನಾಡಿದ್ದ ಕುಮಾರಸ್ವಾಮಿ, 'ಇಬ್ಬರು ನಾಮಪತ್ರ ಸಲ್ಲಿಸಿರುವ ಬಗ್ಗೆ ಕ್ಷೇತ್ರದ ಜನರು ಗೊಂದಲಕ್ಕೆ ಒಳಗಾಗುವುದು ಬೇಡ, ಕೆ.ಪಿ.ಬಚ್ಚೇಗೌಡ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ. ಇಬ್ಬರಲ್ಲಿ ಒಬ್ಬರು ನಮ್ಮ ಅಧಿಕೃತ ಅಭ್ಯರ್ಥಿ ಆಗಲಿದ್ದಾರೆ' ಎಂದಿದ್ದರು.
ಅನಿತಾ ಕುಮಾರಸ್ವಾಮಿ ಹತ್ತಿರ ಸಂಬಂಧಿ ರಾಧಾಕೃಷ್ಣ
ರಾಧಾಕೃಷ್ಣ ಅವರು ಕುಮಾರಸ್ವಾಮಿ ಅವರ ಸಂಬಂಧಿಯಾಗಿದ್ದು, ಅನಿತಾ ಕುಮಾರಸ್ವಾಮಿ ಅವರ ಸಹೋದರ ಸಂಬಂಧಿ ಆಗಿದ್ದಾರೆ. ಕೆ.ಪಿ.ಬಚ್ಚೇಗೌಡ ಅವರ ನಾಮಪತ್ರ ತಿರಸ್ಕಾರ ಆಗುವ ಭೀತಿ ಇದ್ದ ಕಾರಣದಿಂದ ರಾಧಾಕೃಷ್ಣಗೆ ನಾಮಪತ್ರ ಸಲ್ಲಿಸಲು ಕುಮಾರಸ್ವಾಮಿ ಅವರೇ ಸೂಚಿಸಿದ್ದರು ಎನ್ನಲಾಗುತ್ತಿದೆ.
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ 'ಅನರ್ಹ' ಸುಧಾಕರ್ ಆಡಿಯೋ ಬಹಿರಂಗ
ಬಿ-ಫಾರಂ ನಲ್ಲಿ ಇಬ್ಬರ ಹೆಸರೂ ನಮೂದು
ಕೆ.ಪಿ.ಬಚ್ಚೇಗೌಡ ಅವರಿಗೆ ಕೈಕೊಟ್ಟ ಅದೃಷ್ಟ ರಾಧಾಕೃಷ್ಣ ಅವರ ಕೈಹಿಡಿದಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರ ಉಪಚುನಾವಣೆಯಲ್ಲಿ ಜೆಡಿಎಸ್ ಮತಗಳನ್ನು ಹೇಗೆ ತೆಕ್ಕೆಗೆ ಹಾಕಿಕೊಳ್ಳುತ್ತಾರೆ ಎಂಬುದು ಕಾದು ನೋಡಬೇಕಿದೆ. ಬಿ-ಫಾರಂ ನಲ್ಲಿ ಕೆ.ಪಿ.ಬಚ್ಚೇಗೌಡ ಮತ್ತು ರಾಧಾಕೃಷ್ಣ ಇಬ್ಬರ ಹೆಸರನ್ನೂ ಬರೆಯಲಾಗಿತ್ತು. ಹಾಗಾಗಿ ರಾಧಾಕೃಷ್ಣ ಅವರು ಜೆಡಿಎಸ್ ಚಿಹ್ನೆಯ ಅಡಿಯಲ್ಲಿಯೇ ಚುನಾವಣೆ ಎದುರಿಸಲಿದ್ದಾರೆ.
15 ನಾಮಪತ್ರದಲ್ಲಿ 6 ತಿರಸ್ಕೃತ
ಚಿಕ್ಕಬಳ್ಳಾಪುರ ಕ್ಷೇತ್ರ ಉಪಚುನಾವಣೆಗೆ 15 ನಾಮಪತ್ರಗಳು ಸಲ್ಲಿಕೆ ಆಗಿದ್ದು, ಇವುಗಳಲ್ಲಿ 9 ನಾಮಪತ್ರಗಳು ಕ್ರಮಬದ್ಧವಾಗಿದೆ. 6 ನಾಮಪತ್ರಗಳು ತಿರಸ್ಕಾರಗೊಂಡಿವೆ. ಸುಧಾಕರ್ ಮತ್ತು ಕಾಂಗ್ರೆಸ್ ನ ಆಂಜಿನಪ್ಪ ಅವರ ನಾಮಪತ್ರ ಕ್ರಮಬದ್ಧವಾಗಿದೆ.
ಉಪ ಚುನಾವಣೆ; ಜೆಡಿಎಸ್ ಪಕ್ಷದ ಅಚ್ಚರಿಯ ನಡೆ!
ಚಿಕ್ಕಬಳ್ಳಾಪುರದಲ್ಲಿ ತ್ರಿಕೋನ ಸ್ಪರ್ಧೆ
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 'ಅನರ್ಹ' ಸುಧಾಕರ್ ಕಣಕ್ಕೆ ಇಳಿದಿದ್ದಾರೆ. ಇವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ 45,177 ಮತಗಳ ಬೃಹತ್ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಅವರಿಗೆ ಗೆಲುವು ಅಷ್ಟು ಸುಲಭವಿಲ್ಲ. ಕಾಂಗ್ರೆಸ್ನಿಂದ ಆಂಜಿನಪ್ಪ ಕಣಕ್ಕೆ ಇಳಿದಿದ್ದು, ಅವರಿಗೆ ನವೀನ್ ಕಿರಣ್ ಜೊತೆಯಾಗಿದ್ದಾರೆ. ಜೆಡಿಎಸ್ನಿಂದ ರಾಧಾಕೃಷ್ಣ ಕಣಕ್ಕೆ ಇಳಿದಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.