ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ ಸಿಐಡಿ ತನಿಖೆಗೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ!
ಬೆಂಗಳೂರು, ಫೆ. 23: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಹಿರೇನಾಗವೇಲಿಗೆ ಬಳಿಯ ಸ್ಪೋಟ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದ್ದ ದುರಂತ ಮರೆಯುವ ಮುನ್ನ ರಾಜ್ಯದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ರಾಜ್ಯದಲ್ಲಿನ ಕ್ವಾರಿ ಮಾಲೀಕರ ಕುರಿತು ರಾಜ್ಯ ಸರ್ಕಾರ ಮೃಧು ಧೋರಣೆ ತಾಳಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಹೀಗಾಗಿ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟಗಳ ತವರಾಗಿದ್ದು ಹೇಗೆ ?
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಪರಿಶೀಲನೆ ನಡೆಸಿದರು. ಬಳಿಕ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದರು. ಘಟನೆಗೆ ನಿಜವಾದ ಕಾರಣಗಳೇನು? ರಾತ್ರಿ ವೇಳೆ ಈ ಅಜಾಗರೂಕತೆ ಸಂಭವಿಸಿದ್ದು ಹೇಗೆ? ಎಂಬುದರ ಬಗ್ಗೆ ಗೃಹಸಚಿವರು ಮಾಹಿತಿ ಪಡೆದುಕೊಂಡರು. ಜೊತೆಗೆ ದುರ್ಘಟನೆಯಲ್ಲಿ ಮೃತ ಪಟ್ಟವರ ಆತ್ಮಕ್ಕೆ ಆತ್ಮಕ್ಕೆ ಅವರು ಶಾಂತಿ ಕೋರಿದ್ದಾರೆ.
ಬಳಿಕ ಮಾತನಾಡಿರುವ ಬಸವರಾಜ್ ಬೊಮ್ಮಾಯಿ ಅವರು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ತಿಖೆಯನ್ನು ಸಿಐಡಿಗೆ ವಹಿಸಿದ್ದೇನೆ. ತನಿಖಾ ವರದಿ ಬಂದ 24 ಗಂಟೆಗಳಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸುತ್ತೇನೆ. ನನ್ನ ಇಲಾಖೆಯಿಂದಲೇ ತನಿಖೆ, ಕ್ರಮ ಆರಂಭಿಸುತ್ತೇನೆ ಎಂದು ಖಡಕ್ ಹೇಳಿಕೆ ನೀಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು, ಕ್ವಾರಿಯ 3 ಮಾಲೀಕರನ್ನು ತಕ್ಷಣ ಬಂಧಿಸಿ ತನಿಖೆ ನಡೆಸಲು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.
Recommended Video