ಎಂಟಿಬಿ ನಾಗರಾಜ್ ಮತ್ತು ಬಿಜೆಪಿ ಗೆ ಸವಾಲು ಹಾಕಿದ ಸಂಸದ ಬಿ.ಎನ್.ಬಚ್ಚೇಗೌಡ
ಚಿಕ್ಕಬಳ್ಳಾಪುರ, ಜನವರಿ 20: ಮಗ ಶರತ್ ಬಚ್ಚೇಗೌಡ ವಿರುದ್ಧ ಸೋತಿರುವ ಬಿಜೆಪಿಯ ಎಂಟಿಬಿ ನಾಗರಾಜ್ ಅವರ ಕುರಿತು ಮಾತನಾಡುತ್ತಾ, ಬಿಜೆಪಿ ಪಕ್ಷಕ್ಕೂ ಪರೋಕ್ಷವಾಗಿ ಸಂಸದ ಬಿ.ಎನ್.ಬಚ್ಚೇಗೌಡ ಸವಾಲು ಹಾಕಿದ್ದಾರೆ.
Recommended Video
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಎಂಟಿಬಿ ನಾಗರಾಜ್ ನನ್ನ ಮೇಲೆ ಪದೇ-ಪದೇ ದೂರು ಕೊಡುತ್ತಿದ್ದಾನೆ, ಆದರೆ ಅದಕ್ಕೆಲ್ಲಾ ಹೆದರುವನಲ್ಲ, ನನ್ನ ವಿರುದ್ಧ ಅದೇನು ಕ್ರಮಕೈಗೊಳ್ಳುತ್ತಾರೋ ನಾನೂ ನೋಡುತ್ತೇನೆ' ಎಂದು ಬಿಜೆಪಿ ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಸವಾಲು ಹಾಕಿದ್ದಾರೆ.
'ನಾನು ರಾಜಕಾರಣಕ್ಕೆ ಹೊಸಬನಲ್ಲ, ಎಂಟಿಬಿ ಎಷ್ಟು ಬೇಕಾದರೂ ದೂರು ಕೊಡಲಿ, ಅಂತಹವನ್ನೆಲ್ಲಾ ನಾನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ, ಅವನದ್ದು ಏನೇ ಇದ್ದರು ಅವನ ಮನೆಯಲ್ಲಿ ಇಟ್ಟುಕೊಳ್ಳಲಿ' ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
'ನನ್ನ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ತೆಗೆದುಕೊಳ್ಳಲಿ, ಪಕ್ಷದಿಂದ ಉಚ್ಛಾಟಿಸಬಹುದು ಸಂಸದ ಸ್ಥಾನದಿಂದ ಅಲ್ಲ, ಯಾರು ಏನು ಮಾಡುತ್ತಾರೋ ಮಾಡಲಿ' ಎಂದು ಅವರು ಪಕ್ಷಕ್ಕೂ ಪರೋಕ್ಷವಾಗಿ ಸವಾಲು ಹಾಕಿದರು.
'ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಕೆಲವರು ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋತ ಬಳಿಕವೂ ಮತದಾರರ ಬಗ್ಗೆ ಮಾತನಾಡುತ್ತಿದ್ದಾರೆ, ಯಾರೇ ಆಗಲಿ ಇದು ಒಳ್ಳೆಯ ಬೆಳವಣಿಗೆ ಅಲ್ಲ' ಎಂದು ಬಚ್ಚೇಗೌಡ ಹೇಳಿದ್ದಾರೆ.